ಕರಂದ್ಲಾಜೆಯವರೇ ನೀವು ಪರಪುರುಷನ ಹೆಸರಿನಲ್ಲಿ ಮತ ಕೇಳಬಹುದೇ?: ಮಹಿಳಾ ಕಾಂಗ್ರೆಸ್ ಪ್ರಶ್ನೆ

ಉಡುಪಿ: ರಾಜಾರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿ.ಡಿ.ಕೆ.ರವಿ ಅವರ ಪತ್ನಿ ಕುಸುಮಾ ಅವರು ತಮ್ಮ ಅಗಲಿದ ಪತಿಯ ಹೆಸರಿನಲ್ಲಿ ಮತ ಕೇಳಿದರೆ ಒಳ್ಳೆಯದಗಾಲ್ಲ ಎನ್ನುವ ಸಂಸದೆ ಶೋಭಾ ಕರಂದ್ಲಾಜೆಯ ಮಾತು ತೀರಾ ಅನಾಗರಿಕ ಹಾಗೂ ಹಾಸ್ಯಾಸ್ಪದವಾಗಿದೆಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಹೇಳಿದ್ದಾರೆ.

ಮೈಕ್ ಸಿಕ್ಕಿದರೆ ಸಾಕು ಭಾರತೀಯ ಸಂಸ್ಕೃತಿಯ ಬಗ್ಗೆ ದೊಡ್ಡದಾಗಿ ಹೇಳಿಕೆಗಳನ್ನು ನೀಡುತ್ತಾ ಬೊಬ್ಬಿರಿಯುವ ನೀವು ಬಿಜೆಪಿ ಪಕ್ಷದ ಒಬ್ಬ ಸಂಸದೆಯಾಗಿ ನಿಮ್ಮ ಬಾಯಿಯಿಂದ ಇಂತಹಾ ಮಾತುಗಳು ಬರುವುದೆಂದರೆ ನೀವು ಖಂಡಿತವಾಗಿಯೂ ಒಬ್ಬ ಅಜ್ಞಾನಿಯೆಂದೇ ಹೇಳಬಹುದು.


ಕುಸುಮಾ ಅವರು ಡಿ.ಕೆ.ರವಿಯವರ ಕೈಹಿಡಿದು ಸಪ್ತಪದಿ ತುಳಿದವರು, ಹಾಗಿರುವಾಗ ಆಕೆ ಅವರು ಹೆಸರಿನಲ್ಲಿ ಮತ ಕೇಳಿದರೆ ತಪ್ಪೇನು? ತನ್ನ ಪತಿಯ ಅಗಲಿಕೆಯಿಂದ ಆಕೆಯ ಮನಸ್ಸಿಗೆ ಎಂತಹಾ ಆಘಾತವಾಗಿರಬಹುದೆಂಬ ಕಲ್ಪನೆಯಾದರೂ ತಮಗಿದೆಯೇ? ನಿಮಗೆ ಇರುವುದಾದರೂ ಹೇಗೆ? ನಿಮಗೆ ವೈವಾಹಿಕ ಜೀವನದ ಅನುಭವ ಇದ್ದರೆರೆ ತಾನೇ? ಎಂದು ಗೀತಾ ವಾಗ್ಲೆ ಸಂಸದೆಯನ್ನು ಜರಿದಿದ್ದಾರೆ.

ಶೋಭಾ ಕರಂದ್ಲಾಜೆ ಯವರೇ ೨೦೧೯ರಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಾಡುವುದಕ್ಕೆ ತಮಗೆ ತಮ್ಮ ಪಕ್ಷದವರಿಂದಲೇ ತೀವ್ರ ವಿರೋಧಗಳು ಬಂದು ಅವರಿಂದಲೇ ಗೋ ಬ್ಯಾಕ್ ಚಳುವಳಿಗೆ ತುತ್ತಾದವರು ನೀವು. ಇಂತಹ ಸಂದರ್ಭದಲ್ಲಿ ಹೇಗೋ ಏನೋ ಕೆಲವರು ಕೃಪಾಕಟಾಕ್ಷದಿಂದಾಗಿ ಆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ತಮಗೆ ಸಿಕ್ಕಾಗ ತಾವು ಮಾಡಿದ್ದೇನು? ಮೋದಿಯ ಹೆಸರಿನಲ್ಲಿ ಮತ ಕೇಳಿ ಗೆಲ್ಲಲಿಲ್ಲವೇ? ಪರಪುರುಷನೊಬ್ಬನ ಹೆಸರಿನಲ್ಲಿ ತಾವು ಮತ ಕೇಳಬಹುದು. ಅದು ತಮಗೆ ಒಳ್ಳೆಯದು. ಆದರೆ ಒಬ್ಬ ಮದುವೆಯಾದ ಹೆಣ್ಣು ತನ್ನ ಪತಿಯ ಹೆಸರಿನಲ್ಲಿ ಮತ ಕೇಳಿದರೆ ಒಳ್ಳೆಯದಾಗದು ಅನ್ನುವ ತಮ್ಮ ಮಾತಿನ ಅರ್ಥವೇನು? ತಾವು ಮೊದಲು ಗೆದ್ದ ತಮ್ಮ ಕ್ಷೇತ್ರದ ಕಡೆಗೆ ತಮ್ಮ ಗಮನ ಕೊಡಿ. ಎಲ್ಲೆಲ್ಲಿಯ ಉಸಾಬರಿ ತಮಗ್ಯಾಕೆ? ಅನಗತ್ಯ ವಿಷಯಗಳಲ್ಲಿ ಯದ್ವಾತದ್ವಾ ನಾಲಿಗೆಯನ್ನು ಹರಿಯಬಿಡುವ ಗುತ್ತಿಗೆಯನ್ನು ತಾವು ಪಡೆದಿರುವಂತೆ ವರ್ತಿಸುತ್ತಿದ್ದೀರಿ .

ಇದರ ಬದಲಾಗಿ ಉತ್ತರ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅತ್ಯಾಚಾರ, ಕೊಲೆ, ಗೂಂಡಾಗಿರಿಗಳ ಬಗ್ಗೆ ತಮ್ಮ ನಾಲಿಗೆ ಹರಿಯಬಿಡಿ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಪತ್ರಿಕಾ ಹೇಳಿಕೆಯಲ್ಲಿ ತಿಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!