ಜನರ ಪರವಾಗಿ ಸರ್ಕಾರವನ್ನು ಪ್ರಶ್ನಿಸುವುದು ತಪ್ಪೇ?- ಶಾಸಕ ಕಾಮತ್ ಪ್ರಶ್ನೆ

ಮಂಗಳೂರು: ಜಿಲ್ಲೆಯಲ್ಲಿ ಮರಳು ಸಮಸ್ಯೆ ತೀವ್ರವಾಗಿದ್ದು, ಜನತೆ ಅದರಿಂದ ತೀವ್ರ ತೊಂದರೆ ಅನುಭವಿಸುತ್ತಿರುವಾಗ ಕ್ಷೇತ್ರದ ಒಬ್ಬ ಜವಾಬ್ದಾರಿಯುತ ಶಾಸಕನಾಗಿ ಸರ್ಕಾರದ ಗಮನಕ್ಕೆ ತರುವುದು ನನ್ನ ಕರ್ತವ್ಯ. ಆದರೆ ಕಾಂಗ್ರೆಸ್ ನಾಯಕರಿಗೆ ಅದು ತಪ್ಪಾಗಿ ಕಂಡಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕರು ಈ ವಿಷಯದಲ್ಲಿ ಕನಿಷ್ಠ ಜ್ಞಾನವನ್ನಾದರೂ ಬೆಳೆಸಿಕೊಳ್ಳಬೇಕಾಗಿದೆ. ಆಡಳಿತ ಪಕ್ಷದಲ್ಲಿ ಇದ್ದುಕೊಂಡು ಉಂಟಾಗಿರುವ ಸಮಸ್ಯೆಯ ನ್ನು ಬಗೆಹರಿಸುವುದು ಬಿಟ್ಟು ಹಿಂದಿನ ಸರ್ಕಾರವನ್ನು ದೂರುವ ಅಗತ್ಯವೇನಿದೆ? ಅಷ್ಟಕ್ಕೂ ಜನರು ನಿಮಗೆ ಅಧಿಕಾರ ಕೊಟ್ಟದ್ದು ಜನರ ಸಮಸ್ಯೆಯನ್ನು ಸಮರ್ಪಕವಾಗಿ ಬಗೆಹರಿಸಲು ಹೊರತು ಹಿಂದಿನ ಕಥೆಗಳನ್ನು ಹೇಳುತ್ತಾ ಕೂರಲು ಅಲ್ಲ ಎಂಬುದನ್ನು ಕಾಂಗ್ರೆಸ್ಸಿಗರು ಮರೆಯಬಾರದು ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಆರು ತಿಂಗಳಾದರೂ ಕನಿಷ್ಠ ಯಾವುದೇ ಒಬ್ಬ ಕಾಂಗ್ರೆಸ್ಸಿನ ಜನಪ್ರತಿನಿಧಿಯಾಗಲೀ, ಉಸ್ತುವಾರಿ ಸಚಿವರಾಗಲಿ, ಜಿಲ್ಲೆಯ ಮರಳಿನ ಸಮಸ್ಯೆ ಬಗ್ಗೆ ಸೌಜನ್ಯಕ್ಕಾದರೂ ಒಂದೇ ಒಂದು ಸಭೆಯನ್ನು ನಡೆಸಿದಂತಹ ಉದಾಹರಣೆಯನ್ನು ಕೊಡಲಿ. ಸ್ಥಳೀಯ ಶಾಸಕನಾಗಿ ನನ್ನ ಗಮನಕ್ಕಂತೂ ಅಂತಹ ಯಾವುದೇ ಚಟುವಟಿಕೆಗಳು ಕಂಡು ಬಂದಿಲ್ಲ. ಈ ನಿಟ್ಟಿನಲ್ಲಿ ಕ್ಷೇತ್ರದ ಶಾಸಕನಾಗಿ ಜನತೆಯ ಪರವಾಗಿ ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ. ಕಾಂಗ್ರೆಸ್ ನಾಯಕರಿಗೆ ಅದು ತಪ್ಪಾಗಿ ಕಂಡಿರುವುದು ದುರಂತವಷ್ಟೇ. ಇನ್ನಾದರೂ ಸರ್ಕಾರ ಆ ಬಗ್ಗೆ ಗಮನ ಹರಿಸಲಿ ಇಂದು ಮತ್ತೆ ಆಗ್ರಹಿಸುತ್ತಿದ್ದೇನೆ ಎಂದು ಹೇಳಿದರು.

ಅದೇ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಲ್ಯಾಂಡ್ ರಿಜಿಸ್ಟ್ರೇಷನ್, ವಾಹನ ನೋಂದಣಿ, ಹಾಲಿನ ದರ, ಅಬಕಾರಿ ಸುಂಕ ಹೀಗೆ ಎಲ್ಲವೂ ಏರಿಕೆಯಾಗಿದ್ದು, ಇವೆಲ್ಲದರ ಜೊತೆಗೆ ಭ್ರಷ್ಟಾಚಾರವೂ ಹೆಚ್ಚಾಗಿದೆ. ಐಟಿ ರೈಡ್ ನಲ್ಲಿ ಕೋಟಿ ಕೋಟಿ ಅಕ್ರಮ ಹಣ ಸಿಕ್ಕ ಬಳಿಕ ಈಗ ಕಿಯೋನಿಕ್ಸ್ ಸಂಸ್ಥೆಯ ಸರದಿ. ಈಗ ಅಲ್ಲಿನ ಎಂ.ಡಿ ಯೇ 12% ಆರೋಪದಲ್ಲಿ ಸಿಕ್ಕಿ ಬಿದ್ದು ಅಮಾನತುಗೊಂಡಿದ್ದಾರೆ. ಅವರ ಭ್ರಷ್ಟಾಚಾರದಲ್ಲಿ ಈ ವರೆಗೆ ಸರ್ಕಾರಕ್ಕೆ ಹೋದ ಪಾಲೆಷ್ಟು? ಯಾರ ಮೂಲಕ ಆ ಪಾಲು ಯಾರಿಗೆ ಸಂದಾಯವಾಗುತ್ತಿತ್ತು? ಇದನ್ನು ಸಹ ನಾವು ಪ್ರಶ್ನಿಸಬಾರದೇ? ಸರ್ಕಾರವನ್ನು ಎಚ್ಚರಿಸಬಾರದೇ? ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *

error: Content is protected !!