ಉಡುಪಿ ಉಚ್ಚಿಲ ದಸರಾ-2024: ವೈಭವದ ಶೋಭಾಯಾತ್ರೆಗೆ ಚಾಲನೆ

ಉಚ್ಚಿಲ: ಉಚ್ಚಿಲ ಶ್ರೀಮಹಾಲಕ್ಷ್ಮಿ ದೇವಸ್ಥಾನದಲ್ಲಿ 3ನೇ ವರ್ಷದ ಉಡುಪಿ ಉಚ್ಚಿಲ ದಸರಾ- 2024 ಭವ್ಯ ಶೋಭಾಯಾತ್ರೆಗೆ ಶನಿವಾರ ಸಂಜೆ ಚಾಲನೆ ನೀಡಲಾಯಿತು.

ಡ್ರೋನ್ ಪುಷ್ಪ ಸಿಂಚನ: ನವದುರ್ಗೆಯರ ಸಹಿತ ಶಾರದಾ ಮೂರ್ತಿಗೆ ಮಹಾಪೂಜೆಯ ಬಳಿಕ ವಿಶೇಷವಾಗಿ ಡ್ರೋನ್ ಮೂಲಕ ಶ್ರೀ ಶಾರದಾದೇವಿ ಮತ್ತು ನವದುರ್ಗೆಯರ ವಿಗ್ರಹಗಳಿಗೆ ಪುಷ್ಪ ಸಿಂಚನ ಮಾಡಲಾಯಿತು.

ಇದೇ ಸಂದರ್ಭ ದೇವಳದ ರುವಾರಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಸಮಿತಿಯ ಗೌರವ ಸಲಹೆಗಾರ ನಾಡೋಜಾ ಡಾ. ಜಿ ಶಂಕರ್‌, ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ, ಅಧ್ಯಕ್ಷ ಜಯ ಸಿ ಕೋಟ್ಯಾನ್‌, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ,ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಾಜನ ಸಂಘದ ಉಪಾಧ್ಯಕ್ಷರಾದ ದಿನೇಶ್‌ ಎರ್ಮಾಳು, ಮೋಹನ್ ಬೇಂಗ್ರೆ, ಉದ್ಯಮಿ ಆನಂದ ಸಿ ಕುಂದರ್‌, ಪ್ರಧಾನ ಕಾರ್ಯದರ್ಶಿ ಶರಣ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್ ಸಹಿತ ಗಣ್ಯರು ಪುಷ್ಪಾರ್ಚನೆಗೈದರು.   

ಉಚ್ಚಿಲ ದೇವಳದಿಂದ ರಾಷ್ಟ್ರೀಯ ಹೆದ್ದಾರಿ 66ರ ಪೂರ್ವಬದಿಯಲ್ಲಿ ದಕ್ಷಿಣಕ್ಕೆ, ಎರ್ಮಾಳು ಮಸೀದಿವರೆಗೆ ಸಾಗಿ ಅಲ್ಲಿಂದ ಯೂ ಟರ್ನ್ ಪಡೆದು, ಉಚ್ಚಿಲ- ಮೂಳೂರು-ಕಾಪುವರೆಗೆ ಸಾಗಿ, ಕಾಪು ಕೊಪ್ಪಲಂಗಡಿ ಬಳಿ ಹೆದ್ದಾರಿಯ ಎಡ ಭಾಗದ ಬೀಚ್‌ ರಸ್ತೆಗೆ ತಿರುಗಿ ಅಲ್ಲಿಂದ ಕಾಪು ಬೀಚ್‌ವರೆಗೆ ಸಾಗಲಿದೆ.

ಶೋಭಾಯಾತ್ರೆಯಲ್ಲಿ ಮೈಸೂರು ದಸರಾ ಅಂಬಾರಿ ಪ್ರತಿಕೃತಿಯು ಮುಂಭಾಗದಲ್ಲಿ ಸಾಗಿ, ಶ್ರೀಶಾರದಾ ದೇವಿ ಹಾಗೂ ನವದುರ್ಗೆಯರ ಟ್ಯಾಬ್ಲೊಗಳೊಂದಿಗೆ ತುಳುನಾಡಿನ ಸಂಸ್ಕೃತಿ ಬಿಂಬಿಸುವ, ಮೀನುಗಾರಿಕೆ ಯನ್ನು ಪ್ರತಿಬಿಂಬಿಸುವ ಹಾಗೂ ಮೊಗವೀರ ಸಮಾಜದ ಗುರುಗಳಾದ ಮಾಧವ ಮಂಗಳ ಗುರುಗಳು, ಸದಿಯ ಸಾಹುಕಾರರ ಸಹಿತ ವಿವಿಧ ಟ್ಯಾಬ್ಲೊಗಳು, ಕಲಾತಂಡಗಳು, ಭಜನಾ ತಂಡಗಳು, ಚೆಂಡೆ ವಾದ್ಯ, ಕೊಂಬು ಕಹಳೆ, ಡಿಜೆ ಸಂಗೀತ ಸಹಿತ ಸಹಸ್ರಾರು  ಭಕ್ತಾದಿಗಳ ಜತೆಗೆ ಶೋಭಾಯಾತ್ರೆ ಸಾಗಿತು.

ಗಂಗಾರತಿ, ಸುಡುಮದ್ದು, ಲೇಸರ್ ಪ್ರದರ್ಶನ :

ಕಾಪು ಬೀಚ್ ಬಳಿ ಬೃಹತ್‌ ಗಂಗಾರತಿ, ಸುಮಂಗಲೆಯರಿಂದ ಮಹಾಮಂಗಳಾರತಿ, ಸುಡುಮದ್ದು ಪ್ರದರ್ಶನ, ಸಮುದ್ರ ಮಧ್ಯೆ 50ಕ್ಕೂ ಹೆಚ್ಚು ಬೋಟ್‌ಗಳಿಂದ ವಿದ್ಯುದ್ದೀಪಾಲಂಕಾರ, ಸುಡುಮದ್ದು ಪ್ರದರ್ಶನ, ಲೇಸರ್ ಲೈಟ್ ಪ್ರದರ್ಶನ ನಡೆಯಲಿದೆ. ಕಾಪು ಬೀಚ್ ಬಳಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಕಾಪು ಬೀಚ್ ಬಳಿ ಸಮುದ್ರದಲ್ಲಿ ಶಾರದೆ ಸಹಿತ ನವದುರ್ಗೆಯರ ವಿಗ್ರಹಗಳನ್ನು ಸಾಂಪ್ರದಾಯಿಕವಾಗಿ ಜಲಸ್ತಂಭನಗೊಳಿಸಲಾಗುವುದು.

ಉಡುಪಿ ಉಚ್ಚಿಲ ದಸರಾ ರೂವಾರಿ ನಾಡೋಜ ಡಾ. ಜಿ.ಶಂಕರ್, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ ಹಾಗೂ ಪದಾಧಿಕಾರಿಗಳು, ಲಕ್ಷಾಂತರ ಭಕ್ತಾದಿಗಳು ಉಪಸ್ಥಿತರಿದ್ದರು.

ಪೊಲೀಸರಿಂದ ಬಿಗು ಬಂದೋಬಸ್ತು:

ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಕಾಪು ಸಿಪಿಐ ಜಯಶ್ರೀ ಮಾಣೆ, ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಕುಮಾರ್ ಎಂ.ಎಸ್., ಕಾಪು ಠಾಣಾಧಿಕಾರಿ ಅಬ್ದುಲ್ ಖಾದರ್ ನೇತೃತ್ವದಲ್ಲಿ ಸೂಕ್ತ ಭದ್ರತೆಯ ಜೊತೆಗೆ ಸಾವಿರಾರು ಸ್ವಯಂ ಸೇವಕರು ಶಿಸ್ತು ಪಾಲನೆಯಲ್ಲಿ ಸಹಕರಿಸಿದ್ದರು.

Leave a Reply

Your email address will not be published. Required fields are marked *

error: Content is protected !!