ಮಣಿಪಾಲ: ಚಲಿಸುತ್ತಿದ್ದ ಸ್ಕೂಟರ್ ಮೇಲೆ ಬಿದ್ದ ವಿದ್ಯುತ್ ತಂತಿ- ಸವಾರ ಗಂಭೀರ, ಪತ್ನಿ ಮಗು ಪಾರು

ಮಣಿಪಾಲ: ಚಲಿಸುತ್ತಿದ್ದ ಸ್ಕೂಟರ್ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಸವಾರರೊಬ್ಬರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಅಲೆವೂರು -ಮಣಿಪಾಲ ರಸ್ತೆಯ ಬಡಗಬೆಟ್ಟು ಇಂಡಸ್ಟ್ರೀಯಲ್ ಏರಿಯಾದ ಮೀನು ಮಾರುಕಟ್ಟೆಯ ಬಳಿ ಇಂದು ಬೆಳಗ್ಗೆ ನಡೆದಿದೆ.

ಗಾಯಗೊಂಡವರನ್ನು ಸ್ಕೂಟರ್ ಸವಾರ ಕುರ್ಕಾಲು ಗ್ರಾಮದ ಕುಂಜಾರು ಗಿರಿಯ ಶಶಿಧರ್ ಶೆಟ್ಟಿ (41) ಎಂದು ಗುರುತಿಸಲಾಗಿದೆ. ಇವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಹಸವಾರರಾದ ಶಶಿಧರ್ ಶೆಟ್ಟಿಯ ಪತ್ನಿ ದಿವ್ಯಾ ಶೆಟ್ಟಿ ಹಾಗೂ ಪುತ್ರಿ ತ್ರೀನೇತ್ರ ಶೆಟ್ಟಿ(4) ಅಪಾಯದಿಂದ ಪಾರಾಗಿದ್ದಾರೆ.

ಇವರು ಬಡಗಬೆಟ್ಟು ಕಡೆಯಿಂದ ಅಲೆವೂರು ಕಡೆಗೆ ತನ್ನ ಪತ್ನಿ ಮಗುವಿನೊಂದಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ರಸ್ತೆಯ ಬದಿಯ ವಿದ್ಯುತ್ ಕಂಬದ ತಂತಿ ಅಕಸ್ಮಿಕವಾಗಿ ತುಂಡಾಗಿ ಬಿತ್ತೆನ್ನಲಾಗಿದೆ. ಇದರಿಂದ ತುಂಡಾದ ತಂತಿ ಮುಖ್ಯರಸ್ತೆಗೆ ಅಡ್ಡ ಬಂದು ಸವಾರನ ಕುತ್ತಿಗೆಗೆ ಸಿಲುಕಿದ ಪರಿಣಾಮ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!