ಡಿಜಿಟಲ್ ಮೀಡಿಯಾಕ್ಕೆ ಕೇಂದ್ರ ಸರ್ಕಾರ ಅಂಕುಶ

ನವದೆಹಲಿ: ಡಿಜಿಟಲ್ ಮೀಡಿಯಾದಲ್ಲಿ ದ್ವೇಷ ಮತ್ತು ನಕಲಿ ಸುದ್ದಿಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ರೂಪಿಸಿದೆ. ಅದರಂತೆ ಇನ್ನು ಮುಂದೆ ಸಾಮಾಜಿ ಜಾಲ ತಾಣ, ಒಟಿಟಿ ಆಪ್, ವೆಬ್ ಪೋರ್ಟಲ್‍ಗಳಲ್ಲಿ ಪ್ರಕಟಿಸಿದ ಮತ್ತು ಪ್ರಸಾರ ಮಾಡಿದ ಆಕ್ಷೇಪಾರ್ಹ ಫೋಟೋ, ವಿಷಯ, ವಿಡಿಯೋಗಳನ್ನು ದೂರು ನೀಡಿದ 24 ಗಂಟೆಯ ಒಳಗಡೆ ಸಾತೆಗೆಯಬೇಕೆಂದು ಕೇಂದ್ರ ಸರ್ಕಾರ ಖಡಕ್ ಸೂಚನೆ ನೀಡಿದೆ.

ಈ ಬಗ್ಗೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವ ಪ್ರಕಾಶ್ ಜಾವಡೇಕರ್ ಅವರು ಮಾಹಿತಿ ನೀಡಿ, ಡಿಜಿಟಲ್ ಮೀಡಿಯಾಗಳಲ್ಲಿ ಪ್ರಸಾರವಾಗುವ ಸುಳ್ಳು ಸುದ್ದಿಗಳು ಮತ್ತು ದ್ವೇಷ ಭಾಷಣಗಳನ್ನು ನಿಯಂತ್ರಿಸಬೇಕೆಂದು ಜನರಿಂದ ಆಗ್ರಹ ಕೇಳಿ ಬಂದಿತ್ತು. ಈ ನಿಟ್ಟಿನಲ್ಲಿ ಸರ್ಕಾರ ಈ ನಿಯಮ ರೂಪಿಸಿದೆ. ಈ ಹೊಸ ನಿಯಮದ ಪ್ರಕಾರ ಅಶ್ಲೀಲ, ಮಾನಹಾನಿಕರ, ಆಕ್ಷೇಪಾರ್ಹ, ಅಪ್ರಾಪ್ತ ವಯಸ್ಕರಿಗೆ ಹಾನಿಕಾರಕವಾದ ವಿಷಯ, ಭಾರತದ ಏಕತೆ, ಸಮಗ್ರತೆ, ರಕ್ಷಣೆ, ಭದ್ರತೆ ಅಥವಾ ಸಾರ್ವಭೌಮತ್ವ ಮತ್ತು ಇತರ ದೇಶಗಳೊಂದಿಗಿನ ಸಂಬಂಧಕ್ಕೆ ಧಕ್ಕೆ ತರುವ ವಿಷಯಗಳನ್ನು ನಿಷೇಧಿಸಬೇಕು. ಅಲ್ಲದೆ ಸಾಮಾಜಿಕ ಜಾಲತಾಣಗಳು ಸೂಚನೆ ನೀಡಿದ ಅಥವಾ ಕೋರ್ಟ್ ಆದೇಶದ 34 ಗಂಟೆಯ ಒಳಗಡೆ ಕಾನೂನುಬಾಹಿರ ವಿಷಯವನ್ನು ತೆಗೆದುಹಾಕಬೇಕು ಅಥವಾ ನಿಷ್ಕ್ರಿಯಗೊಳಿಸಬೇಕು. ಹಾಗೂ ಸೋಶಿಯಲ್ ಮೀಡಿಯಾ ಮತ್ತು ಮೆಸೇಜಿಂಗ್ ಸೈಟ್‍ಗಳಲ್ಲಿ ಮಾಹಿತಿಯನ್ನು ಮೊದಲ ಹಾಕಿದವರ ಬಗ್ಗೆ ಟ್ರ್ಯಾಕಿಂಗ್ ಮಾಡಬೇಕು ಎಂದು ತಿಳಿಸಿದರು.
    ಕಾನೂನು ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಲು ಅಧಿಕಾರ ಹೊಂದಿರುವ ಸರ್ಕಾರಿ ಸಂಸ್ಥೆಗೆ, ಕಂಪನಿಗಳು 72 ಗಂಟೆಯ ಒಳಗಡೆ ಮಾಹಿತಿಯನ್ನು ಒದಗಿಸಬೇಕು. ಹಾಗೂ ದೂರುಗಳನ್ನು ಸ್ವೀಕರಿಸಲು, ಅಂಗೀಕರಿಸಲು ಮತ್ತು ಒಂದು ತಿಂಗಳೊಳಗೆ ಪರಿಹರಿಸಲು ಕಂಪನಿಗಳು ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕು. ಹಾಗೂ ಕುಂದು ಕೊರತೆಯನ್ನು ನಿವಾರಿಸುವ ಅಧಿಕಾರಿ ಭಾರತದಲ್ಲಿ ವಾಸಿಸಬೇಕು ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ವರದಿ ನೀಡಬೇಕು ಎಂದು ತಿಳಿಸಿದರು.

   ಇನ್ನು ಈ ನಿಯಮದ ಕಾರ್ಯವಿಧಾನದ ಬಗ್ಗೆ ಮಾಹಿತಿ ನೀಡಿದ ಅವರು, ಈ ನಿಯಮವನ್ನು ಜಾರಿಗೊಳಿಸಲು ಮೂರು ಹಂತದ ಕಾರ್ಯವಿಧಾನ ಜಾರಿಯಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ  ಸ್ವಯಂ ನಿಯಂತ್ರಣ, ಸ್ವಯಂ-ನಿಯಂತ್ರಿಸುವ ಸಂಸ್ಥೆಗಳಿಂದ ಸ್ವಯಂ ನಿಯಂತ್ರಣ, ಸರ್ಕಾರದ ಮೇಲ್ವಿಚಾರಣೆ, ನೀತಿ ಸಂಹಿತೆಯ ಯಾವುದೇ ಉಲ್ಲಂಘನೆಯ ಕುರಿತು ಸಾರ್ವಜನಿಕರಿಂದ ಎಲ್ಲ ಕುಂದುಕೊರತೆಗಳನ್ನು ಸ್ವೀಕರಿಸಲು ಮತ್ತು ಪ್ರಕ್ರಿಯೆಗೊಳಿಸಲು ಆನ್‍ಲೈನ್ ಪೋರ್ಟಲ್‍ ತೆರೆಯಬೇಕು. ಇದರ ಜೊತೆಗೆ ಕುಂದುಕೊರತೆಯನ್ನು 15 ದಿನಗಳ ಒಳಗಡೆ ಪರಿಹರಿಸಬೇಕು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!