ವೇಲಾಂಕಣಿ- ಮಡಗಾಂವ್ ಮಧ್ಯೆ ವಿಶೇಷ ರೈಲು ಘೋಷಣೆ

ಕುಂದಾಪುರ, ಸೆ.2: ಕರಾವಳಿ ಕ್ರೈಸ್ತ ಸಮುದಾಯ ಮನವಿ ಮೇರೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೊಂಕಣ ರೈಲ್ವೆ ನಿಗಮಕ್ಕೆ ನೀಡಿದ ಸೂಚನೆಯಂತೆ ಇದೀಗ ವೇಲಾಂಕಣಿ ಮಡಗಾಂವ್ ಮಧ್ಯೆ ವಿಶೇಷ ರೈಲು ಘೋಷಣೆಯಾಗಿದೆ.

ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ವೇಲಾಂಕಣಿ ಹಬ್ಬಕ್ಕಾಗಿ ಕುಂದಾಪುರ ರೈಲು ಸಮಿತಿಗೆ ಸಲ್ಲಿಸಿದ್ದ ಮನವಿಯಲ್ಲಿ ಕುಂದಾಪುರ ಕ್ರೈಸ್ತ ಸಮುದಾಯ ವೇಲಾಂಕಣಿ ವಿಶೇಷ ರೈಲಿನ ಆರಂಭಕ್ಕೆ ಮನವಿ ಮಾಡಿದ್ದರು. ಈ ಮನವಿಯನ್ನು ಸಂಸದರ ಮುಂದಿಟ್ಟಿದ್ದ ಕುಂದಾಪುರ ರೈಲು ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಮನವಿ ಪರಿಗಣಿಸಲು ಸಂಸದರನ್ನು ಕೋರಿದ್ದರು.

ಈ ಬೇಡಿಕೆಯಂತೆ ಕಳೆದ ವಾರ ಕೊಂಕಣ ರೈಲ್ವೆ ನಿಗಮದ ಆಡಳಿತ ನಿರ್ದೇಶಕರ ಜತೆ ನಡೆದ ಸಭೆಯಲ್ಲಿ ಸಂಸದರು ವೇಲಾಂಕಣಿ ವಿಶೇಷ ರೈಲಿಗೆ ಸ್ಪಷ್ಟ ಸೂಚನೆ ನೀಡಿದ್ದರು. ಈ ಸೂಚನೆಯಂತೆ ಇಂದು ಕೊಂಕಣ ರೈಲ್ವೆ ವಿಶೇಷ ರೈಲಿನ ಪ್ರಕಟಣೆ ನೀಡಿದ್ದು, ಮಧ್ಯಾಹ್ನ 12ಕ್ಕೆ ಸೆ.6ರಂದು ಮಡಗಾಂವ್ ಬಿಡುವ ರೈಲು ಸಂಜೆ 4.20 ಕ್ಕೆ ಕುಂದಾಪುರ ತಲುಪಿ ಮರುದಿನ ಮಧ್ಯಾಹ್ನ 12 ಕ್ಕೆ ವೇಲಾಂಕಣಿ ತಲುಪಲಿದೆ.

ಅದೇ ದಿನ ರಾತ್ರಿ 11.50ಕ್ಕೆ ಹೊರಟು ಮರುದಿನ ಸಂಜೆ 6.40ಕ್ಕೆ ಕುಂದಾಪುರ ಮೂಲಕ ರಾತ್ರಿ 11 ಕ್ಕೆ ಮಡಗಾಂವ್ ತಲುಪಲಿದೆ. ಈ ರೈಲಿನ ಪ್ರತಿಕ್ರಿಯೆ ನೋಡಿ ಮುಂದೆ ರೆಗ್ಯುಲರ್ ರೈಲಿನ ಘೊಷಣೆ ಇತ್ಯಾದಿ ಸಾಧ್ಯವಾಗಲಿದೆ.

Leave a Reply

Your email address will not be published. Required fields are marked *

error: Content is protected !!