ಉಡುಪಿ ಶಾಸಕ ಯಶ್ಪಾಲ್ ಸುವರ್ಣರ ಬಾಲಿಶತನದ ಹೇಳಿಕೆ ಖಂಡನೀಯ: ಕಾಂಚನ್

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್‌ ರವಿವಾರ ಉಡುಪಿ ಜಿಲ್ಲೆಯ ಕಡಲತೀರದ ವಿವಿಧ ಭಾಗಗಳಲ್ಲಿ ಆಗಿರುವ ಕಡಲ್ಕೊರೆತ ಹಾಗೂ ಕೃಷಿ ಹಾನಿಯ ಬಗ್ಗೆ ವೀಕ್ಷಣೆ ನಡೆಸಿ ನಷ್ಟದ ಬಗ್ಗೆ ವರದಿ ನೀಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿರುತ್ತಾರೆ. ಆದರೆ ಈ ಬಗ್ಗೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಉಸ್ತುವಾರಿ ಸಚಿವರ ಜಿಲ್ಲಾ ಭೇಟಿ ಸಮುದ್ರ ವಿಹಾರಕ್ಕೆ ತೆರಳಿ ಚಿಕ್ಕಿತಿಂದಾಂತಾಗಿದೆ ಎಂದು ನೀಡಿರುವ ಬಾಲಿಶತನದ ಹೇಳಿಕೆಯಿಂದ ಅವರೊರ್ವ ಅಪ್ರಬುದ್ಧ ಶಾಸಕ ಎಂದು ಸಾಬೀತಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.

ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸದ ಮಾಹಿತಿಯು ಜಿಲ್ಲೆಯ ಲೋಕಸಭಾ ಸದಸ್ಯರಿಗೆ, ರಾಜ್ಯಸಭಾ ಸದಸ್ಯರಿಗೆಎಲ್ಲಾ ಶಾಸಕರಿಗೆ ಮತ್ತು ವಿವಿಧ ಇಲಾಖೆಯ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಹೋಗುತ್ತದೆ. ಇಲ್ಲಿನ ಶಾಸಕರು ನೈಜ್ಯ ಜನಪರ ಕಾಳಜಿಯುಳ್ಳವರಾಗಿದ್ದರೆ ಸಚಿವರೊಂದಿಗೆ ಪ್ರಾಕೃತಿಕ ವಿಕೋಪ ಪೀಡಿತ ಪ್ರದೇಶಕ್ಕೆ ಹೋಗಿ ಸಮಸ್ಯೆಯ ಬಗ್ಗೆ ಚರ್ಚಿಸಿ ಗರಿಷ್ಠ ಪರಿಹಾರ ದೊರಕಿ‌ಸಿಕೊಡುವಲ್ಲಿ ಪ್ರಯತ್ನಿಸಬಹುದಾಗಿತ್ತು. ಜನಸೇವೆಯ ಹೆಸರಿನಲ್ಲಿ ಪ್ರಚಾರ, ಕಾಟಚಾರ, ಹಾಗೂ ಭಾವನಾತ್ಮಕ ವಿಚಾರಗಳೊಂದಿಗೆ ಜನರನ್ನು ಉದ್ರೇಕಿಸುವುದನ್ನು ಚಾಳಿಯಾಗಿಸಿಕೊಂಡು ಈ ಯಶಪಾಲ್ ಸುವರ್ಣ‌ರವರು ಶಾಸಕ ಸ್ಥಾನದ ಗೌರವವನ್ನು ಮರೆತು ಪುಂಡು ಪೋಕರಿಗಳ ರೀತಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಖಂಡನೀಯ. ಉಡುಪಿ ವಿಧಾನಸಭಾ ಕ್ಷೇತ್ರದ ಜನರು ತಮ್ಮನ್ನು ಕ್ಷೇತ್ರದ ಅಭಿವೃದ್ಧಿ ಮಾಡಲು ಆಯ್ಕೆ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಕಷ್ಟಗಳಿಗೆ ಮೊದಲು ಸ್ಪಂದಿಸಿ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರದ ಜೊತೆ ಒಳ್ಳೆಯ ಸಂಬಂಧವನ್ನಿಟ್ಟುಕೊಂಡು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಿ. ತಾವು ಓರ್ವ ಶಾಸಕನೆಂದು ನೆನಪಿಟ್ಟುಕೊಳ್ಳಿ ಮತ್ತು ಉಡುಪಿಯ ಜನರಿಗಾಗಿ ಉತ್ತಮ ಕೆಲಸ ಮಾಡಿ ಮಾದರಿಯಾಗಿ ಅದು ಬಿಟ್ಟು ಇಂತಹ ಹಗುರವಾದ ಮಾತುಗಳನ್ನು ಆಡದಿರಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!