ತುಳುಕೂಟ ಒಡಿಪುಗೆ ಅತ್ಯುತ್ತಮ ಸಾಧನಾ ಪ್ರಶಸ್ತಿ ಪ್ರದಾನ
ಮಂಗಳೂರು: ಕಾವೂರಿನ ಅಖಿಲ ಭಾರತ ತುಳು ಒಕ್ಕೂಟದ ವತಿಯಿಂದ ನಡೆದ ಸಾಧಕೆರೆಗ್ ತಮ್ಮನ ಬಲ್ಮನ ಕಾರ್ಯಕ್ರಮದಲ್ಲಿ ಉಡುಪಿಯ ತುಳುಕೂಟ ಒಡಿಪು ಸಂಸ್ಥೆಗೆ ಅತ್ಯುತ್ತಮ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕಳೆದ 34 ವರ್ಷಗಳಿಂದ ತುಳುನಾಡಿನಲ್ಲಿ, ತುಳು ಭಾಷೆ, ಜಾನಪದ, ಕಲೆ, ಸಂಸ್ಕೃತಿ, ಸಾಹಿತ್ಯ, ನಾಟಕ, ರಂಗಕಲೆಗಳನ್ನು ಉಳಿಸಿ ಬೆಳೆಸಿ, ಪೋಷಿಸುತ್ತಿರುವ ತುಳುಕೂಟದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಕರ್ನಾಟಕ ತುಳುಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ತುಳುಕೂಟದ ಸಂಸ್ಥೆಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಮಾರಂಭದಲ್ಲಿ ಉದ್ಯಮಿ ಸದಾನಂದ ಶೆಟ್ಟಿ, ಬ್ಯಾಂಕ್ ಆಫ್ ಬರೋಡಾದ ಉಪಮಹಾಪ್ರಬಂಧಕ ಆರ್.ಗೋಪಾಲಕೃಷ್ಣ, ಸ್ಥಳೀಯ ಕಾರ್ಪೊರೇಟರ್ ಸುಮಂಗಲ, ತುಳುಕೂಟ ಕುಡ್ಲದ ಅಧ್ಯಕ್ಷ ದಾಮೋದರ ನಿಸರ್ಗ, ಕಾವೂರು ಬಂಟರ ಸಂಘದ ಅಧ್ಯಕ್ಷ ಆನಂದ ಶೆಟ್ಟಿ ಉಪಸ್ಥಿತರಿದ್ದರು. ತುಳು ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.