ಮಹಾ ರುದ್ರ ಯಾಗದಿಂದ ದೇಶದ ಸಂಕಷ್ಟ ದೂರವಾಗಲಿ -ಸಚಿವ ರಾಮಲಿಂಗ ರೆಡ್ಡಿ

ಉಡುಪಿ: ಸುಮಾರು 75 ವರ್ಷಗಳ ಬಳಿಕ ಈ‌ ಭಾಗದಲ್ಲಿ ರುದ್ರಯಾಗ ನಡೆಯುತ್ತಿದ್ದು, ಪ್ರಸಾದ್‌ರಾಜ್‌ ಕಾಂಚನ್‌ ಅವರಿಗೆ ಈ ಯೋಗ ದೊರೆತಿದೆ. ಲೋಕಕಲ್ಯಾಣಾರ್ಥವಾಗಿ ನಡೆದ ಈ ಯಾಗದಿಂದ ದೇಶ, ರಾಜ್ಯಕ್ಕೆ ಬಂದ ಯಾವುದೇ ಸಂಕಷ್ಟಗಳು ದೂರವಾಗಿ, ಈ ನಾಡು ಸುಭೀಕ್ಷೆ ಹೊಂದಲಿ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವ ರಾಮಲಿಂಗ ರೆಡ್ಡಿ ಹಾರೈಸಿದರು.

ಅವರು ಶುಕ್ರವಾರ ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್‌ರಾಜ್‌ ಕಾಂಚನ್‌ ಅವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಮಹಾ ರುದ್ರಯಾಗದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಇತ್ತೀಚಿನ ವರ್ಷಗಳಲ್ಲಿ ದ್ವಿಚಕ್ರಗಳಿಂದ ಆಗುವ ಅಪಘಾತಗಳು ಜಾಸ್ತಿಯಾಗಿದ್ದು, ದ್ವಿಚಕ್ರ ಸವಾರರ ಅಜಾಗರೂಕತೆಯೇ ಇದಕ್ಕೆಲ್ಲ ಕಾರಣವಾಗಿದೆ. ಹಾಗಾಗಿ ಯುವ ಜನರು ಎಚ್ವರಿಕೆಯಿಂದ ವಾಹನವನ್ನು ಚಲಾಯಿಸಬೇಕು ಎಂದು ಕರೆನೀಡಿದರು.

ಆನಂದ ಸಿದ್ಧಿ ಪೀಠಂನ ಮತ್ತು ಶ್ರೀ ಲಕ್ಷ್ಮೇ ಭೂ ವರಾಹ ಸಾಲಿಗ್ರಾಮ ಕ್ಷೇತ್ರದ ಸಂಸ್ಥಾಪಕ ಡಾ| ಮಹರ್ಷಿ ಆನಂದ ಗುರೂಜಿ ಮಾತನಾಡಿ, ಮಕ್ಕಳಿಗೆ ಎಲ್ಲ ರೀತಿಯ ಜ್ಞಾನವನ್ನು ತಾಯಿಯೇ ನೀಡಬೇಕು, ಆಗ ಮಾತ್ರ ಮಕ್ಕಳು ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ. ತಾಯಿ ಮಕ್ಕಳಿಗೆ ಶಿಸ್ತು, ಸಂಯಮ, ಹಿರಿಯರಿಗೆ ಗೌರವ, ತಾಳ್ಮೆಯ ಗುಣಗಳನ್ನು ತಾಯಿ ಕಲಿಸಿ ಬೆಳೆಸಬೇಕು. ಮೊದಲು ನಾವು ನಮ್ಮ ಸಂಸ್ಕೃತಿಯನ್ನು ಕಲಿತರೆ ನಮ್ಮ ಮಕ್ಕಳು ಕಲಿಯುತ್ತಾರೆ ಎಂದು ಹೇಳಿದರು.

ರುದ್ರಯಾಗ ದೇವರ ಪ್ರೇರಣೆ: ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿದ ಮಹಾ ರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್‌ರಾಜ್‌ ಕಾಂಚನ್‌ ಅವರು ನಾನು ತೀರ್ಥಯಾತ್ರೆಗೆ ತೆರಳಿದಾಗ ಶಿವನ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನನಗೆ ದೇವರಿಂದಲೇ ಯಾಗ ನೆರವೇರಿಸಲು ಪ್ರೇರಣೆಯಾಯಿತು. ಸಾಮನ್ಯ ಜನರಿಗೆ ಯಾಗವನ್ನು ನೆರವೇರಿಸಲು ಕಷ್ಟಸಾದ್ಯ, ಜನ ಸಾಮಾನ್ಯರೂ ಯಾಗದಲ್ಲಿ ಭಾಗವಹಿಸಿ ಕಣ್ತುಂಬಿಕೊಳ್ಳುವಂತೆ ಮಾಡಬೇಕೆನ್ನುವ ಮಹದಾಸೆ ನನ್ನದಾಗಿತ್ತು. ಇದೀಗ ಎಲ್ಲ ಕೆಲಸಗಳು ದೇವರ ದಯೆಯಿಂದ ಪವಾಡಸದೃಶವಾಗಿ ಆಗುತ್ತಿದೆ ಎಂದರು.

ಮಕ್ಕಳಿಗೆ ಹೆಲ್ಮೆಟ್‌ ವಿತರಣೆ: 18 ವರ್ಷ ಕೆಳಗಿನ ಮಕ್ಕಳು ದ್ವಿಚಕ್ರದಲ್ಲಿ ಚಲಿಸುವಾಗ ಕಡ್ಡಾಯವಾಗಿ ಹೆಲ್ಮೆಟ್‌ ಹಾಕಬೇಕೆಂದು ಕೇಂದ್ರ ಸರಕಾರದ ತೀರ್ಮಾನಿಸಿದಂತೆ ಎಥರ್‌ ಕಂಪೆನಿ ಹೆಲ್ಮೆಟನ್ನು ಈ ಸಂದರ್ಭದಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಆರ್‌ಟಿಓ ಅಧಿಕಾರಿ ಸಂತೋಷ್‌ ಶೆಟ್ಟಿಅವರ ಜತೆ ಸಂಕೇತಿಕವಾಗಿ ಮಕ್ಕಳಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಚಿವ ರಾಮಲಿಂಗ ರೆಡ್ಡಿ ಮತ್ತು ಮಹರ್ಷಿ ಆನಂದ ಗುರೂಜೀ ಅವರನ್ನು ಸಮ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಆಭಯ್‌ಚಂದ್ರ ಜೈನ್‌, ಪಟ್ಲ ಪೌಂಡೇಶನಿನ ಪಟ್ಲ ಸತೀಶ್‌ ಶೆಟ್ಟಿ,

ಮಲ್ಪೆ ಪರ್ಸಿನ್‌ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ ಸುವರ್ಣ, ಪ್ರಮುಖರಾದ ಕಿಶನ್‌ ಹೆಗ್ಡೆ ಕೊಳ್ಕೆಬೈಲ್, ಉದಯ ಕುಮಾರ್‌ ಶೆಟ್ಟಿ ಮುನಿಯಾಲ್, ಇಂದ್ರಾಳಿ ಜಯಕರ್‌ ಶೆಟ್ಟಿ, ಜಯ ಸಿ. ಕೋಟ್ಯಾನ್‌, ಅಶೋಕ್‌ ಶೆಟ್ಟಿ ಮೈರ್ಮಾಡಿ, ಶಂಕರ ಶೆಟ್ಟಿ, ಸುರೇಂದ್ರ ಶೆಟ್ಟಿ, ಅಮೃತಾ ಕೃಷ್ಣಮೂರ್ತಿ ಆಚಾರ್ಯ, ಮಂಜುಳ ಕೆ. ನಾರಾಯಣ ಬಲ್ಲಾಳ್‌, ಪದ್ಮನಾಭ ಬಂಗೇರ, ಚಂದ್ರಶೇಖರ ಟಿ., ಶಶಿಧರ್‌ ಎಂ. ಅಮೀನ್‌, ರಮೇಶ್‌ ಮಾಸ್ತರ್‌ ಕಲ್ಮಾಡಿ, ಸುರೇಂದ್ರ ಉಪಾಧ್ಯ, ಗುರುರಾಜ್‌ ರಾವ್‌, ಯಾದವ ಅಮೀನ್‌, ನರೇಂದ್ರ ಎಂ., ಸತೀಶ್‌ ಬಂಗೇರ, ನವೀನ್‌ ಕುಂದರ್‌, ಸುರೇಶ್‌ ಅಮೀನ್‌, ತಾರಾನಾಥ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ರುದ್ರಯಾಗ ಸಮಿತಿಯ ಸಂಚಾಲಕ ಕೆ. ಕೃಷ್ಣಮೂರ್ತಿ ಆಚಾರ್ಯ ಸ್ವಾಗತಿಸಿದರು, ರಮೇಶ್‌ ತಿಂಗಳಾಯ ವಂದಿಸಿದರು. ದಯಾನಂದ ಮತ್ತು ವಿಜಯೇಂದ್ರ ವಸಂತ್‌ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!