ಮಾ.10: “ಯಕ್ಷ ದ್ರುವ ಪಟ್ಲ ಫೌಂಡೇಶನ್” ಟ್ರಸ್ಟ್‌ನ ಉಡುಪಿ ಘಟಕ ಉದ್ಘಾಟನೆ

ಉಡುಪಿ: ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಸ್ಥಾಪಿಸಿರುವ ಯಕ್ಷದ್ರುವ  ಪಟ್ಲ ಫೌಂಡೇಶನ್ ಟ್ರಸ್ಟ್ನ ಉಡುಪಿ ಘಟಕದ ಉದ್ಘಾಟನೆ ಮಾ.10ರಂದು ಅಂಬಾಗಿಲಿನ ಅಮೃತ್ ಗಾರ್ಡನ್‌ನಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ.

ಟ್ರಸ್ಟ್‌ನ ಉಡುಪಿ ಘಟಕದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಮಾಹೆ ಮಣಿಪಾಲದ ಸಹಕುಲಾಪತಿ ಡಾ.ಎಚ್.ಎಸ್.ಬಲ್ಲಾಳ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ವಹಿಸುವರು.

ಅತಿಥಿಗಳಾಗಿ ಯಕ್ಷಗಾನ ಮೇಳದ ಯಜಮಾನ ಕಿಶನ್ ಹೆಗ್ಡೆ ಪಳ್ಳಿ, ತೆಂಕನಿಡಿಯೂರು ಸರಕಾರಿ ಕಾಲೇಜಿನ ಪ್ರಿನ್ಸಿಪಾಲ್ ಡಾ.ಸುರೇಶ್ ರೈ, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾಕಾರಿ ಸುದೇಶ್ ಕುಮಾರ್ ರೈ ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ನಿಟ್ಟೆ ವಿವಿಯ ಶಿಕ್ಷನ ಮತ್ತು ಜಪಾನ್ ಭಾಷಾ ತಜ್ಞರುಗಳಾದ ಪ್ರೊ.ಹರಿಕೃಷ್ಣ ಭಟ್ ಹಾಗೂ ಯಸುಕೋ ಸತೊ ದಂಪತಿಗೆ ಪಟ್ಲಾಭಿಮಾನಿ ಅಭಿವಂದನೆ ನಡೆಯಲಿದೆ. 

ಸತತ 2 ಗಿನ್ನೆಸ್ ದಾಖಲೆ ನಿರ್ಮಿಸಿದ ಯೋಗರತ್ನ ತನುಶ್ರೀ ಪಿತ್ರೋಡಿ ಅವರಿಗೆ ವಿಶೇಷ ಬಾಲ ಪುರಸ್ಕಾರ ಪ್ರದಾನ ಮಾಡಲಾಗುವುದು. ಪ್ರಸಂಗಕರ್ತ ಪ್ರೊ. ಪವನ್ ಕಿರಣಕೆರೆ ಶುಭಾಶಂಸನೆಗೈಯಲಿದ್ದಾರೆ. ಬಳಿಕ ‘ಅಯೋಧ್ಯಾ ದೀಪ’ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ಟ್ರಸ್ಟ್‌ನ ಉದ್ದೇಶಗಳು: ಅಶಕ್ತ ಕಲಾವಿದರಿಗೆ ಗೌರವ, ಅಪಘಾತ ವಿಮಾ ಯೋಜನೆ, ಚಿಕಿತ್ಸ ವೆಚ್ಚ, ಗೃಹ ನಿರ್ಮಾಣಕ್ಕೆ ನೆರವು, ಗರಿಷ್ಠ ಅಂಕಗಳಿಸಿದ ಕಲಾವಿದರ ಮಕ್ಕಳಿಗೆ ಬಂಗಾರದ ಪದಕ, ಟ್ರಸ್ಟ್ನ ಸದಸ್ಯರಿಂದ ರಕ್ತದಾನ, ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಪಟ್ಲಾಶ್ರಯ ಯೋಜನೆ ಮೂಲಕ 100 ಮನೆ ನಿರ್ಮಾಣ ಮೊದಲಾದ ಸೇವೆಗಳನ್ನು ಟ್ರಸ್ಟ್ ಮೂಲಕ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಉಡುಪಿ ಘಟಕದ ಕಾರ್ಯದರ್ಶಿ ಡಾ.ಹರೀಶ್ ಜೋಶಿ ವಿಟ್ಲ, ಜೊತೆ ಕಾರ್ಯದರ್ಶಿ ರತನ್‌ರಾಜ್ ರೆ` ಮಣಿಪಾಲ, ಗೌರವ ಮಾರ್ಗದರ್ಶಕರುಗಳಾದ ಭುವನಪ್ರಸಾದ್ ಹೆಗ್ಡೆ, ಗೌರವ ಸದಸ್ಯ ಸುಧಾಕರ ಆಚಾರ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!