ಅಂಬಲಪಾಡಿ: “ಶ್ರೀ ದೇವಿ ಸಭಾಭವನ” ಡಿ.13ರಂದು ಲೋಕಾರ್ಪಣೆ

ಉಡುಪಿ: ಅಂಬಲಪಾಡಿಯ ರಾಷ್ಟ್ರೀಯ ಹೆದ್ದಾರಿಯ ಕನ್ನರ್ಪಾಡಿಯಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಶ್ರೀ ದೇವಿ ಸಭಾಭವನ ಡಿ. 13 ರಂದು ಲೋಕಾರ್ಪಣೆಗೊಳ್ಳಲಿದೆ. 

ಉಡುಪಿಯ ಖ್ಯಾತ ಇಂಜಿನಿಯರ್ ಉದ್ಯಮಿ ಬೀಡು ರಮೇಶ್ ರಾವ್ ಅವರ ಕನಸಿನ ಕೂಸಾದ ಈ ನೂತನ ಸಭಾಭವನದಲ್ಲಿ 500ಕ್ಕೂ ಮಿಕ್ಕಿ ಅತಿಥಿಗಳಿಗೆ ಆಸನದ ವ್ಯವಸ್ಥೆ, ಸೆಂಟ್ರಲ್ ಎ.ಸಿ., ಉತ್ಕಷ್ಟ ಸೌಂಡ್ ಸಿಸ್ಟಂ ಅಳವಡಿಸಲಾಗಿದೆ. ಈ ಹಾಲ್‌ನಲ್ಲಿ ವರನ ಮತ್ತು ವಧುವಿನ ಕಡೆಯವರಿಗೂ ಪ್ರತ್ಯೇಕ ಡ್ರೆಸ್ಸಿಂಗ್ ರೂಂ ಹಾಗೂ ಶೌಚಾಲಯಗಳ ವ್ಯವಸ್ಥೆ ಇದೆ.

ಇನ್ನೂ ಈ ಸಭಾಭವನದಲ್ಲಿ ಕಾರ್ಯಕ್ರಮ ನಡೆಸುವವರ ಅನುಕೂಲಕ್ಕೆ ನೂರಕ್ಕೂ ಮಿಕ್ಕಿ ಕಾರುಗಳನ್ನು, ದ್ವಿಚಕ್ರವಾಹನಗಳನ್ನು ಕ್ರಮಬದ್ಧವಾಗಿ ಪಾರ್ಕಿಂಗ್ ಮಾಡಬಹುದಾದ ಪಾರ್ಕಿಂಗ್ ಸೌಲಭ್ಯ ವನ್ನೂ ಮಾಡಿಕೊಡಲಾಗಿದೆ. ಇದರೊಂದಿಗೆ’ಶ್ರೀ ದೇವಿ ಸಭಾಭವನಕ್ಕೆ ಹೊಂದಿಕೊಂಡಂತೆ ಪ್ರತ್ಯೇಕ ಕಟ್ಟಡದಲ್ಲಿ ವಿಶಾಲ ಭೋಜನಶಾಲೆ ಸೂಕ್ತ ವಾತಾಯನದ ಅನುಕೂಲತೆ ಇರುವ ಶಾಖಾಹಾರಿ ಅಡುಗೆಮನೆ, ಸಾಲು ಸಾಲು ನೀರಿನ ಟ್ಯಾಪುಗಳು ಎಲ್ಲವನ್ನೂ ಕ್ರಮಬದ್ಧವಾಗಿ ನಿರ್ಮಿಸಲಾಗಿದೆ.

ಇಲ್ಲಿನ ಇನ್ನೊಂದು ಆಕರ್ಷಣೆ ಎಂದರೆ ‘ಶ್ರೀದೇವಿ ಗಾರ್ಡನ್ಸ್ ಇದೊಂದು ಬಯಲು ಸಭಾಂಗಣವಾಗಿದ್ದು, ಇಳಿಹೊತ್ತಿನ ಸಾಮಾಜಿಕ ಮನೋರಂಜನ ಕಾರ್ಯಕ್ರಮಗಳಾಗಲಿ, ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಲಿ ಇದನ್ನು ಬಳಸಬಹುದಾಗಿದೆ ಎಂದು ಉದ್ಯಮಿ ರಮೇಶ್ ರಾವ್ ಬೀಡು ತಿಳಿಸಿದರು.

ಸಭಾಭವನ ಉದ್ಘಾಟನಾ ಸಮಾರಂಭದ ಅಂಗವಾಗಿ ಕೊರೋನಾ ವಾರಿಯರ್ಸ್ ಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉಡುಪಿ ಅಂಬಲಪಾಡಿಯ ರಾ.ಹೆಯ  ಕನ್ನರ್ಪಾಡಿಯ ಶ್ರೀ ದೇವಿ ಸಭಾಭವನದಲ್ಲಿ ಆಯೋಜಿಸಲಾಗಿದೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಉಡುಪಿ, ಮಾನವ ಹಕ್ಕುಗಳ ಭಾರತೀಯ ಮಹಾ ಮೈತ್ರಿ ಉಡುಪಿ ವಿಭಾಗ, ಅರ್ಚನ ಟ್ರಸ್ಟ್‌ ಮಣಿಪಾಲ ಹಾಗೂ ಭಾರ್ಗವಿ ಆರ್ಟ್ ಆಂಡ್ ಡ್ಯಾನ್ ಅಕಾಡೆಮಿ ಉಡುಪಿ ಇವರ ಸಹಭಾಗಿತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೊರೋನಾ ಸಮಯದಲ್ಲಿ ತಮ್ಮ ಜೀವದ ಹಂಗು ತೊರೆದು ಸಮಾಜಕ್ಕೆ ಸೇವೆ ನೀಡಿದ ಆಶಾ ಕಾರ್ಯಕರ್ತರು, ವೈದ್ಯರು, ಪೊಲೀಸ್ ಇಲಾಖೆ , ಸಮಾಜ ಸೇವಕರು, ಆಂಬುಲೆನ್ಸ್ ಚಾಲಕರು ಹಾಗೂ ಇತರ ರೀತಿಯಲ್ಲಿ ಕೊರೋನಾ ವಿರುದ್ದ ಮಾಡಿರುವ ಹೋರಾಟವನ್ನು ಗುರುತಿಸಿ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ರಮೇಶ್ ರಾವ್ ಬೀಡು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!