ಸಾಮರಸ್ಯ ಜೀವನದಲ್ಲಿ ಇದ್ದಾಗ ಬಾಂಧವ್ಯ ಸದಾ ಹಸಿರಾಗಿರುತ್ತದೆ- ಯಕ್ಷಗುರು ಸಂಜೀವ ಸುವರ್ಣ

ಉಡುಪಿ, ಸೆ.12: ಶೀಘ್ರ ಕೋಪಿ ಆಗಿರಬೇಕು, ದೀರ್ಘ ದ್ವೇಷಿ ಆಗಿರ ಬಾರದು. ಈ ಸಾಮರಸ್ಯ ಜೀವನದಲ್ಲಿ ಇದ್ದಾಗ ಬಾಂಧವ್ಯ ಸದಾ ಹಸುರಾಗಿರುತ್ತದೆ ಎಂದು ಯಕ್ಷಗುರು ಸಂಜೀವ ಸುವರ್ಣ ಹೇಳಿದರು.

ಬುಡ್ನಾರಿನ ಯಕ್ಷ ಸಂಜೀವ, ಯಕ್ಷಗಾನ ಕೇಂದ್ರದಲ್ಲಿ ಗುರುವಾರ ನಡೆದ “ಸಂಜೀವ-70 ಗುರು ಶಿಷ್ಯರ ಸಂವಾದ”ದಲ್ಲಿ ಸಂಜೀವ ಸುವರ್ಣರು ತಮ್ಮ ಯಕ್ಷಗಾನ ಜೀವನದ ಹಲವು ವಿಷಯಗಳನ್ನು ಹಂಚಿಕೊಂಡರು.

ನನ್ನ ಹುಟ್ಟು ಹಾಗೂ ಬದುಕು ವಿಚಿತ್ರವೇ ಆಗಿದೆ. ಬೇರೆಯವರಿಂದ ಪಡೆದದ್ದೇ ಹೆಚ್ಚು ಸಮಾಜಕ್ಕೆ ನೀಡಿದ್ದು ಕಡಿಮೆ. ಸಮಾಜದಲ್ಲಿ ಕಂಡು ಕಲಿಯಬೇಕು ಹಾಗೂ ಸಮಾಜಕ್ಕೆ ಏನಾದರೂ ಕೊಡಬೇಕು ಎನ್ನುವುದು ನನ್ನ ಅನಿಸಿಕೆ. ಯಕ್ಷಗಾನ ಕೇಂದ್ರ ಹಾಗೂ ಗುರು ಶಿವರಾಮ ಕಾರಂತರಿಂದ ದೇಶದ ಕಲೆಗಳ ಪರಿಚಯವಾಯಿತು ಮತ್ತು ಹಲವುಒಳವು ಸಿಕ್ಕವು. ಆರೆಸ್ಸೆಸ್ ಬಾಲ್ಯದಿಂದ ಕಲಿಸಿದ ಸಂಸ್ಕಾರ, ನೀತಿಪಾಠ ಹಲವು ರೀತಿಯಲ್ಲಿ ಅನುಕೂಲವಾಗಿದೆ ಎಂದರು.

ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಯಕ್ಷಗಾನ ಕರಾವಳಿಯ ಗಂಡುಕಲೆ. ಇದೀಗ ದೇಶವ್ಯಾಪಿ ಹಬ್ಬಿದೆ. ಸನಾತನ ಸಂಸ್ಕೃತಿ, ಆಚಾರ, ವಿಚಾರ ಯಕ್ಷಗಾನದ ಮೂಲಕ ತಿಳಿಸಲಾಗುತ್ತಿದೆ. ಈ ಕ್ಷೇತ್ರದಲ್ಲಿ ಸಂಜೀವ ಸುವರ್ಣರ ಸಾಧನೆ ಸ್ತುತ್ಯರ್ಹ ಎಂದರು.

ವೈದ್ಯ ಡಾ। ಭಾಸ್ಕರಾನಂದ ಕುಮಾರ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ| ತಲ್ಲೂರು ಶಿವರಾಮ್ ಶೆಟ್ಟಿ ದಂಪತಿ, ಸಂಜೀವ ಸುವರ್ಣರ ಪತ್ನಿ ವೇದಾವತಿ ಸುವರ್ಣ ಉಪಸ್ಥಿತರಿದ್ದರು. ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಸ್ವಾಗತಿಸಿದರು. ಪಶುವೈದ್ಯ ಡಾ| ಪ್ರಶಾಂತ್ ಶೆಟ್ಟಿ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!