ಉಡುಪಿ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ: ಜಿಲ್ಲಾಧಿಕಾರಿ

Oplus_131072

ಉಡುಪಿ, ಸೆ.20: ವಿಧಾನಪರಿಷತ್ ಉಪ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆ ಹಾಗೂ ಚುನಾವಣಾ ಆಯೋಗ ನೀಡುವ ಮಾರ್ಗಸೂಚಿಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಸೂಚನೆ ನೀಡಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ವಿಧಾನಪರಿಷತ್ ಉಪ ಚುನಾವಣೆಯನ್ನು ನಿಷ್ಪಕ್ಷಪಾತ, ನ್ಯಾಯಸಮ್ಮತವಾಗಿ ನಡೆಸಲು ಚುನಾವಣೆ ಆಯೋಗದ ನಿರ್ದೇಶನದ ಅನ್ವಯ ಕಾರ್ಯಚಟುವಟಿಕೆಗಳನ್ನು ನಡೆಸಿ ಜಿಲ್ಲಾಡಳಿತಕ್ಕೆ ಯಶಸ್ವಿ ಚುನಾವಣೆ ನಡೆಸಲು ಎಲ್ಲ ಪಕ್ಷದವರು ಸಹಕರಿಸಬೇಕೆಂದರು.

ಜನಪ್ರತಿನಿಧಿಗಳು ಸ್ಥಳೀಯ ಪ್ರಾಧಿಕಾರಗಳ ಕ್ಷೇತ್ರದ ಮತದಾರರ ಭಾಗವಾಗಿರುವ ಯಾವುದೇ ಸ್ಥಳೀಯ ಪ್ರಾಧಿಕಾರದ ಸದಸ್ಯರನ್ನು, ಯಾವುದೇ ಸಚಿವರು, ಅಧಿಕೃತವಾಗಿ ಸಭೆ, ವೀಡಿಯೋ ಕಾನ್ಫರೆನ್ಸ್ ಕರೆಯುವಂತಿಲ್ಲ. ಸ್ಥಲೀಯ ಸಂಸ್ಥೆಗಳ ವಾಡಿಕೆಯ ಸಭೆಗಳು ಅಗತ್ಯವಿದ್ದಾಗ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಚುನಾವಣಾ ಅಧಿಕಾರಿಗಳ ಪೂರ್ವಾನುಮತಿ ಪಡೆದು ನಡೆಸಬಹುದಾಗಿದೆ ಎಂದರು.

ಮತದಾರರ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಭಾವ ಬೀರುವ ಯಾವುದೇ ಹೊಸ ನೀತಿ ಘೋಷಣೆ ಅಥವಾ ಕಾರ್ಯಕ್ರಮವನ್ನು ಚುನಾವಣೆಗಳು ಪೂರ್ಣಗೊಳ್ಳುವವರೆಗೆ ಸರ್ಕಾರಿ ಇಲಾಖೆಗಳು ಪ್ರಾರಂಭಿಸುವಂತಿಲ್ಲ ಎಂದ ಅವರು ಸರ್ಕಾರಿ ಯಂತ್ರವನ್ನು ದುರ್ಬಳಕೆ ಮಾಡುವಂತಿಲ್ಲ ಎಂದರು.

ಸಾರ್ವಜನಿಕ ಸ್ಥಳ ಅಥವಾ ಮೈದಾನಗಳಲ್ಲಿ ಚುನಾವಣಾ ಸಭೆ ನಡೆಸಲು ಹೆಲಿಕಾಪ್ಟರ್‌ಗಳಿಗೆ ಸ್ಥಳಾವಕಾಶ ಒದಗಿಸಲು ಅಧಿಕಾರದಲ್ಲಿರುವ ಪಕ್ಷದವರು ಏಕಸ್ವಾಮ್ಯವನ್ನು ಹೊಂದಿರುವುದಿಲ್ಲ. ಎಲ್ಲಾ ಪಕ್ಷಗಳು ಮತ್ತು ಅಭ್ಯರ್ಥಿಗಳೂ ಸಹ ಅವುಗಳನ್ನು ಬಳಕೆ ಮಾಡಲು ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.
ಚುನಾವಣಾ ಜಾಹೀರಾತುಗಳನ್ನು ಜಾಹೀರಾತು ಪಡಿಸುವ ಮುನ್ನ ಪೂರ್ವಾನುಮತಿಯನ್ನು ಜಿಲ್ಲಾ ಎಂ.ಸಿ.ಎಂ.ಸಿ ಸಮಿತಿಯಿಂದ ಪಡೆದು ಟಿ.ವಿ ಚಾನೆಲ್, ಕೇಬಲ್ ನೆಟ್‌ವರ್ಕ್, ರೇಡಿಯೋ ಸೇರಿದಂತೆ ಖಾಸಗಿ ಎಫ್.ಎಂ ಚಾನೆಲ್‌ಗಳು, ಸಿನಿಮಾ ಹಾಲ್‌ಗಳು, ಆಡಿಯೋ ವಿಷುಯಲ್ ಡಿಸ್‌ಪ್ಲೇಗಳನ್ನು ಹಾಗೂ ಬಲ್ಕ್ ಎಸ್.ಎಂ.ಎಸ್ ಧ್ವನಿ ಸಂದೇಶಗಳನ್ನು ಮಾಡಹುದಾಗಿದೆ ಎಂದರು.

ಪ್ರಚಾರ ಕಾರ್ಯಕ್ಕೆ ಯಾವುದೇ ಧಾರ್ಮಿಕ ಸಂಸ್ಥೆ, ಸ್ಥಳಗಳನ್ನು ಬಳಸುವಂತಿಲ್ಲ. ಹುಟ್ಟುಹಬ್ಬ ಮತ್ತಿತರ ಸಮಾರಂಭಗಳನ್ನು ನಡೆಸಿ, ಮತದಾರರನ್ನು ಸೆಳೆಯಲು ಊಟೋಪಚಾರಗಳು, ಪಾರ್ಟಿಗಳನ್ನು ಏರ್ಪಡಿಸಿದ್ದಲ್ಲಿ ಕಾನೂನು ಅಡಿಯಲ್ಲಿ ನಿರ್ದಾಕ್ಷಿಣ್ಯವಾ ಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಸರಕಾರಿ ಅಧಿಕಾರಿಗಳು ಮಾದರಿ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಒಂದೊಮ್ಮೆ ಉಲ್ಲಂಘಿಸಿದ್ದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮವನ್ನು ಕಾನೂನಿನ ಅಡಿಯಲ್ಲಿ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್, ಎಎಸ್‌ಪಿ ಸಿದ್ಧಲಿಂಗಪ್ಪ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ.ಬಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಚಂದ್ರಶೇಖರ ಪ್ರಭು, ಹಬೀಬ್ ಅಲಿ ಖಾದರ್ ಹಾಗೂ ಜಯಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!