ಸಾರಿಗೆ ನೌಕರರ ಕೆಲ ಬೇಡಿಕೆ ಈಡೇರಿಕೆಗೆ ಸಮ್ಮತಿ: ಮುಷ್ಕರ ಅಂತ್ಯ

ಬೆಂಗಳೂರು: ಸಾರಿಗೆ ಮುಷ್ಕರ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಹೋರಾಟಗಾರರ ಕೆಲ ಬೇಡಿಕೆ ಈಡೇರಿಕೆಗೆ ನಿರ್ಧಾರ ಕೈಗೊಂಡು ಅಂತಿಮ ಸುತ್ತಿನ ಮಾತುಕತೆಗೆ ನಿರ್ಧರಿಸಲಾಗಿದೆ. ಅದರಂತೆ
ತಮ್ಮ ನೇತೃತ್ವದಲ್ಲಿನ ಸಚಿವರ ತಂಡ ವಿಧಾನಸೌಧಕ್ಕೆ ತೆರಳಿದ್ದು, ಸದ್ಯದಲ್ಲೇ ಕೊನೆ ಸುತ್ತಿನ ಮಾತುಕತೆಯನ್ನು ಯೂನಿಯನ್ ಮುಖಂಡರ ಜೊತೆಗೆ ನಡೆಸಲಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಜೊತೆಗೆ ಕಾವೇರಿ ನಿವಾಸದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಾರಿಗೆ ನೌಕರರ ಪ್ರಮುಖರನ್ನು ಕರೆದು ಎರಡು ಸುತ್ತಿನ ಮಾತುಕತೆಯನ್ನು ನಡೆಸಲಾಗಿದೆ. ಸರ್ಕಾರವೂ ಕೂಡಾ ಕೆಲವೊಂದು ಬೇಡಿಕೆ ಈಡೇರಿಕೆಗೆ ಸಹಮತವನ್ನು ಕೊಟ್ಟಿದೆ ಎಂದರು.

ಸಿಬ್ಬಂದಿ ಸುಮಾರು 10 ಬೇಡಿಕೆಗಳನ್ನು ಕೇಳಿದ್ದರು ಅದರಲ್ಲಿ ಈಡೇರಿಕೆ ಮಾಡುವುದರ ಕುರಿತು ನಮ್ಮ ಹಣಕಾಸು ಇತಿಮಿತಿಯೊಳಗೆ ನಾವು ಕೂಡಾ ಒಂದು ಹೆಜ್ಜೆ ಮುಂದೆ ಹೋಗಿದ್ದು, ಎಲ್ಲಾ ಚರ್ಚೆ ಆಗಿದೆ. ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಒಪ್ಪಿಗೆ ಪಡೆದು ಕೊನೆಯ ಸುತ್ತಿನ ಮಾತುಕತೆ ನಡೆಸಿ ಅರ್ಧ ಗಂಟೆಯಲ್ಲಿ ಸಾರಿಗೆ ನೌಕರರ ಮುಷ್ಕರಕ್ಕೆ ಅಂತ್ಯವನ್ನು ಹಾಡುವ ನಿರ್ಣಯ ಮಾಡಿದ್ದೇವೆ. ಯೂನಿಯನ್ ಮುಖಂಡರ ಸಮಕ್ಷಮದಲ್ಲಿ ವಿಧಾನಸೌಧದಲ್ಲಿ ಪ್ರಕಟಣೆ ಕೊಟ್ಟು ಮುಷ್ಕರದ ಸಮಸ್ಯೆಯನ್ನು ಮುಗಿಸುವ ತೀರ್ಮಾನಕ್ಕೆ ನಾವೆಲ್ಲ ಬಂದಿದ್ದೇವೆ ಎಂದು ಲಕ್ಷ್ಮಣ್ ಸವದಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!