ಏ.9: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

ಉಡುಪಿ: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಕಾಮಗಾರಿಗಳು ಬಹಳಷ್ಟು ಭರದಿಂದ ಸಾಗುತ್ತಿದ್ದು 2024ರ ಎಪ್ರಿಲ್, ಮೇ ತಿಂಗಳಿನಲ್ಲಿಯೇ ಪ್ರತಿಷ್ಠೆ ಹಾಗೂ ಬ್ರಹ್ಮಕಲಶ  ಎಂದು ನಿಶ್ಚಯಿಸಿದ್ದು, ಆಪ್ರಯುಕ್ತ ಎಪ್ರಿಲ್ 9ರ ಮಂಗಳವಾರದಂದು ಬೆಳಿಗ್ಗೆ ಗಂಟೆ 8.30 ಕ್ಕೆ  ಸರಿಯಾಗಿ ಮಾರಿಯಮ್ಮ ಮತ್ತು  ಉಚ್ಚಂಗಿ ದೇವಿಯಲ್ಲಿ  ಪ್ರಾರ್ಥಿಸುವ ಮೂಲಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡುವುದೆಂದು ತೀರ್ಮಾನಿಸಲಾಗಿದೆ ಎಂದು ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿಯವರು ಹೇಳಿದ್ದಾರೆ.

ಅವರು ದೇವಳದ ಕಛೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಪುವಿನ ಅಮ್ಮನ ದೇಗುಲದ  ಕಾಮಗಾರಿಗಳು ಬಹಳಷ್ಟು ಭರದಿಂದ ಸಾಗುತ್ತಿದ್ದು 2024ರ ಎಪ್ರಿಲ್, ಮೇ ತಿಂಗಳಿನಲ್ಲಿಯೇ ಪ್ರತಿಷ್ಠೆ ಹಾಗೂ ಬ್ರಹ್ಮಕಲಶ ಮಾಡಬಹುದೆಂದು ನಿಶ್ಚಯಿಸಿದ್ದರೂ, ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಮಾಡಲು ಹಾಗೂ ಕಾರ್ಯಕ್ರಮದಲ್ಲಿ ಗಣ್ಯರೆಲ್ಲರೂ ಭಾಗವಹಿಸಲು ತೊಂದರೆಯಾಗುತ್ತದೆ ಎಂದು ತಿಳಿದು ಬಂದಿದೆ.

ಅಲ್ಲದೇ ಜೂನ್ 12 ರಿಂದ ದಕ್ಷಿಣಾಯಣ ಪ್ರಾರಂಭವಾಗುವುದರಿಂದ ಪ್ರತಿಷ್ಠೆಗೆ ಸೂಕ್ತವಾದ ದಿನಗಳು ಲಭ್ಯವಾಗಿರುವುದಿಲ್ಲ. ಆದುದರಿಂದ ಅಭಿವೃದ್ಧಿ ಸಮಿತಿಯು ಕ್ಷೇತ್ರದ ಪ್ರಧಾನ ತಂತ್ರಿಗಳಾದ ಶ್ರೀ ಕುಮಾರಗುರು ತಂತ್ರಿಯವರೊಂದಿಗೆ ಗಳೊಂದಿಗೆ ಚರ್ಚಿಸಿ 2025ರ ಜನವರಿ 14ರ ನಂತರ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿ ಪಡಿಸುವುದೆಂದು ನಿರ್ಧರಿಸಲಾಗಿದೆ.

ಈ ಬಗ್ಗೆ ವಿದ್ವಾನ್ ಶ್ರೀ  ಕುಮಾರಗುರು ತಂತ್ರಿಯವರ ನಿರ್ದೇಶನದಂತೆ ಇದೇ ಬರುವ ಎಪ್ರಿಲ್ 9ರ ಮಂಗಳವಾರದಂದು ಬೆಳಿಗ್ಗೆ ಗಂಟೆ 8.30 ಕ್ಕೆ  ಸರಿಯಾಗಿ ಮಾರಿಯಮ್ಮ ಮತ್ತು  ಉಚ್ಚಂಗಿ ದೇವಿಯಲ್ಲಿ  ಪ್ರಾರ್ಥಿಸುವ ಮೂಲಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡುವುದೆಂದು ತೀರ್ಮಾನಿಸಲಾಗಿದೆ. 

ಮಾರಿಯಮ್ಮ ಮತ್ತು  ಉಚ್ಚಂಗಿ ದೇವಿಯ ನೂತನ ಆಲಯದಲ್ಲಿ ಪ್ರತಿಷ್ಠಾ ಪೂರ್ವಭಾವಿಯಾಗಿ ನಡೆಯುವ ಧಾರ್ಮಿಕ ವಿಧಿ ವಿಧಾನಗಳನ್ನು ಪ್ರಾಚೀನ ಶೈಲಿಯಲ್ಲಿ ನಡೆಸುವುದೆಂದು ನಿರ್ಧರಿಸಲಾಗಿದೆ.

ಪ್ರಾಚೀನ ಶೈಲಿಯ ಧಾರ್ಮಿಕ ವಿಧಿಗಳು

ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಅಮ್ಮನ ಭವ್ಯ ಗರ್ಭಗುಡಿಯ ದಿವ್ಯ ಸಾನಿಧ್ಯದಲ್ಲಿ ಕೋಣಗಳಿಂದ ಉಳುಮೆ ಮಾಡುವ ಮೂಲಕ ನವ ಧಾನ್ಯಗಳ ಬಿತ್ತನೆ ಮಾಡುವುದು. ಮುಂದಿನ 18 ದಿನಗಳಲ್ಲಿ ಧಾನ್ಯಗಳು ಮೊಳಕೆಯೊಡೆದಾಗ ಗೋ ನಿವಾಸಕ್ಕಾಗಿ ಗರ್ಭಗುಡಿಯಲ್ಲಿ 9 ಅಥವಾ 18 ಗೋವುಗಳನ್ನು ಪೂಜಿಸಿ  ಅವುಗಳಿಗೆ ಧಾನ್ಯಗಳನ್ನು ಮೇಯಲು ಬಿಡುವುದು. ಗೋವುಗಳು ಸಾನಿಧ್ಯದಲ್ಲಿ 9  ದಿನ ಗೋವಾಸವಿದ್ದು,  9ನೇ ದಿನ ಗೋವುಗಳಿಂದ ಹಾಲನ್ನು ಕರೆದು ಪಂಚಗವ್ಯ ತಯಾರಿಸಿ ಅವುಗಳಿಂದ ದೇವಳದ ಆವರಣವನ್ನು ಸಂಪ್ರೋಕ್ಷಣೆ ಮಾಡಿ ಶುದ್ದಿಗೊಳಿಸುವುದು.

ಏ. 9 ರಂದು ನಡೆಯುವ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೂತನವಾಗಿ ನಿರ್ಮಾಣಗೊಳ್ಳಲಿರುವ ರಾಜಗೋಪುರ, ಭೋಜನ ಶಾಲೆ, ಆಡಳಿತ ಕಛೇರಿ ಹಾಗೂ ಸುಸಜ್ಜಿತ ಶೌಚಾಲಯಕ್ಕೆ ಭೂಮಿ ಪೂಜೆ ನೆರವೇರಿಸುವ ಮೂಲಕ ಶಂಕು ಸ್ಥಾಪನೆ ಮಾಡುವುದೆಂದು ನಿರ್ಧರಿಸಲಾಗಿದೆ.

 ಧಾರ್ಮಿಕ ಕಾರ್ಯಕ್ರಮಗಳು ಮುಗಿದ ನಂತರ ಸಭಾ ಕಾರ್ಯಕ್ರಮಗಳು ನೆರವೇರಲಿದೆ. ಈ ಸಭೆಯಲ್ಲಿ  9 ದಿನಗಳ ಪರ್ಯಂತ ನಡೆಯುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ತಂತ್ರಿಗಳು ದಿನ ಹಾಗೂ ಸಮಯವನ್ನು ಘೋಷಿಸಲಿದ್ದಾರೆ. ಈ ಸಂದರ್ಭದಲ್ಲಿ ವಿಜೃಂಭಣೆಯಿಂದ ನಡೆಯುವ ಅಮ್ಮನ ಬ್ರಹ್ಮಕಲಶೋತ್ಸವದ 9 ಜನರ ಪ್ರಧಾನ ಸಮಿತಿ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಉದ್ಘಾಟನೆಯಾಗಲಿದೆ.

ಚರಿತ್ರೆಗೆ ಸೇರಲಿರುವ ಈ ಭವ್ಯ ಸಮಾರಂಭದಲ್ಲಿ ಗಣ್ಯರು, ದಾನಿಗಳು, ಅಮ್ಮನ ಭಕ್ತವೃಂದ, ಎಲ್ಲಾ ಸಮಿತಿಯ ಸದಸ್ಯರು ಹಾಗೂ ಊರ ಪರವೂರ ಮಹನಿಯರೆಲ್ಲರೂ ಭಾಗವಹಿಸಿ ಕಾಪುವಿನ ಅಮ್ಮನ ಕೃಪೆಗೆ ಪಾತ್ರರಾಗಬೇಕೆಂದು ವಾಸುದೇವ ಶೆಟ್ಟಿಯವರು ವಿನಂತಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್‌ ಶೆಟ್ಟಿ ಬಾಲಾಜಿ, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಾಧವ ಆರ್‌ ಪಾಲನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!