7 ರಿಂದ 8 ಶಾಸಕರು ಸಚಿವರಾಗಿ ಪ್ರಮಾಣ, ಸಂಪುಟದಿಂದ ಒಬ್ಬರನ್ನು ಕೈ ಬಿಡುವ ಸಾಧ್ಯತೆ?

ಬೆಂಗಳೂರು: ಬಹುನಿರೀಕ್ಷಿತ ಸಂಪುಟ ವಿಸ್ತರಣೆಗೆ ಕೊನೆಗೂ ಮೂಹೂರ್ತ ಫಿಕ್ಸ್ ಆಗಿದ್ದು, ನಾಳೆ 7 ರಿಂದ 8 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಂಗಳವಾರ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸದ್ಯ ಸಂಪುಟದಲ್ಲಿ 7 ಸ್ಥಾನ ಖಾಲಿ ಇದ್ದು, ನಾಳೆ ಮಧ್ಯಾಹ್ನ 3.50ಕ್ಕೆ 7 ರಿಂದ 8 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಂಪುಟದ ಒಬ್ಬರು ಸಚಿವರನ್ನು ಕೈಬಿಡಬಹುದು. ಒಬ್ಬ ಸಚಿವರನ್ನು ಕೈಬಿಡುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಇಂದು ರಾತ್ರಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ನೂತನ ಸಚಿವರಿಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ಇಂದು ರಾತ್ರಿ ಹೊಸದಾಗಿ ತಮ್ಮ ಸಂಪುಟ ಸೇರಲಿರುವ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ.

ಬಿಎಸ್ ವೈ ಸಂಪುಟದಿಂದ ಕೈಬಿಡುವ ಸಚಿವರ ಪಟ್ಟಿಯಲ್ಲಿ ಅಬಕಾರಿ ಸಚಿವ ಎಚ್ ನಾಗೇಶ್ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದ್ದು, ಅವರ ಜತೆಗೆ ಕೋಟಾ ಶ್ರೀನಿವಾಸ್ ಪೂಜಾರಿ, ಶಶಿಕಲಾ ಜೊಲ್ಲೆ ಮತ್ತು ಪ್ರಭು ಚೌಹಾಣ್ ಅವರ ಹೆಸರು ಇದೆ ಎನ್ನುವ ಮಾಹಿತಿ ಹರಿದಾಡುತ್ತಿದೆ .

Leave a Reply

Your email address will not be published. Required fields are marked *

error: Content is protected !!