ಜನರಿಂದ ತಿರಸ್ಕರಿಸಲ್ಪಟ್ಟು, ರಾಜಕೀಯ ನಿವೃತ್ತಿ ಪಡೆಯುವ ಬದಲು ಕೀಳು ಮಟ್ಟದ ಅಪಪ್ರಚಾರ ನಡೆಸುತ್ತಿರುವ ಸೊರಕೆ ನಡೆ ಖಂಡನೀಯ- ಕಿಶೋರ್

ಉಡುಪಿ: ಕೊನೆಯ ಚುನಾವಣೆ ಎಂದು ಡಂಗುರ ಸಾರುತ್ತಾ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಸತತ ಎರಡು ಬಾರಿ ಜನತೆಯಿಂದ ತಿರಸ್ಕರಿಸಲ್ಪಟ್ಟು, ಗೌರವಯುತವಾಗಿ ರಾಜಕೀಯ ನಿವೃತ್ತಿ ಪಡೆಯುವ ಬದಲು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ದಿವಾಳಿತನ ಮತ್ತು ಹಗರಣಗಳನ್ನು ಮರೆಮಾಚುವ ದುರುದ್ದೇಶದಿಂದ ಕ್ಷುಲ್ಲಕ ರಾಜಕಾರಣ ನಡೆಸುತ್ತಾ, ಕಾಪು ಕ್ಷೇತ್ರದ ಜನಪ್ರಿಯ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ವಿರುದ್ಧ ಕೀಳು ಮಟ್ಟದ ಅಪಪ್ರಚಾರ ನಡೆಸುತ್ತಿರುವ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ನಡೆ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದರು.

ಅವರು ಬಿಜೆಪಿ ಕಾಪು ಮಂಡಲದ ವತಿಯಿಂದ ಉಡುಪಿ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

‘ಅನುದಾನದ ಕೊರತೆಯ ಸಬೂಬು ಹೇಳಿ ಅಭಿವೃದ್ಧಿ ನಿರ್ಲಕ್ಷ್ಯ ‘ ಎಂದು ಆರೋಪಿಸಿರುವ ವಿನಯ ಕುಮಾರ್ ಸೊರಕೆ ಮೊದಲು ಕಾಂಗ್ರೆಸ್ ಪಕ್ಷದ ಶಾಸಕರಿಗೆ ರಾಜ್ಯ ಸರಕಾರ ಪ್ರಸಕ್ತ ಸಾಲಿನಲ್ಲಿ ಎಷ್ಟು ಅನುದಾನ ಬಿಡುಗಡೆಗೊಳಿಸಿದೆ ಮತ್ತು ಅವರು ಕೈಗೊಂಡಿರುವ ಮಹಾನ್ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ವಿವರ ನೀಡಲಿ. ಅಧಿಕಾರದ ಲಾಲಸೆಯಿಂದ ಘೋಷಿಸಿದ ನಕಲಿ ಗ್ಯಾರಂಟಿಗಳನ್ನು ಪೂರೈಸಲಾಗದೆ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಹಗರಣಗಳಲ್ಲಿ ಮುಳುಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ದಿವಾಳಿತನ ಜಗಜ್ಜಾಹೀರಾಗಿದೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಇತರ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಚಿಕ್ಕಾಸನ್ನೂ ಬಿಡುಗಡೆ ಮಾಡದ ರಾಜ್ಯ ಸರಕಾರದ ಹುಳುಕನ್ನು ಮುಚ್ಚಿಟ್ಟು ಕಡಲ್ಕೊರೆತಕ್ಕೆ ಪರಿಹಾರ ಆಗಿಲ್ಲ ಎಂಬ ಆರೋಪ ಹೊರಿಸುತ್ತಿರುವ ಸೊರಕೆ ತಮ್ಮ ಸರಕಾರ ಅಭಿವೃದ್ಧಿಗಾಗಿ ಎಷ್ಟು ಹಣ ವ್ಯಯಿಸಿದೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದರು.

ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಕಾಂಗ್ರೆಸ್ ಪಕ್ಷದವರೇ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಿಲ್ಲವೆಂದು ಸಿ.ಎಂ.ವಿರುದ್ಧ ಹರಿಹಾಯ್ದಿರುವುದನ್ನು ಸೊರಕೆ ಗಮನಿಸಲಿಲ್ಲವೇ? ಅಥವಾ ಇದು ಸೊರಕೆ ಅವರ ಜಾಣ ಕುರುಡು ಪ್ರದರ್ಶನವೇ? 

ಕಳೆದ ಒಂದೂವರೆ ವರ್ಷಗಳಿಂದ ಕಡಲ್ಕೊರೆತಕ್ಕೆ ಸೂಕ್ತ ಪರಿಹಾರ ಕಲ್ಪಿಸಲು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳನ್ನು ಕರೆಸಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರೂ, ಬಿಟ್ಟಿ ಭಾಗ್ಯ ಮತ್ತು ಹಗರಣಗಳಿಂದ ಕಂಗೆಟ್ಟಿರುವ ರಾಜ್ಯ ಸರಕಾರ ಒಂದು ನಯಾ ಪೈಸೆಯನ್ನೂ ಮಂಜೂರು ಮಾಡದೇ ಇರುವುದು ಸರಕಾರದ ದಿವಾಳಿತನಕ್ಕೆ ಹಿಡಿದ ಕೈಗನ್ನಡಿಯಂತಿದೆ ಎಂದರು.

ಗುತ್ತಿಗೆದಾರರನ್ನು ಮನೆಗೆ ಕರೆಯಿಸಿ ವಿವಿಧ ಇಲಾಖೆಗಳಿಂದ ಹಣ ಮಂಜೂರು ಮಾಡಿಸುತ್ತೇನೆ ಎಂದು ಸುಳ್ಳು ಭರವಸೆ ನೀಡುತ್ತಿರುವ ಸೊರಕೆ ಅವರಿಗೆ ಕಡಲ್ಕೊರೆತಕ್ಕೂ ಅನುದಾನ ಮಂಜೂರು ಮಾಡಿಸುವ ಭರವಸೆ ನೀಡಿ ಗುತ್ತಿಗೆದಾರರಿಂದ ಈ ಕೆಲಸವನ್ನು ಮಾಡಿಸಬಹುದಲ್ಲವೇ?

ಜನ ಬೆಂಬಲ ಕಳೆದುಕೊಂಡಿರುವ ಸೊರಕೆ ಆಡಳಿತಾತ್ಮಕ ಹಾಗೂ ಅಭಿವೃದ್ಧಿ ವಿಷಯದಲ್ಲಿ ಶಾಸಕರ ಹಕ್ಕು ಭಾಧ್ಯತೆಗಳಿಗೆ ತೆಡೆಯೊಡ್ಡಿ, ತಮ್ಮ ಸರಕಾರವಿದೆಯೆಂದು ಅಧಿಕಾರಿಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರಭಾವ ಬೀರಿ ಆಡಳಿತಾತ್ಮಕ ಹಾಗೂ ಅಭಿವೃದ್ಧಿ ವಿಷಯದಲ್ಲಿ ತೊಂದರೆ ಉಂಟುಮಾಡುತ್ತಿರುವುದು ಶೋಭೆಯೇ? ಎಂದು ಅವರು ಪ್ರಶ್ನಿಸಿದರು.

ಸೊರಕೆ ಅವರು ಕಾಪು ಪುರಸಭೆ ಘೋಷಣೆ ಮಾಡಿದಾಗ 100 ಕೋಟಿ ರೂ. ಅನುದಾನ ನೀಡಿರುತ್ತೇನೆ ಎಂದು ಸುಳ್ಳು ಹೇಳಿರುತ್ತಾರೆ. ಆ ಅನುದಾನ ಎಲ್ಲಿಗೆ ಹೋಗಿದೆ ಎಂದು ಅವರು ಉತ್ತರಿಸಲಿ. ಅಲ್ಲದೆ ಸುಮಾರು 500 ನಿವೇಶನಕ್ಕೆ ಶಿಲಾನ್ಯಾಸ ಮಾಡಿರುತ್ತಾರೆ, ಪುರಸಭೆಗೆ ಕುಡಿವ ನೀರಿಗೆ ಯಾವುದೇ ಅನುದಾನ ನೀಡದೆ ಶಿಲಾನ್ಯಾಸ ಮಾಡಿರುತ್ತಾರೆ.

ಕಾಪು ಕ್ಷೇತ್ರದ ಜನಪ್ರತಿನಿಧಿಯಾಗಿ ಶಾಸಕ ಗುರ್ಮೆ ಅವರು ರಸ್ತೆಗಳ ಅಭಿವೃದ್ಧಿ, ಕಡಲೊರೆತ ಭಾದಿತ ಪ್ರದೇಶಗಳಲ್ಲಿ ಶಾಶ್ವತ ತಡೆಗೋಡೆ ರಚನೆ, ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ, ನದಿ ದಂಡೆ ಸಂರಕ್ಷಣೆ, ಕಿಂಡಿ ಅಣೆಕಟ್ಟುಗಳ ನಿರ್ಮಾಣ, ಲೋಕೋಪಯೋಗಿ ರಸ್ತೆಗಳ ಅಭಿವೃದ್ಧಿ, ಪ.ಜಾತಿ ಮತ್ತು ಪ.ಪಂಗಡಗಳ ಕಾಲೋನಿಗಳಿಗೆ ಮೂಲಭೂತ ಸೌಕರ್ಯ ಮುಂತಾದವುಗಳ ಬಗ್ಗೆ ಸಂಬಂಧಪಟ್ಟ ಇಲಾಖಾ ಸಚಿವರಲ್ಲಿ ಖುದ್ದು ಭೇಟಿಯಾಗಿ ಪ್ರಸ್ತಾವನೆ ಯನ್ನು ಸಲ್ಲಿಸಿದ್ದರೂ ಉದ್ದೇಶಪೂರ್ವಕವಾಗಿ ಅಭಿವೃದ್ಧಿ ಕೆಲಸ ಆಗಬಾರದೆಂಬುದು ಪ್ರಸ್ತುತ ರಾಜ್ಯ ಕಾಂಗ್ರೆಸ್‌ ಸರಕಾರದ ಹುನ್ನಾರವಾಗಿದೆ ಎಂದು ಅವರು ತಿಳಿಸಿದರು.

ಸಾರ್ವಜನಿಕ ಕೆಲಸಕ್ಕೆ ತೊಂದರೆ ಉಂಟುಮಾಡುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪರವಾಗಿ ನಿಂತು ಗ್ರಾಮದ ಅಭಿವೃದ್ಧಿಯ ಹಿನ್ನಡೆ ಬಯಸುತ್ತಿರುವ ಇಂತಹ ರಾಜಕಾರಣಿಗೆ, ಸಮಾಜ ಸೇವೆಯೊಂದಿಗೆ ಸಾರ್ವಜನಿಕ ಜೀವನದಲ್ಲಿ ಸಚ್ಚಾರಿತ್ರ್ಯವನ್ನು ಕಾಪಾಡಿಕೊಂಡು ಬಂದಿರುವ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಸೊರಕೆ ಅವರು ಕೇವಲ ಪ್ರಚಾರದ ತೆವಲಿಗೆ ಕಾಪು ಶಾಸಕರ ತೇಜೋವಧೆ ನಡೆಸುವ ದುರುದ್ದೇಶದಿಂದ ಅಸಂಬದ್ಧ ಹೇಳಿಕೆ ನೀಡುವುದನ್ನು ಬಿಟ್ಟು ಓರ್ವ ಜವಾಬ್ದಾರಿಯುತ ಮಾಜಿ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳುವುದು ಉತ್ತಮ. ಇದೇ ಚಾಳಿಯನ್ನು ಮುಂದುವರಿಸಿದಲ್ಲಿ ಅದಕ್ಕೆ ತಕ್ಕ ಉತ್ತರವನ್ನು ನೀಡಲು ಬಿಜೆಪಿ ಸದಾ ಸನ್ನದ್ದವಾಗಿದೆ ಎಂದು ಕಿಶೋರ್ ಕುಮಾರ್ ತಿಳಿಸಿದರು.

ರಾಜ್ಯ ಸರಕಾರದ ಹಗರಣಗಳನ್ನು ಮರೆಮಾಚಲು ಕಾಂಗ್ರೆಸ್ ಪರಶುರಾಮ ಥೀಮ್ ಪಾರ್ಕ್ ಯೋಜನೆಯನ್ನು ಗುರಾಣಿಯನ್ನಾಗಿಸಿದೆ:

ಕಾರ್ಕಳ ತಾಲೂಕಿನ ಬೈಲೂರು ಉಮಿಕ್ಕಳ ಬೆಟ್ಡದ ಮೇಲಿನ ಪರಶುರಾಮ ಥೀಮ್ ಪಾರ್ಕ್ ನ 11 ಕೋಟಿ ರೂ. ಯೋಜನಾ ಮೊತ್ತದಲ್ಲಿ 6 ಕೋಟಿ ರೂ. ಬಿಡುಗಡೆಯಾಗಿದ್ದು, ವ್ಯವಸ್ಥಿತವಾಗಿ ಕೆಲಸ ಕಾರ್ಯಗಳು ನಡೆದಿವೆ. ಆದರೆ ಕಾಂಗ್ರೆಸ್ ಮಾತ್ರ ರಾಜ್ಯ ಸರಕಾರ ಸಾವಿರಾರು ಕೋಟಿ ರೂಪಾಯಿಗಳ ಹಗರಣಗಳಲ್ಲಿ ಸಿಲುಕಿಕೊಂಡಿದ್ದರೂ ಅಪಪ್ರಚಾರ, ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಹಾಗೂ ಕಾನೂನು ಉಲ್ಲಂಘನೆ ಮಾಡುವ ಮೂಲಕ ಪರಶುರಾಮ ಥೀಮ್ ಪಾರ್ಕ್ ಯೋಜನೆಯನ್ನು ತಮ್ಮ ಸರಕಾರದ ಭ್ರಷ್ಟಾಚಾರ, ಹಗರಣಗಳಿಂದ ನುಣುಚಿಕೊಳ್ಳಲು ಗುರಾಣಿಯನ್ನಾಗಿಸುವ ವಿಫಲ ಯತ್ನದಲ್ಲಿ ತೊಡಗಿರುವುದು ಹಾಸ್ಯಾಸ್ಪದವಾಗಿದೆ ಎಂದು ಕಿಶೋರ್ ಕುಮಾರ್ ತಿಳಿಸಿದರು.

ಪರಶುರಾಮ ಥೀಮ್ ಪಾರ್ಕ್ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಒಂದು ವರ್ಷದ ಬಳಿಕ ಯೋಜನೆಯ ಅನುಷ್ಠಾನಾಧಿಕಾರಿ ಎಂದು ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರನ್ನು ಅಮಾನತುಗೊಳಿಸಿದೆ. ತಮ್ಮದೇ ಸರಕಾರದ ಆಡಳಿತವಿದ್ದರೂ ತ್ವರಿತ ಗತಿಯಲ್ಲಿ ತನಿಖೆ ನಡೆಸಿ ಕಾಮಗಾರಿಯ ಗುಣಮಟ್ಟವನ್ನು ಖಾತ್ರಿಪಡಿಸಿಕೊಂಡು ತಮ್ಮ ಅನುಮಾನವನ್ನು ಪರಿಹರಿಸಿಕೊಳ್ಳಲಾಗದ ಕಾಂಗ್ರೆಸ್ ಸ್ವಯಂಕೃತ ಅಪರಾಧ, ಅಸಹಾಯಕತೆ ಯಿಂದ ಬಳಲುತ್ತಾ, ಮಾಜಿ ಸಚಿವರ ವಿರುದ್ಧ ಸುಳ್ಳು ಆರೋಪವನ್ನು ಜೀವಂತವಾಗಿರಿಸಿ ಜನರ ದಾರಿ ತಪ್ಪಿಸಲು ಹರಸಾಹಸ ಪಡುತ್ತಿರುವುದು ಸ್ಪಷ್ಟವಾಗಿದೆ ಎಂದರು.

ಜನತೆಗೆ ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಜನ ವಿರೋಧಿ, ಅಭಿವೃದ್ಧಿ ವಿರೋಧಿ ಕಾಂಗ್ರೆಸ್ಸಿಗೆ ಮುoದಿನ ಎಲ್ಲ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಸೊರಕೆ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ

ಬಿಜೆಪಿ ಕಾಪು ಮಂಡಲಾಧ್ಯಕ್ಷ ಜಿತೇಂದ್ರ ಶೆಟ್ಟಿ ಮತ್ತು ನಿಕಟಪೂರ್ವ ಮಂಡಲಾಧ್ಯಕ್ಷ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಮಾತನಾಡಿ ಕಾಪು ವಿಧಾನಸಭಾ ಕ್ಷೇತ್ರದ ಸಜ್ಜನ, ಕ್ರಿಯಾಶೀಲ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ವರ್ಚಸ್ಸಿಗೆ ಕುಂದು ತರುವ ದುರುದ್ದೇಶ ದಿಂದ ಅಪಪ್ರಚಾರ ನಡೆಸುತ್ತಿರುವ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ವರ್ತನೆಯನ್ನು ಖಂಡಿಸಿ, ಇಂತಹ ಗೀಳು ಮುಂದುವರಿಸಿದಲ್ಲಿ ಸೊರಕೆ ವಿರುದ್ಧ ಜನಾಂದೋಲನ ಜರಗಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಪು ಮಂಡಲ ಉಪಾಧ್ಯಕ್ಷ ಅನಿಲ್ ಕುಮಾರ್, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!