ಹೊಸ ಆವಿಷ್ಕಾರಗಳಿಗೆ ಶಿಕ್ಷಕರು ಸಜ್ಜಾಗಬೇಕು- ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ: ಪ್ರಸಕ್ತ ಸನ್ನಿವೇಶಕ್ಕ ತಕ್ಕಂತೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿ ಶಿಕ್ಷಕರು ಬದಲಾಗಬೇಕಾಗಿದ್ದು ಶಿಕ್ಷರು ತಮ್ಮ ವೃತ್ತಿಯನ್ನು ಪ್ರೀತಿಸುವುದರೊಂದಿಗೆ ವೃತ್ತಿ ಬಗ್ಗೆ ಹೆಮ್ಮೆ ಹಾಗೂ ದೃಢವಾದ ಆತ್ಮ ವಿಶ್ವಾಸ ಹೊಂದಿರಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಶನಿವಾರ ಉಡುಪಿ ಕನ್ನರ್ಪಾಡಿ ಸೈಂಟ್ ಮೇರಿಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಸಭಾಂಗಣದಲ್ಲಿ ಆಯೋಜಸಿದ್ದಕಥೊಲಿಕ್ ಎಜುಕೇಶನಲ್ ಸೊಸೈಟಿ ಆಫ್ ಉಡುಪಿ ಧರ್ಮಪ್ರಾಂತ್ಯದ ಇದರ ದಶಮಾನೋತ್ಸವ ಮತ್ತು ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಣ ವ್ಯವಸ್ಥೆಯಲ್ಲಿ ಪ್ರತಿ ದಿನವೂ ಹೊಸ ಹೊಸ ಆವಿಷ್ಕಾರಗಳನ್ನು ಕಾಣುತ್ತಿದ್ದು ಅದಕ್ಕೆ ಪೂರವಾಗಿ ಶಿಕ್ಷಕರೂ ಕೂಡ ಸಿದ್ದರಾಗಬೇಕಾದ ಅಗತ್ಯತೆ ಇದ್ದು ಈ ನಿಟ್ಟಿನಲ್ಲಿ ತರಬೇತಿಗಳ ಮೂಲಕ ಶಿಕ್ಷಕರನ್ನು ಸಜ್ಜುಗೊಳಿಸುವ ಕೆಲಸ ನಡೆಯುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಮಾತನಾಡಿ ಶಿಕ್ಷಣವೆಂದರ ಕೇವಲ ಮಾಹಿತಿ ತುಂಬುವುದಲ್ಲ ಜೀವನವನ್ನು ಸಾಮರಸ್ಯದಿಂದ ಕಂಡುಕೊಳ್ಳಬೇಕಾಗಿದೆ. ಶಿಕ್ಷಣದ ಬೇರುಗಳು ಕಹಿ ಇರಬಹುದು ಆದರೆ ಅದರ ಫಲ ಸಿಹಿಯಾಗಿರುತ್ತೆ. ಶಿಕ್ಷಣದಿಂದ ಎಲ್ಲಾ ಜನರನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ಕೆಲಸ ಮಾಡುವ ಮೂಲಕ ಮಾದರಿ ಶಿಕ್ಷಕರಾಗಿ ಬದಲಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಆಯೋಜಸಿದ್ದ ಕಥೊಲಿಕ್ ಎಜುಕೇಶನಲ್ ಸೊಸೈಟಿಯ ನೂತನ ವೆಬ್ ಸೈಟ್, ದಶಮಾನೋತ್ಸವ ಸ್ಮರಣ ಸಂಚಿಕೆ ಉದ್ಘಾಟನೆ, ನಿವೃತ್ತ ಶಿಕ್ಷಕ-ಶಿಕ್ಷಕೇತರ ಬಂಧುಗಳಿಗೆ, ಪಿಹೆಚ್ ಡಿ ಹಾಗೂ ಪ್ರಶಸ್ತಿ ವಿಜೇತ ಶಿಕ್ಷಕರಿಗೆ, ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ, ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥೀಗಳನ್ನು, ನೂರು ಶೇಕಡಾ ಫಲಿತಾಂಶ ಪಡೆದ ಸಂಸ್ಥೆಗಳನ್ನು, ಹಿಂದಿನ ಹಾಗೂ ಪ್ರಸ್ತುತ ಸೇಸು ಆಡಳಿತ ಮಂಡಳಿಯ ಸದಸ್ಯರನ್ನು ಸನ್ಮಾನಿಸಲಾಯಿತು.

ನ್ಯಾಕ್ ಸಂಸ್ಥೆಯಿಂದ ಎ ಪ್ಲಸ್ ಗ್ರೇಡ್ ಪಡೆದ ಮಿಲಾಗ್ರಿಸ್ ಪದವಿ ಕಾಲೇಜಿಗೆ ಅಭಿನಂದನಾ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಪ್ರಾಥಮಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ನಿರ್ದೇಶಕರಾದ ಸಿಪ್ರಿಯಾನ್ ಮೊಂತೆರೊ, ಕಥೊಲಿಕ್ ಶಿಕ್ಷಣ ಮಂಡಳಿ ಮಂಗಳೂರು ಇದರ ಕಾರ್ಯದರ್ಶಿ ವಂ|ಡಾ|ಲಿಯೋ ಪ್ರವೀಣ್ ಲಸ್ರಾದೊ, ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಾರುತಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣಪತಿ ಕೆ, ಕಥೊಲಿಕ ಶಿಕ್ಷಣ ಮಂಡಳಿ ಮಾಜಿ ಕಾರ್ಯದರ್ಶಿ ವಂ| ಆ್ಯಂಟನಿ ಶೆರಾ, ಉಡುಪಿ ಕನ್ನರ್ಪಾಡಿ ಸೈಂಟ್ ಮೇರಿಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಸಂಚಾಲಕರಾದ ವಂ|ಚಾರ್ಲ್ಸ್ ಮಿನೇಜಸ್, ಪ್ರಾಂಶುಪಾಲ ವಂ|ವಿಜಯ್ ಡಿಸೋಜಾ ಉಪಸ್ಥಿತರಿದ್ದರು.

ಕನ್ನರ್ಪಾಡಿ ಸೈಂಟ್ ಮೇರಿಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಸಂಚಾಲಕರಾದ ವಂ|ಚಾರ್ಲ್ಸ್ ಮಿನೇಜಸ್ ಸ್ವಾಗತಿಸಿ, ಕಥೊಲಿಕ್ ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ವಂ| ವಿನ್ಸೆಂಟ್ ಕ್ರಾಸ್ತಾ ಧನ್ಯವಾದವಿತ್ತರು. ಶಿಕ್ಷಕರಾದ ಶ್ರುತಿ, ಅಮೃತಾ ಶೆಟ್ಟಿ, ಗೀತಾ, ಸಿಬಿಲ್ ಸೋನ್ಸ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!