ನಕಲಿ ಚಿನ್ನ ಅಡವಿಡಲು ಬಂದಿದ್ದರೆ ದಾಖಲೆ ತೋರಿಸಿ- ಕೃಷ್ಣಮೂರ್ತಿ ಆಚಾರ್ಯಗೆ ಸವಾಲು ಹಾಕಿದ ಅಬೂಬಕ್ಕರ್
ಉಡುಪಿ: ಆದರ್ಶ ಗ್ರಾಹಕರ ವಿವಿದ್ದೋಶ ಸಹಕಾರಿ ಸಂಘದಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ವಂಚಿಸಿದ ಮೊಹಮ್ಮದ್ ರಿಯಾಜ್ ಹಾಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕ್ಕರ್ ಸ್ಪಷ್ಟಪಡಿಸಿದ್ದಾರೆ.
ಸೆ.5 ರಂದು ಮೊಹಮ್ಮದ್ ರಿಯಾಜ್ ಹಾಗೂ ಆತನ ಪತ್ನಿ ಮತ್ತು ನಾನು ಸೊಸೈಟಿಗೆ ಚಿನ್ನಾಭರಣ ಅಡಮಾನ ಇಡಲು ಬಂದಿದ್ದೇ ಆದರೇ ಆದರ ಸಿಸಿಟಿವಿ ದಾಖಲೆ ಅಥವಾ ಇನ್ನಾವುದೇ ದಾಖಲೆ ಇದ್ದರೆ ಬಹಿರಂಗಪಡಿಸಲಿ ಎಂದು ಅಬೂಬಕ್ಕರ್ ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಅವರಿಗೆ ಸವಾಲು ಎಸೆದಿದ್ದಾರೆ.
ವಾಹನ ಬಿಡಿಸಿಕೊಳ್ಳಲು ಠಾಣೆಗೆ ಹೋದ ಸಂದರ್ಭದಲ್ಲಿ ಎಲ್ಲಾ ಸರಿಮಾಡುವ ಎಂದು ಕೃಷ್ಣಮೂರ್ತಿ ಅವರು ಸೊಸೈಟಿ ಮತ್ತು ಮನೆಗೆ ಕರೆಸಿಕೊಂಡಿದ್ದರು ಅದನ್ನೇ ನಾನು ಚಿನ್ನ ಗಿರಿವಿ ಇಡಲು ಬಂದಿದ್ದೇನೆ ಎನ್ನುವ ಸಿಸಿಟಿವಿಯ ದೃಶ್ಯ ತೋರಿಸುತ್ತಿರುವುದು ಮೂರ್ಖತನದ ಪರಮಾವಧಿ ಎಂದಿದ್ದಾರೆ.
ಸೆ.5 ರಂದು ನಾನು ಬೆಂಗಳೂರಿನಿಂದ ನನ್ನ ಕಾರಿನಲ್ಲಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಈ ಹಿಂದೆ ನನ್ನ ಹಳೆ ಕಾರನ್ನು ಮಾರಾಟ ಮಾಡಿದ್ದ ರಿಯಾಜ್ ಎಂಬಾತ ಕರೆ ಮಾಡಿ ನನ್ನ ಇನ್ನೊಂದು ಕಾರು ಮಾರಾಟ ಮಾಡುವುದಾಗಿ ಹೇಳಿ ನನ್ನ ಮನೆಯಿಂದ ಕಾರನ್ನು ತೆಗೆದುಕೊಂಡ ಹೋಗಿದ್ದ.
ಆದರೆ ಅಂದು ಆತ ನನ್ನ ಕಾರಿನೊಂದಿಗೆ ಸೊಸೈಟಿಗೆ ಹೋಗಿ, ಅಲ್ಲಿ ನಕಲಿ ಚಿನ್ನ ಅಡವಿಟ್ಟು ಸಿಕ್ಕಿಬಿದ್ದಿದ್ದ. ಆದರೆ ಬಿಜೆಪಿ ಪಕ್ಷದಲ್ಲಿ ನನ್ನ ಏಳಿಗೆ ಸಹಿಸದ ಸೊಸೈಟಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಅಂದು ನಾನೂ ಕೂಡ ಬಂದಿದ್ದೆ ಎಂದು ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದ್ದರು.
ನನ್ನ ಕಾರು ಬಿಡಿಸಲು ನಾನು ಠಾಣೆಗೆ ಹೋದಾಗ ಸೊಸೈಟಿಯ ಕಾರ್ಯದರ್ಶಿ ಜಲೇಂದ್ರ ಕೋಟ್ಯಾನ್ ಕಾರು ಬಿಡಿಸಿಕೊಡುವ ಎಂದು ಸೊಸೈಟಿಯ ಕಚೇರಿಗೆ ಕರೆದುಕೊಂಡು ಹೋಗಿದ್ದರು. ಆದರೆ ಆಗ ಕೃಷ್ಣಮೂರ್ತಿ ಆಚಾರ್ಯ ಅವರು ನಾಳೆ ಮಾತನಾಡುವ ಮನೆಗೆ ಬನ್ನಿ ಎಂದು ಹೇಳಿದ್ದರು. ಈಗ ಇದನ್ನೇ ನಾನೂ ಸೊಸೈಟಿಗೆ ಬಂದಿದ್ದೇನೆ ಎಂಬ ರೀತಿ ಸಿಸಿಟಿವಿಯ ಫೂಟೇಜ್ ತೋರಿಸಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ದಾವೂದ್ ಅಬೂಬಕ್ಕರ್ ಹೇಳಿದ್ದಾರೆ.
ನಾನೂ ನಕಲಿ ಚಿನ್ನಭಾರಣ ಇಡಲು ಬಂದಿದ್ದೇ ಆದರೇ ಸೆ.5 ಸಿಸಿಟಿವಿಯ ಫೂಟೇಜ್ ಬಹಿರಂಗ ಪಡಿಸಲಿ ಎಂದು ದಾವೂದ್ ಅಬೂಬಕ್ಕರ್ ಸವಾಲು ಹಾಕಿದ್ದಾರೆ.
ನನ್ನ ರಾಜಕೀಯ ಏಳಿಗೆ, ಸಮಾಜ ಸೇವೆ ಸಹಿಸದ ಕೃಷ್ಣಮೂರ್ತಿ ಆಚಾರ್ಯ ಅವರು ಸುಳ್ಳು ದೂರು ನೀಡಿ ನನ್ನ ತೇಜೋವಧೆಗೆ ಯತ್ನಿಸಿದ್ದಾರೆ. ನಾನು ಅದಕ್ಕೆಲ್ಲ ಧೃತಿಗೇಡುವುದಿಲ್ಲ. ಇವರ ಸುಳ್ಳು ದೂರಿನ ವಿರುದ್ದ ನಾನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆಂದು ದಾವೂದ್ ಅಬೂಬಕ್ಕರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.