ಬ್ರಾಹ್ಮಣ ಮಹಾಸಭಾದ ರಜತೋತ್ಸವ: ಕೆ.ಪಿ ರಾವ್’ಗೆ ವಿಪ್ರ ಜ್ಞಾನಿ ಬಿರುದು

ಮಲ್ಪೆ ಎ.16: ಕೊಡವೂರು ಬ್ರಾಹ್ಮಣ ಮಹಾಸಭಾದ ರಜತೋತ್ಸವ ಕಾರ್ಯಕ್ರಮವನ್ನು 25 ಮಂದಿಯ ಶಂಖನಾದದೊಂದಿಗೆ, ವೇದಿಕೆಯಲ್ಲಿದ್ದ ಎಲ್ಲಾ ಅತಿಥಿಗಳು 24 ದೀಪಗಳನ್ನು ಬೆಳಗಿಸಿ, 25ನೇ ಬೆಳ್ಳಿ ದೀಪವನ್ನು ಪಲಿಮಾರು ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿಯವರು ಬೆಳಗಿಸಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಲಾಯಿತು.

ಬಳಿಕ ಆಶೀರ್ವಚನ ನೀಡಿ ಮಾಹಿತಿ ನೀಡಿದ ಅವರು, ಬ್ರಾಹ್ಮಣರಿಲ್ಲದೆ ಯಾವ ಕಾರ್ಯಕ್ರಮವೂ ಪ್ರಾರಂಭವಾಗುವುದಿಲ್ಲ ಮತ್ತು ಬ್ರಾಹ್ಮಣನಿಲ್ಲದ ಯಾವುದೇ ಕಾರ್ಯಕ್ರಮಕ್ಕೆ ಶೋಭೆ ಇರುವುದಿಲ್ಲ. ಬಹುಶಃ ಸಾಮೂಹಿಕ ಬ್ರಹ್ಮೋಪದೇಶವನ್ಮು ಪ್ರಥಮವಾಗಿ ಪ್ರಾರಂಭಿಸಿದ ಬ್ರಾಹ್ಮಣ ವಲಯ ಎಂದರೆ ಅದು ಕೊಡವೂರು ಬ್ರಾಹ್ಮಣ ಮಹಾಸಭಾ. ಕಳೆದ 24 ವರ್ಷಗಳಿಂದ ಲೋಕ ಕಲ್ಯಾಣಾರ್ಥ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸದಾ ಸಮಾಜ ಬಾಂಧವರ ಸೇವೆ ಮಾಡುತ್ತಾ ಇಂದು 25ನೆ ವರ್ಷಕ್ಕೆ ಪಾದಾರ್ಪಣೆ ಮಾಡುವ ಈ ಸಂದರ್ಭದಲ್ಲಿ ರಜತೋತ್ಸವವನ್ನು ಉದ್ಘಾಟಿಸಲು ತುಂಬಾ ಸಂತೋಷವಾಗುತ್ತದೆ ಎಂದು ಹೇಳಿದರು.

ಸಮಾರಂಭದಲ್ಲಿ ಖ್ಯಾತ ಭಾಷಾ ವಿಜ್ಞಾನಿ ಹಾಗೂ ಕನ್ನಡ ಗಣಕ ಕೀಲಿಮಣೆ ಕರ್ತೃ ಕೆ. ಪಿ. ರಾವ್ ಇವರಿಗೆ “ವಿಪ್ರ ಜ್ಞಾನಿ” ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು. ಈ ವೇಳೆ ಕೊಡವೂರು ಬ್ರಾಹ್ಮಣ ಮಹಾಸಭಾ ಪ್ರಾರಂಭವಾಗಲು ಮಾರ್ಗದರ್ಶನ ನೀಡಿದ ಹರಿದಾಸ ಉಪಾಧ್ಯಾಯ ಹಾಗೂ ಜಯರಾಮ ರಾವ್ ಮತ್ತು ಕೊಡವೂರು ಬ್ರಾಹ್ಮಣ ಮಹಾಸಭಾದ ಸ್ಥಾಪಕ ಕಾರ್ಯದರ್ಶಿ ಗೋವಿಂದ ಐತಾಳರನ್ನು ಗೌರವಿಸಲಾಯಿತು.  ಇದೇ ಸಂದರ್ಭದಲ್ಲಿ ರಜತೋತ್ಸವದ ಬಗ್ಗೆ ಮನವಿಯೊಂದನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಾಧಿಕಾರಿಗಳಾದ ಡಾ. ಭೀಮೇಶ್ವರ ಜೋಶಿ, ಕರ್ನಾಟಕ ಬ್ಯಾಂಕಿನ ಡಿ.ಜಿ.ಎಂ ಬಿ ಗೋಪಾಲಕೃಷ್ಣ ಸಾಮಗ, ಉಡುಪಿ ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ  ಮಂಜುನಾಥ ಉಪಾಧ್ಯಾಯ ಹಾಗೂ ವೇದಮೂರ್ತಿ ರಾಧಾಕೃಷ್ಣ ಉಪಾಧ್ಯಾಯ, ಕಂಬಳಕಟ್ಟ ಬಾಗವಹಿಸಿದ್ದರು.
ಈ ಸಂದರ್ಬ ಗೌರವಾಧ್ಯಕ್ಷ ಗುರುರಾಜ ರಾವ್ ಮತ್ತು ಕಾರ್ಯದರ್ಶಿ ಶ್ರೀನಿವಾಸ ಬಾಯರಿ, ಕೊಡವೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಾರಾಯಣ ಬಲ್ಲಾಳ್, ರಜತೋತ್ಸವದ ಕಾರ್ಯಾಧ್ಯಕ್ಷ ಮಂಜುನಾಥ ಭಟ್, ಪ್ರೊ. ಎಂ ಎಲ್ ಸಾಮಗ, ಪೂರ್ಣಿಮಾ ಜನಾರ್ಧನ್, ಕಿರಣ್ ರಾವ್, ರಾಜೇಶ್ರೀ ಪ್ರಸನ್ನ, ಸಂಚಾಲಕರಾದ ಸುಧಿರ್ ರಾವ್, ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ರಾವ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!