ಜ್ವರವಿದ್ದರೂ ಚುನಾವಣಾ ಪ್ರಚಾರ ಮಾಡಿರುವುದು ಸಿಎಂ ಬೇಜವಾಬ್ದಾರಿತನಕ್ಕೆ ಸಾಕ್ಷಿ: ಕಾಂಗ್ರೆಸ್ ಕಿಡಿ

ಬೆಂಗಳೂರು: ಕೊರೋನಾ ಸೋಂಕು ಹೆಚ್ಚುತ್ತಿರುವ ಈ ಕಠಿಣ ಪರಿಸ್ಥಿತಿಯಲ್ಲಿ ಜ್ವರವಿದ್ದರೂ ಚುನಾವಣಾ ಪ್ರಚಾರ ಮಾಡಿರುವುದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ಕಿಡಿ ಕಾರಿದೆ.

ಅತ್ತ ಸಿಎಂ ಬಿಎಸ್ ವೈ ಅವರಿಗೆ 2ನೇ ಬಾರಿಗೆ ಕೋವಿಡ್ ಸೋಂಕು ತಗುಲಿ ಮಣಿಪಾಲ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಇತ್ತ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಮತ್ತು ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಕಿಡಿಕಾರಿದೆ. ಕೊರೋನಾ ಸೋಂಕು ಹೆಚ್ಚುತ್ತಿರುವ ಈ ಕಠಿಣ ಪರಿಸ್ಥಿತಿಯಲ್ಲಿ ಜ್ವರವಿದ್ದರೂ ಚುನಾವಣಾ ಪ್ರಚಾರ ಮಾಡಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿ. ಈ ಹಿಂದೆ ಕೊರೋನಾ ಸೋಂಕಿತರಾಗಿದ್ದ ರಮೇಶ್ ಜಾರಕಿಹೊಳಿ ಅವರನ್ನು ಚುನಾವಣಾ ಪ್ರಚಾರಕ್ಕೆ ಆಹ್ವಾನಿಸಿದ್ದರು. ಇಂತಹ  ಸರ್ಕಾರದಿಂದ ಸೋಂಕು ನಿಯಂತ್ರಣ ಸಾಧ್ಯವೇ? ಎಂದು ಪ್ರಶ್ನೆ ಮಾಡಿದೆ.

ಲಸಿಕೆಗಳ ಪರಿಣಾಮದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಕ್ಕೆ ಇಂದು ಪುರಾವೆ ಸಿಕ್ಕಿದೆಯಲ್ಲ. ಲಸಿಕೆಗಳು ಪರಿಣಾಮಕಾರಿಯಾಗಿದ್ದರೆ ಲಸಿಕೆ ಪಡೆದಿದ್ದ ಯಡಿಯೂರಪ್ಪ ಅವರಿಗೆ ಸೋಂಕು ತಗುಲಿದ್ದು ಹೇಗೆ, ಏಕೆ? ಲಸಿಕೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿ ಸೋಂಕಿನ ಪ್ರಭಾವ ಕಡಿಮೆಗೊಳಿಸುತ್ತದೆಯೇ ಹೊರತು  ಅದೇ ಮದ್ದಾಗುವುದಿಲ್ಲ ಎಂದು ಹೇಳಿದೆ.

ಅಂತೆಯೇ, ‘ರಾಜ್ಯಾದ್ಯಂತ ಲಸಿಕೆ ಕೊರತೆಯಾಗಿರುವ ವರದಿಗಳು ಪ್ರತಿ ದಿನವೂ ಬರುತ್ತಿವೆ. ಆದರೂ ಆತ್ಮವಂಚನೆಯ ಸುಳ್ಳು ಹೇಳುವ ಬಿಜೆಪಿಗೆ ಕೊಂಚವೂ ಲಜ್ಜೆ ಇದ್ದಂತಿಲ್ಲ. ರಾಜ್ಯ ಸರ್ಕಾರಗಳಿಗೆ ಲಸಿಕೆಗಳನ್ನು ನೇರವಾಗಿ ಖರೀದಿಸುವ ಅನುಮತಿಯನ್ನು ಕೇಂದ್ರ ಏಕೆ ನೀಡುತ್ತಿಲ್ಲ? ಈ ಬಗ್ಗೆ ಧ್ವನಿ ಎತ್ತುವ  ಧೈರ್ಯ ಏಕೆ ತೋರುತ್ತಿಲ್ಲ ತಾವು? ಎಂದು ಪ್ರಶ್ನೆ ಮಾಡಿದೆ.

Leave a Reply

Your email address will not be published. Required fields are marked *

error: Content is protected !!