ಮಂದಾರ್ತಿ: ಜಾತ್ರೆಗೆ ಬಂದ ಇಬ್ಬರು ಮಹಿಳೆಯರು ನಾಪತ್ತೆ
ಬ್ರಹ್ಮಾವರ: ಜಾತ್ರೆಗೆಂದು ಬಂದಿದ್ದ ಇಬ್ಬರು ಮಹಿಳೆಯರು ನಾಪತ್ತೆಯಾಗಿರುವ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ಬ್ರಹ್ಮಾವರ ಬೈಕಾಡಿಯ ಜ್ಯೋತಿ (30) ಹಾಗೂ ಪ್ರಿಯಾಂಕ (24) ನಾಪತ್ತೆಯಾದವರು.
ಜ್ಯೋತಿಯವರು ತಮ್ಮ ಪತಿಯೊಂದಿಗೆ ಬೆಳಗಾಂ ಜಿಲ್ಲೆಯ ಚಿಕ್ಕೊಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ವಾಸವಿದ್ದರು. ಪ್ರತೀ ವರ್ಷ ಬ್ರಹ್ಮಾವರ ತಾಲೂಕು ಹೆಗ್ಗುಂಜೆ ಗ್ರಾಮದ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಜಾತ್ರೆಗೆ ಬಂದು ಹೋಗುತ್ತಿದ್ದರು. ಅದರಂತೆ ಫೆ. 13 ರಂದು ಜ್ಯೋತಿ ಹಾಗೂ ಅವರ ಗಂಡ ಬಂಡು ಅಪ್ಪಾಸಾಬ ದಾನ ವಾಡೆ, ಮೈದುನ ನರಸಪ್ಪಾ ಅಪ್ಪಾಸಾಬ ದಾನವಾಡೆ ಹಾಗೂ ಮೈದುನನ ಹೆಂಡತಿ ಪ್ರಿಯಾಂಕರೊಂದಿಗೆ ಮಂದಾರ್ತಿ ಜಾತ್ರೆಗೆ ಬಂದಿದ್ದರು.
ಆ ದಿನ ರಾತ್ರಿ ದೇವಸ್ಥಾನದಲ್ಲಿಯೇ ಉಳಿದುಕೊಂಡು ಮಾರನೇ ದಿನ ಅಂದರೆ ಫೆ.14 ರಂದು ಮಧ್ಯಾಹ್ನದ ವೇಳೆಗೆ ದೇವಸ್ಥಾನದಲ್ಲಿ ಪೂಜೆ ಮುಗಿಸಿ ದೇವಸ್ಥಾನದ ಹೊರಗಡೆ ಬಂದು ಎಲ್ಲರು ನಿಂತುಕೊಂಡಿದ್ದರು. ಈ ವೇಳೆ ಜ್ಯೋತಿ ಹಾಗೂ ಪ್ರಿಯಾಂಕ ರವರು ಜಾತ್ರೆಯಲ್ಲಿ ಸುತ್ತಾಡಿ ಬರುತ್ತೇವೆ ಎಂದು ಹೇಳಿ ಹೋದವರು ವಾಪಸ್ಸು ಬಾರದೆ ಕಾಣೆಯಾಗಿದ್ದಾರೆ. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಈ ಬಗ್ಗೆ ಬಂಡು ಅಪ್ಪಾಸಾಬ ದಾನ ವಾಡೆ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.