ಹಣ ಹೂಡಿಕೆ ಮಾಡಿಸಿ ವಂಚನೆ ಆರೋಪ: ಬ್ಯಾಂಕ್ ಮ್ಯಾನೇಜರ್ ಸಹಿತ ಇಬ್ಬರ ವಿರುದ್ಧ ಪ್ರಕರಣ ದಾಖಲು

ಮಂಗಳೂರು, ಜೂ.11: ಖಾಸಗಿ ಬ್ಯಾಂಕ್‌ವೊಂದರ ಮ್ಯಾನೇಜರ್ ಇನ್ನೊಬ್ಬನ ಜತೆ ಸೇರಿಕೊಂಡು ವ್ಯವಹಾರದಲ್ಲಿ 65 ಲಕ್ಷ ರೂ. ಹಣ ಹೂಡಿಕೆ ಮಾಡಿಸಿ ಬಳಿಕ ವಂಚಿಸಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕಂಪಾಡಿ ಕುಕ್ಕಾಡಿ ಕಾಂಪ್ಲೆಕ್ಸ್‌ನಲ್ಲಿ ಮಳಿಗೆ ಹೊಂದಿರುವ ಶರೀಫ್ ಮತ್ತು ಸುರತ್ಕಲ್ ಖಾಸಗಿ ಬ್ಯಾಂಕ್ ಶಾಖೆಯ ಮ್ಯಾನೇಜರ್ ರಾಘವೇಂದ್ರ ಶೇಟ್ ಪ್ರಕರಣದ ಆರೋಪಿಗಳು.

ತಾನು ತನ್ನ ಪತ್ನಿಯ ಜತೆ ಸೇರಿ ಸುರತ್ಕಲ್ ಖಾಸಗಿ ಬ್ಯಾಂಕ್ ಶಾಖೆಯಲ್ಲಿ ಖಾತೆ ತೆರೆದಿದ್ದೆ. ಅದೇ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದ ತನ್ನ ಪರಿಚಿತ ರಾಘವೇಂದ್ರ ಶೇಟ್ ಕುಕ್ಕಾಡಿಯ ಕಾಂಪ್ಲೆಕ್ಸ್‌ವೊಂದರ ಮಾಲಕ ಶರೀಫ್‌ನ ಪರಿಚಯ ಮಾಡಿಕೊಟ್ಟಿದ್ದರು. ಹಾಗೇ ಬ್ಯಾಂಕ್‌ನಲ್ಲಿ ಠೇವಣಿ ಇಡುವ ಬದಲು ಶರೀಫ್ ಜತೆ ಕೋಕ್ ಸರಬರಾಜು ವ್ಯವಹಾರದಲ್ಲಿ ಪಾಲುದಾರನಾಗಲು ಸೂಚಿಸಿದ್ದರು. ಅದರಂತೆ ತಾನು ಇನ್ನೊಂದು ಬ್ಯಾಂಕ್ ಖಾತೆಯಿಂದ 2022ರ ಜೂ.6ರಂದು 50 ಲಕ್ಷ ರೂ.ವನ್ನು ಶರೀಫ್ ಖಾತೆಗೆ ವರ್ಗಾಯಿಸಿದ್ದೆ. ಹಣದ ಭದ್ರತೆಗಾಗಿ ಅಬ್ದುಲ್ ಬಶೀರ್ ಎಂಬಾತನ ಹೆಸರಿನಲ್ಲಿರುವ ಸ್ಥಿರಾಸ್ತಿಯನ್ನು ಸಾಲ ವ್ಯವಹಾರಕ್ಕಾಗಿ ಕರಾರು ಮಾಡಿಸಲಾಗಿತ್ತು. ಬಳಿಕ ಅ.17ರಂದು 15 ಲಕ್ಷ ರೂ.ವನ್ನು ಮತ್ತೆ ಶರೀಫ್‌ಗೆ ವರ್ಗಾವಣೆ ಮಾಡಿದ್ದೆ. ಅದಕ್ಕೂ ಚೆಕ್ ಲೀಫ್ ಪಡೆಯಲಾಗಿದೆ. ಇದಾದ ಬಳಿಕ ಕರಾರಿನಂತೆ ಶರೀಫ್ ಹಣ ಹಿಂತಿರುಗಿಸಲು ವಿಫಲನಾಗಿದ್ದರಿಂದ ಆತ ಈ ಹಿಂದೆ ನೀಡಿದ ಚೆಕ್ಕನ್ನು ನಗದೀಕರಣಕ್ಕಾಗಿ ಬ್ಯಾಂಕಿಗೆ ಹಾಕಿದಾಗ ಚೆಕ್ ಬೌನ್ಸ್ ಆಗಿರುತ್ತದೆ. ಹಣದ ಹೂಡಿಕೆ ವಿಚಾರದಲ್ಲಿ ಶರೀಫ್ ರಾಘವೇಂದ್ರನಿಗೆ ಕಮಿಷನ್ ಹಣ ಕೊಟ್ಟಿರುವುದಾಗಿ ತಿಳಿಸಿದ್ದಾನೆ. ರಾಘವೇಂದ್ರ ಶೇಟ್‌ನ ದುಷ್ಪ್ರೇರಣೆಯಂತೆ ಶರೀಫ್‌ನ ವ್ಯವಹಾರಕ್ಕೆ ಹಣ ತೊಡಗಿಸಿ ಬಳಿಕ ವಾಪಸ್ ನೀಡದೆ ವಂಚಿಸಿರುವುದಾಗಿ ಸೆನ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಪ್ರದೀಪ್ ಕುಮಾರ್ ಎಂಬವರ ಪತ್ನಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!