ಉಡುಪಿ: ಬೆಲೆ ಏರಿಕೆ ಖಂಡಿಸಿ ಮಹಿಳೆಯರಿಂದ ಶವ ಮೆರವಣಿಗೆ

ಉಡುಪಿ: ಬೆಲೆ ಏರಿಕೆಯನ್ನು ಖಂಡಿಸಿ ಇಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಉಡುಪಿಯಲ್ಲಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಇಂಧನ ಬೆಲೆ, ಅಡುಗೆ ಅನಿಲ, ಆಹಾರ ಸಾಮಾಗ್ರಿ, ಕಟ್ಟಡ ನಿರ್ಮಾಣ ಸಾಮಾಗ್ರಿ ಮೊದಲಾದ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ನಡೆಸಿದ ಪ್ರತಿಭನೆಯಲ್ಲಿ ಮಹಿಳೆಯರು ಹೆಣಗಳನ್ನು ಹೊತ್ತುಕೊಂಡು ಸಾಗುವ ಮೂಲಕ ಅಣುಕು ಪ್ರದರ್ಶನ ಮಾಡಿದರು.

ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ಪ್ರತಿಭಟನಾ ಕಾರರು ಹೆಣವನ್ನು ಹೊತ್ತುಕೊಂಡು, ಪೆಟ್ರೋಲ್ ಬೆಲೆ ಇಳಿಸಬೇಕು ನಾಗರಿಕ ಸಮಾಜ ಬದುಕಬೇಕು,  ಅಡಿಗೆ ಅನಿಲ ಬೆಲೆ ಇಳಿಸಬೇಕು ಹಾಗೂ ಬಡವರ ಮನೆ ಒಲೆ ಉರಿಯಬೇಕು. ಆಹಾರ ಧಾನ್ಯಗಳ ಬೆಲೆ ಇಳಿಸಬೇಕು ಎಂಬ ಘೋಷ ವಾಕ್ಯಗಳ ಫಲಕಗಳ ಪ್ರದರ್ಶನದ ಉಡುಪಿಯ ಮೂಲಕ  ಜೋಡುಕಟ್ಟೆಯಿಂದ ಅಜ್ಜರಕಾಡು ಹುತಾತ್ಮರ ಸ್ಮಾರಕದವರೆಗೆ ಪಾದಯಾತ್ರೆ ನಡೆಸಿದರು.

ಈ ವೇಳೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರು, ಮಹಿಳೆಯರು ಶವವನ್ನು ಹೊತ್ತುಕೊಂಡು ಪ್ರತಿಭಟನೆಯನ್ನು ನಡೆಸುತ್ತಿರುವುದನ್ನು ನೋಡಿ ಅವರ ಕಷ್ಟಗಳನ್ನು  ಅರಿತು ಸರಕಾರ ಎಚ್ಚೆತುಕೊಳ್ಳಬೇಕಾಗಿದೆ. ಒಂದು ಕಡೆ ಕಲಿತರೂ ಉದ್ಯೋಗವಿಲ್ಲ, ದುಡಿಯಬೇಕೆಂದರೂ ಉದ್ಯೋಗವಿಲ್ಲ, ಉನ್ನತ ಮಟ್ಟದಲ್ಲಿ ಕಲಿತು ಅತಿಥಿ ಉಪನ್ಯಾಸಕರಾಗಿ ಅದೆಷ್ಟು ಹೋರಾಡಿದರೂ ಬೆಲೆ ಇಲ್ಲದಾಗಿದೆ. ಅದಕ್ಕಾಗಿ ಹೆಣವನ್ನು ಹೊತ್ತುಕೊಂಡು ಅಣುಕು ಪ್ರದರ್ಶನ ಮಾಡುವ ಮೂಲಕ ನಾವುಗಳೇ ಹೆಣದ ರೀತಿ ಆಗಿದ್ದೇವೆ ಎಂಬುದನ್ನು ಸರಕಾರಕ್ಕೆ ತಿಳಿಸಲು ಪ್ರಯತ್ನಿಸುತ್ತಿದ್ದೇವೆ.

ಅಗತ್ಯ ವಸ್ತುಗಳಿಂದ ಹಿಡಿದು ಪೆಟ್ರೋಲ್, ಡೀಸೆಲ್, ಕಬ್ಬಿಣ, ಸಿಮೆಂಟ್ ನ ಬೆಲೆಗಳು ಏರಿಕೆ ಆಗುತ್ತಿರುವುದುನ್ನು ಗಮನಿಸಿದರೆ ಇಲ್ಲಿ ಬದುಕಲು ಸಾಧ್ಯವೆ ಎಂಬ ಪ್ರಶ್ನೆ ಮೂಡುತ್ತಿದೆ ಎಂದರು. ಈ ಸಂದರ್ಭ ನಾಗರಿಕ ಸಮಿತಿ ಟ್ರಸ್ಟ್‍ನ ಪದಾಧಿಕಾರಿಗಳು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ನಾಗರಿಕ ಸಮಿತಿಯ ತಾರಾನಾಥ್ ಮೇಸ್ತಾ,  ಗಣೇಶ್ ರಾಜ್ ಸರಳೆಬೆಟ್ಟು, ಬಾಲ ಗಂಗಾಧರ ರಾವ್, ಮಂಜಪ್ಪ ಗೊಣಿ, ಸಂತೋಷ್, ತ್ರಿವೇಣಿ, ಸತ್ಯ ಪ್ರಭಾ , ತೃಪ್ತಿ, ರಫೀಕ್,ಸೀಮಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!