ವಿದೇಶಕ್ಕೆ ತೆರಳುವ ಮುನ್ನ ತೆರಿಗೆ ಕ್ಲಿಯರೆನ್ಸ್ ಕಡ್ಡಾಯ ನಿಯಮದ ಬಗ್ಗೆ ಕೇಂದ್ರ ಸರ್ಕಾರದ ಸ್ಪಷ್ಟನೆ

ನವದೆಹಲಿ: ವಿದೇಶಕ್ಕೆ ತೆರೆಳುವ ಮುನ್ನ ತೆರಿಗೆ ಕ್ಲಿಯರೆನ್ಸ್ ಪಡೆಯುವುದು ಕಡ್ಡಾಯ ಎಂಬ ಬಜೆಟ್ ಪ್ರಸ್ತವಾನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಕೇಂದ್ರ ಸರ್ಕಾರ ಈ ವಿಷಯವಾಗಿ ಸ್ಪಷ್ಟನೆ ನೀಡಿದೆ.

ಪ್ರಸ್ತಾವಿತ ತಿದ್ದುಪಡಿ ಎಲ್ಲರಿಗೂ ಅನ್ವಯವಾಗುವುದಿಲ್ಲ. ಆರ್ಥಿಕ ಅಕ್ರಮಗಳು ಅಥವಾ ತೆರಿಗೆ ಬಾಕಿ ಇರುವವರಿಗೆ ಮಾತ್ರ ಈ ಕ್ಲಿಯರೆನ್ಸ್ ನ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಹಣಕಾಸು ಸಚಿವಾಲಯವು, 2024 ರ ಹಣಕಾಸು ಮಸೂದೆಯಲ್ಲಿ, ಕಪ್ಪುಹಣ ಕಾಯಿದೆ, 2015 ರ ಉಲ್ಲೇಖವನ್ನು ಕಾಯ್ದೆಗಳ ಪಟ್ಟಿಗೆ ಸೇರಿಸಲು ಪ್ರಸ್ತಾಪಿಸಿದೆ, ಅದರ ಅಡಿಯಲ್ಲಿ ಯಾವುದೇ ವ್ಯಕ್ತಿಯು ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆಯಲು ತನ್ನ ಹೊಣೆಗಾರಿಕೆಗಳನ್ನು ತೆರವುಗೊಳಿಸಬೇಕಾಗಿದೆ.

ಪ್ರಸ್ತಾವಿತ ತಿದ್ದುಪಡಿಯು ಎಲ್ಲಾ ನಿವಾಸಿಗಳು ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆಯುವ ಅಗತ್ಯವಿಲ್ಲ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 230 ರ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆಯುವ ಅಗತ್ಯವಿಲ್ಲ. ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆಯುವ ಅಗತ್ಯವನ್ನು ಉಂಟುಮಾಡುವ ಕೆಲವು ವ್ಯಕ್ತಿಗಳ ಸಂದರ್ಭದಲ್ಲಿ ಮಾತ್ರ, ಅಂತಹ ಪ್ರಮಾಣಪತ್ರವನ್ನು ಪಡೆಯಲು ಅಗತ್ಯವಿರುವ ಸಂದರ್ಭಗಳು ಅಸ್ತಿತ್ವದಲ್ಲಿವೆ.

2004ರ ಅಧಿಸೂಚನೆಯ ಮೂಲಕ ಆದಾಯ ತೆರಿಗೆ ಇಲಾಖೆಯು ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಭಾರತದಲ್ಲಿ ನೆಲೆಸಿರುವ ವ್ಯಕ್ತಿಗಳು ಕೆಲವು ಸಂದರ್ಭಗಳಲ್ಲಿ ಮಾತ್ರ ಪಡೆಯಬೇಕಾಗಬಹುದು ಎಂದು ನಿರ್ದಿಷ್ಟಪಡಿಸಿದೆ ಎಂದು ಸಚಿವಾಲಯ ಹೇಳಿದೆ.

ವ್ಯಕ್ತಿಯು ಗಂಭೀರ ಹಣಕಾಸಿನ ಅಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರೆ ಮತ್ತು ಆದಾಯ ತೆರಿಗೆ ಕಾಯಿದೆ ಅಥವಾ ಸಂಪತ್ತು-ತೆರಿಗೆ ಕಾಯಿದೆಯಡಿಯಲ್ಲಿನ ಪ್ರಕರಣಗಳ ತನಿಖೆಯಲ್ಲಿ ಅವನ ಉಪಸ್ಥಿತಿಯು ಅವಶ್ಯಕವಾಗಿದ್ದರೆ, ಅಥವಾ ವ್ಯಕ್ತಿಯು ತನ್ನ ವಿರುದ್ಧ 10 ಲಕ್ಷ ರೂ.ಗಿಂತ ಹೆಚ್ಚಿನ ನೇರ ತೆರಿಗೆ ಬಾಕಿಯನ್ನು ಹೊಂದಿದ್ದು, ಅದನ್ನು ಯಾವುದೇ ಪ್ರಾಧಿಕಾರದಿಂದ ತಡೆಹಿಡಿಯಲಾಗಿಲ್ಲ ಎಂಬ ಪರಿಸ್ಥಿತಿ ಇದ್ದಾಗ ಮಾತ್ರ ಅಂತಹ ವ್ಯಕ್ತಿ ವಿದೇಶಕ್ಕೆ ತೆರಳುವುದಕ್ಕೂ ಮುನ್ನ ತೆರಿಗೆ ಕ್ಲಿಯರೆನ್ಸ್ ಪಡೆಯುವ ಸಾಧ್ಯತೆ ಇದೆ ಎಂದು ತೆರಿಗೆ ಇಲಾಖೆ ಹೇಳಿದೆ.

Leave a Reply

Your email address will not be published. Required fields are marked *

error: Content is protected !!