ಉಡುಪಿ: 2021ರ ಒಳಗೆ ನಗರದ 100 ಶೇ.ಮನೆಗೆ ವಿದ್ಯುತ್- ರಾಘವೇಂದ್ರ ಕಿಣಿ

ಉಡುಪಿ(ಉಡುಪಿ ಟೈಮ್ಸ್ ವರದಿ): ಆಸರೆ ಚಾರಿಟೇಬಲ್ ಟ್ರಸ್ಟ್ ಕಡಿಯಾಳಿ ಇದರ ಸಹಕಾರದೊಂದಿಗೆ ಅನೇಕ ಮನೆಗಳು ವಿದ್ಯುತ್ ಸಂಪರ್ಕ ಪಡೆಯುವಂತಾಗಿದೆ. ಈ ಮೂಲಕ ಅನೇಕರು ತಮ್ಮ ಜೀವನದ ವಿಶೇಷ ದಿನವನ್ನು ಮನೆ ಬೆಳಗುವ ಮೂಲಕ ಆಚರಿಸಿಕೊಳ್ಳುತ್ತಿದ್ದಾರೆ. ಅದರಂತೆ ದಲಿತ ಸಮುದಾಯದ ಕಲ್ಮಾಡಿ ಬಾಬು ಕೆ. ಅವರು ಕಳೆದ 80 ವರ್ಷಗಳಿಂದ ಪ್ಲಾಸ್ಟಿಕ್, ಕಲ್ಲಕಂಬ ತೆಂಗಿನ ತರಗೆಲೆಗಳಲ್ಲಿ ನಿರ್ಮಿಸಿದ್ದ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಇದೀಗ ಸ್ಥಳೀಯ ದಾನಿಗಳ ಸಹಕಾರದಿಂದ ರಚಿಸಿದ್ದ ಇವರ ನೂತನ ಮನೆ “ಅಯೋಧ್ಯೆ”ಗೆ ಆಸರೆ ಚಾರಿಟೇಬಲ್ ಟ್ರಸ್ಟ್ ಕಡಿಯಾಳಿ ಸಹಕಾರದೊಂದಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಮೂಲಕ ಮೂಡುಬೆಳ್ಳೆ ಶಾಂತೇರಿ ಕಾಮಾಕ್ಷಿ ಜನರಲ್ ಸ್ಟೋರ್ಸ್ನ ಅಶ್ವಿತ್ ನಾಯಕ್ ಮೂಡುಬೆಳ್ಳೆ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮತ್ತು ಆಸರೆ ಚಾರಿಟೇಬಲ್ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸು ಘರ್ ಘರ್ ಬಿಜಲಿ(ಮನೆಮನೆಗೆ ವಿದ್ಯುತ್) ಉಡುಪಿಯಲ್ಲಿ ಸಹೃದಯ ದಾನಿಗಳ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಿದೆ. 2021ರ ಒಳಗೆ ಉಡುಪಿ ನಗರದ 100 ಶೇಕಡ ಮನೆ ಮನೆಗೆ ವಿದ್ಯುತ್ ನೀಡಿ ದೇಶದ ಮೊತ್ತ ಮೊದಲ ಸಂಪೂರ್ಣ ವಿದ್ಯುತ್ ಹೊಂದಿದ ನಗರ ಮಾಡಲಾಗುವುದು ಎಂದು ಹೇಳಿದರು.

ಕಲ್ಮಾಡಿ ಬಾಬು ಕೆ ಅವರ ಮನೆಯ ವಿದ್ಯುತ್ ಸಂಪರ್ಕ ವ್ಯವಸ್ಥೆಯ ನಿರ್ವಹಣೆಯನ್ನು ಕಡಿಯಾಳಿಯ ಮಹಿಷಮರ್ದಿನಿ ಎಲೆಕ್ಟ್ರಿಕಲ್ಸ್  ಅಶ್ವತ್ಥ್  ದೇವಾಡಿಗ ನಿರ್ವಹಿಸಿದರು. ಈ ಸಂದರ್ಭದಲ್ಲಿ ಕಲ್ಮಾಡಿ ವಾರ್ಡಿನ ನಗರಸಭಾ ಸದಸ್ಯರಾದ ಸುಂದರ ಜೆ,ಕಲ್ಮಾಡಿ, ಆಸರೆ ಚಾರಿಟೇಬಲ್ ಟ್ರಸ್ಟಿನ ಕೋಶಾಧಿಕಾರಿ ಸತೀಶ್ ಕುಲಾಲ್, ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸದಸ್ಯರಾದ ರಾಕೇಶ್ ಜೋಗಿ,ರಂಜಿತ್ ಕಲ್ಮಾಡಿ, ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!