ಕಾವ್ಯದ ನಿಜವಾದ ಸೌಂದರ್ಯವನ್ನು ಅರಿತುಕೊಳ್ಳುವುದು ಶುದ್ಧವಾದ ಮನಸ್ಸಿನಿಂದ

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ನಡೆಸಲ್ಪಟ್ಟ ವಿಚಾರ ಸಂಗೋಷ್ಠಿಯಲ್ಲಿ ‘ಹಳಗನ್ನಡ ಕಾವ್ಯ ಸೌಂದರ್ಯ’ ಎಂಬ ವಿಷಯದ ಕುರಿತು ವಿದ್ವತ್ಪೂರ್ಣವಾದ ವಿಚಾರಮಂಡನೆಯನ್ನು ಭಾಷಾ ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಮಾಡಿದರು.

ರಸವೇ ಕಾವ್ಯದ ನಿಜವಾದ ಸೌಂದರ್ಯ ಅನುಭವ ಮತ್ತು ಅಭಿವ್ಯಕ್ತಿಯ ಕುರಿತು ಕಾವ್ಯ ಮೀಮಾಂಸಕಾರರು ಸೊಗಸಾಗಿ ನಿರೂಪಿಸಿದ್ದಾರೆ.ಕಾವ್ಯದ ಸೌಂದರ್ಯವನ್ನು ಆಸ್ವಾದಿಸಬೇಕಾದರೆ ಆ ಪದ್ಯಗಳ ಅನ್ವಯಕ್ರಮ ಹಾಗೂ ಪದವಿಂಗಡಣೆಗಳ ಕಡೆಗೆ ಹೆಚ್ಚಿನ ಗಮನ ನೀಡುವುದು ಅಗತ್ಯ' ಎಂದು ವಿವರಿಸಿದವರು.

ಕಾವ್ಯದ ನಿಜವಾದ ಸೌಂದರ್ಯವನ್ನು ಅರಿತುಕೊಳ್ಳುವುದಕ್ಕಾಗಿ ಶುದ್ಧವಾದ ಮನಸ್ಸಿನಿಂದ, ನಿರ್ಮಲವಾದ ದೃಷ್ಟಿಯಿಂದ ಅಧ್ಯಯನ ಹಾಗೂ ಅಭ್ಯಾಸ ಮಾಡಬೇಕಾಗುತ್ತದೆ. ವಿನಯಶೀಲತೆ ಜೊತೆಗೆ ವ್ಯಾಕರಣದ ಅರಿವು ಇದ್ದಲ್ಲಿ ಕಾವ್ಯದ ರಸಾಸ್ವಾದನೆ ಸುಲಭಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟರು. ಹಳಗನ್ನಡ ಕವಿಗಳ ಕಾವ್ಯವನ್ನು ಉದಾಹರಿಸುವ ಜೊತೆಗೆ ಕಾಲಾಂತರದ ಬದಲಾವಣೆಗಳ ಕಡೆಗೂ ಗಮನ ಸೆಳೆದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಸಂಚಾಲಕರಾದ ರವಿರಾಜ್ ಹೆಚ್. ಪಿ. ಅವರು ‘ಇದೊಂದು ಹೊಸ ಅವಕಾಶ. ಕೊರೋನ ಸಂಕಷ್ಟದ ಸಂದರ್ಭದಲ್ಲಿ ನಮಗೆ ಈ ಮಾಧ್ಯಮದ ಮೂಲಕ ಅತಿ ಹೆಚ್ಚು ಜನರನ್ನು ತಲುಪುವಂತಾದದ್ದು ಒಂದು ಒಳ್ಳೆಯ ಬೆಳವಣಿಗೆ. ಇಂಥ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಾಗಲಿ’ ಎಂದು ಶುಭ ಹಾರೈಸಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ನಾರಾಯಣ ಶೇವಿರೆ, ರಾಜ್ಯ ಕಾರ್ಯದರ್ಶಿಗಳಾದ ಡಾ. ಮಾಧವ ಮೂಡುಕೊಣಜೆ, ವಿಭಾಗ ಸಂಯೋಜಕರಾದ ಶೈಲೇಶ್ ಹಾಗೂ ಕರ್ನಾಟಕದಾದ್ಯಂತ ವಿವಿಧ ಕಡೆಗಳ ಹಿರಿಯಕಿರಿಯ ಭಾಷಾ ಪಂಡಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಡಾ. ಪ್ರಜ್ಞಾ ಮಾರ್ಪಳ್ಳಿ ಸ್ವಾಗತಿಸಿ, ಸಮಿತಿಯ ಕೋಶಾಧಿಕಾರಿಯಾದ ಡಾ. ವಿಜಯಲಕ್ಷ್ಮಿ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!