ಕಳರಿ ಸಮರ ಕಲೆಯನ್ನು ಶಾಲೆಗಳಲ್ಲೂ ಕಲಿಸಿ: ಪದ್ಮಶ್ರೀ ಮೀನಾಕ್ಷಿ ಅಮ್ಮ

ಉಡುಪಿ: ಕಳರಿ ಸಮರ ಕಲೆಯನ್ನು ಮಕ್ಕಳಿಗೆ ಅಗತ್ಯವಾಗಿ ಕಲಿಸಬೇಕು. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ತಮ್ಮ ಆತ್ಮರಕ್ಷಣೆಗಾಗಿ ಈ ಕಲೆಯನ್ನು ಅಭ್ಯಸಿಸಬೇಕು. ಇದರಿಂದ ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಧೃಡರಾಗುತ್ತಾರೆ. ಆದುದರಿಂದ ಈ ಕಲೆಯನ್ನು ಕರಾಟೆಯಂತೆ ಶಾಲೆಗಳಲ್ಲಿಯೂ ಕಲಿಸುವ ಕಾರ್ಯ ನಡೆಸಬೇಕು ಎಂದು ಪದ್ಮಶ್ರೀ ಪುರಸ್ಕೃತ ಕಳರಿಪಟು ಮೀನಾಕ್ಷಿ ಅಮ್ಮ ಹೇಳಿದ್ದಾರೆ.

ಶ್ರೀಕೃಷ್ಣ ಸೇವಾ ಬಳಗದ ಆಶ್ರಯದಲ್ಲಿ ಶನಿವಾರ ಉಡುಪಿ ಶ್ರೀಪೂರ್ಣ ಪ್ರಜ್ಞ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಕಳರಿ ಕಲೆಯನ್ನು 4 ಹಂತದಲ್ಲಿ ಕಲಿಯಬೇಕಾಗುತ್ತದೆ. ಮೊದಲು ವ್ಯಾಯಮಾ, ನಂತರ ಕೋಲು, ಬಳಿಕ ಆಯುಧ ಕೊನೆಯದಾಗಿ ಬರೀ ಕೈಯಲ್ಲಿ ಎದುರಾಳಿಯನ್ನು ಎದುರಿಸುವ ಬಗ್ಗೆ ಕಲಿಯಬೇಕು. ಮೊದಲು ಈ ಕಲೆಯನ್ನು ಕರಗತ ಮಾಡಿಕೊಳ್ಳಲು 13 ವರ್ಷಗಳು ಬೇಕಾಗಿರುತ್ತಿತ್ತು. ಈಗ ಮಕ್ಕಳು ತುಂಬಾ ಬೇಗನೆ ಕಲಿಯುತ್ತಿದ್ದಾರೆ. ಕೇವಲ ಆತ್ಮರಕ್ಷಣೆ ಮಾತ್ರವಲ್ಲದೆ ದೇಹಕ್ಕೆ ಆರೋಗ್ಯ ಮತ್ತು ಮಾನಸಿಕ ಧೈರ್ಯ ಈ ಕಲೆಯನ್ನು ಎಲ್ಲ ವಯಸ್ಕರು ಕಲಿಯಬೇಕಾಗಿದೆ ಎಂದರು.

ಅಧ್ಯಕ್ಷತೆಯನ್ನು ಅದಮಾರು ಮಠಾಧೀಶ ಶ್ರೀಈಶ ಪ್ರಿಯತೀರ್ಥ ಸ್ವಾಮೀಜಿ ವಹಿಸಿದ್ದರು. ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ, ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಉದ್ಯಮಿ ಇನ್ನಾ ರಾಮದಾಸ ಮಡುಮಣ್ಣಾ ಅವರನ್ನು ಗೌರವಿಸಲಾಯಿತು.ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಉಪಸ್ಥಿತರಿದ್ದರು. ಶ್ರೀಕಾಂತ ಶೆಟ್ಟಿ ಕಾರ್ಕಳ ತೌಳವ ಸಮರ ಪರಂಪರೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಬಳಿಕ ಕಳರಿಪಟು ಮೀನಾಕ್ಷಿ ಅಮ್ಮ ಅವರಿಂದ ಕಳರಿಪಯಟ್ಟು ಕುರಿತು ಪ್ರಾತ್ಯಕ್ಷಿಕೆ ಯೊಂದಿಗೆ ದಿನೇಶನ್ ಕಣ್ಣೂರು ಮತ್ತು ಬಳಗದಿಂದ ಕಳರಿಪಯಟ್ಟು ಪ್ರದರ್ಶನ ನಡೆಯಿತು. ಡಾ. ರಾಘವೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!