ಕುಂದಾಪುರ: ನಿಯಂತ್ರಣ ತಪ್ಪಿ ಚರಂಡಿಗಿಳಿದ ಬಸ್ – 17 ವಿದ್ಯಾರ್ಥಿಗಳಿಗೆ ಗಾಯ

ಕುಂದಾಪುರ, ಜು 22: ಶಿವಮೊಗ್ಗ ಕಡೆಯಿಂದ ಬೈಂದೂರು ಕಡೆಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗಿಳಿದ ಘಟನೆ ಕೊಲ್ಲೂರು ಸಮೀಪದ ದಳಿಮುರ್ಕ್ಲು ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ.

ಖಾಸಗಿ ಬಸ್ಸು ಸೋಮವಾರ ಬೆಳಿಗ್ಗೆ ಶಿವಮೊಗ್ಗದಿಂದ ಬೈಂದೂರಿಗೆ ಬರುತ್ತಿತ್ತು. ಬೆಳಿಗ್ಗೆ 8.45ರ ಸುಮಾರಿಗೆ ಕೊಲ್ಲೂರು ಸಮೀಪದ ದಳಿಮುರ್ಕ್ಲು ಬಳಿ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗೆ ಚರಂಡಿಗೆ ಇಳಿದ ಘಟನೆ ನಡೆದಿದೆ.

ಬಸ್ಸಿನಲ್ಲಿ ಕೊಲ್ಲೂರು ಮೂಕಾಂಬಿಕ ಹೈಸ್ಕೂಲ್ ನ 6 ವಿದ್ಯಾರ್ಥಿಗಳು ಹಾಗೂ ಪಿಯುಸಿಯ 11 ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಈ ಪೈಕಿ ಐವರು ವಿದ್ಯಾರ್ಥಿಗಳಿಗೆ ಮೂಳೆ ಮುರಿತವಾಗಿರುವ ಬಗ್ಗೆ ತಿಳಿದು ಬಂದಿದ್ದು, ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ, ಕೊಲ್ಲೂರು ಠಾಣೆಯ ಪಿಎಸ್ಐಗಳಾದ ವಿನಯ್ ಎಂ. ಕೊರ್ಲಹಳ್ಳಿ, ಸುಧಾರಾಣಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಅಪಘಾತದಿಂದ ಮಕ್ಕಳು ಕಂಗಾಲಾಗಿದ್ದು ಬೈಂದೂರು ಬಿಇಒ ನಾಗೇಶ್ ನಾಯಕ್ ಹಾಗೂ ಹೆಚ್ಚುವರಿ ಎಸ್ಪಿ ಶಾಲೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.

Leave a Reply

Your email address will not be published. Required fields are marked *

error: Content is protected !!