ಕಬಾಬ್ ತಯಾರಿಸುವವನಿಗೆ ಬಿಜೆಪಿ ನಾಯಕನ ವೇಷ!- ಕೋಟ್ಯಾಂತರ ರೂ.ವಂಚಿಸಿದ ಚೈತ್ರ ಕುಂದಾಪುರ

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರಿನ ಉದ್ಯಮಿ, ಬಿಜೆಪಿ ಮುಖಂಡರೊಬ್ಬರಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚಿಸಿರುವ ಆರೋಪದಡಿ ಪ್ರಚೋದನಾಕಾರಿ ಭಾಷಣಕಾರ್ತಿ ಚೈತ್ರಾ ಕುಂದಾಪುರ ಸೇರಿದಂತೆ ಇಬ್ಬರನ್ನು ಬೆಂಗಳೂರು ಸಿಸಿಬಿ ವಿಭಾಗದ ಪೊಲೀಸರು ಮಂಗಳವಾರ ಉಡುಪಿಯಲ್ಲಿ ಬಂಧಿಸಿದ್ದಾರೆ.

ಕೇಂದ್ರದ ನಾಯಕರು, ಆರೆಸ್ಸೆಸ್ ಪ್ರಮುಖರ ಹೆಸರಿನಲ್ಲಿ ಟಿಕೆಟ್ ಕೊಡಿಸುವುದಾಗಿ ಹೇಳಿ ಚೈತ್ರಾ ಕುಂದಾಪುರ 7 ಜನರ ತಂಡ ಕಟ್ಟಿಕೊಂಡು ಈ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಚೈತ್ರಾ ಕುಂದಾಪುರ (ಉಡುಪಿ), ಗಗನ್ ಕಡೂರು (ಚಿಕ್ಕಮಗಳೂರು), ಅಭಿನವ ಹಾಲಾಶ್ರೀ ಸ್ವಾಮೀಜಿ (ಬಳ್ಳಾರಿ), ರಮೇಶ್ (ಚಿಕ್ಕಮಗಳೂರು), ನಾಯಕ್ (ಬೆಂಗಳೂರು), ಧನರಾಜ್ (ಚಿಕ್ಕಮಗಳೂರು), ಶ್ರೀಕಾಂತ್ (ಉಡುಪಿ), ಪ್ರಸಾದ್ ಬೈಂದೂರು (ಉಡುಪಿ) ಆರೋಪಿಗಳು.

ದೂರಿನಲ್ಲಿ ಏನಿದೆ….?

ಚೈತ್ರಾ ಕುಂದಾಪುರ ಹಾಗೂ ಆಕೆಯ ಇತರ 7 ಸಹಚರರ ಮೇಲೆ ಪ್ರಕರಣ ದಾಖಲಿಸಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿ ಬೆಂಗಳೂರು ನಿವಾಸಿಯಾಗಿದ್ದು, ಕಳೆದ 7 ವರ್ಷಗಳಿಂದ ‘ವರಲಕ್ಷ್ಮಿ, ಚಾರಿಟಬಲ್ ಟ್ರಸ್ಟ್‌ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಮೂಲತಃ ಇವರು ಉಡುಪಿ ಜಿಲ್ಲೆಯ ಬೈ0ದೂರ ತಾಲೂಕಿನ ಬಿಜೂರು ಗ್ರಾಮದವರು.

ಗೋವಿಂದ ಬಾಬು ಪೂಜಾರಿ ಅವರ ಸಾಮಾಜಿಕ ರಾಜಕೀಯ ಚಟುವಟಿಕೆಗಳನ್ನು ಗಮನಿಸಿದ ಗೋವಿಂದ ಬಾಬುರವರ ಹಿತೈಷಿಗಳು ಮತ್ತು ಸ್ನೇಹಿತರು ರಾಜಕೀಯವಾಗಿ ಬೆಳೆಯಬೇಕೆಂದು ಸಲಹೆ ನೀಡುತ್ತಿದ್ದರು. ಈ ವೇಳೆ ಬೈಂದೂರಿನ ಬಿಜೆಪಿ ಕಾರ್ಯಕರ್ತ ಪ್ರಸಾದ್‌ ಬೈಂದೂರು ಅವರು ಹಿಂದೂ ಭಾಷಣಗಾರ್ತಿ ಎಂದು ಹೇಳಿಕೊಳ್ಳುತ್ತಿದ್ದ ಚೈತ್ರಾ ಕುಂದಾಪುರರನ್ನು ಉದ್ಯಮಿಗೆ ಪರಿಚಯಿಸಿದ್ದಾರೆ.

ಈ ಚೈತ್ರಾ ಕುಂದಾಪುರ ಮತ್ತು 7 ಜನರ ತಂಡದಲ್ಲಿ ಗಗನ್ ಕಡೂರು (ಚಿಕ್ಕಮಗಳೂರು), ಅಭಿನವ ಹಾಲಾಶ್ರೀ ಸ್ವಾಮೀಜಿ (ಬಳ್ಳಾರಿ), ರಮೇಶ್ (ಚಿಕ್ಕಮಗಳೂರು), ನಾಯಕ್ (ಬೆಂಗಳೂರು), ಧನರಾಜ್ (ಚಿಕ್ಕಮಗಳೂರು), ಶ್ರೀಕಾಂತ್ (ಉಡುಪಿ), ಪ್ರಸಾದ್ ಬೈಂದೂರು (ಉಡುಪಿ) ಹೀಗೆ ಒಟ್ಟು ಎಂಟು ಮಂದಿ. ಆರೋಪಿಗಳ ಪೈಕಿ ಗಗನ್ ಕಡೂರ್, ಧನರಾಜ್ ಹಾಗೂ ನಾಯಕ್ ಎಂಬವರನ್ನು ಕೇಂದ್ರ ಬಿಜೆಪಿ ನಾಯಕರು ಎಂದು ಚೈತ್ರಾ ಬಿಂಬಿಸಿದ್ದಳು. ಈ ನಟನೆಗಾಗಿ ಮೂವರಿಗೂ ಚೈತ್ರಾ ಹಣ ಪಾವತಿ ಮಾಡಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲಿ ಬೈಂದೂರು ಕ್ಷೇತ್ರದಲ್ಲಿ, ಗೋವಿಂದ ಬಾಬುರವನ್ನು ಬಿಜೆಪಿಯಿಂದ ಸ್ಪರ್ಧಿಸುವಂತೆ ಹಾಗೂ ಸ್ಪರ್ಧಿಸಿದರೆ ಗೆಲ್ಲಿಸಿಕೊಡುವುದಾಗಿ ಆರೋಪಿ ಚೈತ್ರಾ ಅವರ ಮನವೊಲಿಸಿರುತ್ತಾಳೆ. ನಾನು ಹಿಂದೂ ಸಂಘಟನೆಯಲ್ಲಿರುವುದರಿಂದ BJP, RSS ಪರಿಷ್ಠರಿಗೂ ಹತ್ತಿರವಿದ್ದೂ , ಪ್ರಧಾನಿ ಕಚೇರಿಯಲೂ, ಪ್ರಭಾವಿಯಾಗಿದ್ದು ಸುಪ್ರೀಂ ಕೋರ್ಟ್ ಜಡ್ಜ್‌ ಗಳಿಗೂ ಆಪ್ತಳಾಗಿದ್ದು ಅವರೆಲ್ಲರ ಪ್ರಭಾವ ಬಳಸಿ ಟಿಕೆಟ್ ಕೊಡಿಸುತ್ತೇನೆ” ಎಂದು ಬಣ್ಣ ಬಣ್ಣದ ಕಥೆ ಹೆಣೆದು ನಂಬಿಸುವಲ್ಲಿ ಚೈತ್ರಾ ಯಶಸ್ವಿಯಾಗಿರುತ್ತಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಿಜೆಪಿಯ ರಾಷ್ಟ್ರೀಯ ನಾಯಕರೊಂದಿಗೆ ನಿಕಟ ಸಂಪರ್ಕ ಇರುವ ಚಿಕ್ಕಮಗಳೂರಿನ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರು ಮೂಲಕ ಟಿಕೆಟ್ ಕೊಡಿಸುವುದಾಗಿ ಗೋವಿಂದ ಪೂಜಾರಿಯವರಿಗೆ ಚೈತ್ರಾ ತಿಳಿಸುತ್ತಾಳೆ. ಗೋವಿಂದರನ್ನು ಚಿಕ್ಕಮಗಳೂರಿಗೆ ಕರೆದು ಕೊಂಡು ಹೋಗಿ ಅಲ್ಲಿ ಗಗನ್ ಕಡೂರು ರವರನ್ನು ಭೇಟಿ ಮಾಡಿಸಿದ್ದಾಳೆ. ತಾವು ಪ್ರಧಾನಿ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳಿಗೆ ಅತ್ಯಂತ ನಿಕಟವರ್ತಿಯಾಗಿದ್ದು, ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಗಗನ್ ಈ ವೇಳೆ ಗೋಪಾಲರಿಗೆ ನಂಬಿಸಿದ್ದಾನೆ ಎಂದು .

ಟಿಕೆಟ್ ಗಿಟ್ಟಿಸಿಕೊಳ್ಳಲು RSS ರಾಷ್ಟ್ರೀಯ ಪ್ರಮುಖರ ಶಿಫಾರಸು ಬೇಕಾಗಿದ್ದು, ಸುಮಾರು 45 ವರ್ಷಗಳಿಂದ ಉತ್ತರ ಭಾರತದಲ್ಲಿRSS ಹಿರಿಯ ಪ್ರಚಾರಕರಾಗಿರುವ ಚಿಕ್ಕಮಗಳೂರು ಮೂಲದ ʼವಿಶ್ವನಾಥ್ ಜೀʼ ಮೂಲಕ ಶಿಫಾರಸು ಮಾಡಿಸುವುದಾಗಿ ನಂಬಿಸಿದ ಚೈತ್ರಾ ಮತ್ತು ಗಗನ್‌ 4.07 ರಂದು ವಿಶ್ವನಾಥ್ ಜೀ ರವರನ್ನು ಚಿಕ್ಕಮಗಳೂರಿನಲ್ಲಿಯೇ ಭೇಟಿ ಮಾಡಿಸಿ ಪರಿಚಯಿಸಿದ್ದರು. ಈ ವೇಳೆ ವಿಶ್ವನಾಥ್ ಜೀ ರವರು, ಗೋವಿಂದ ಅವರ ಮಾಹಿತಿ ಪಡೆದು ಕೊಂಡಿದ್ದು, ನಾನು ಬಿಜೆಪಿ ಕೇಂದ್ರ ಆಯ್ಕೆ ಸಮಿತಿಯ ಸದಸ್ಯನಾಗಿದ್ದು RSS ಮತ್ತು ಬಿಜೆಪಿ ನಡುವಿನ ಸಮನ್ವಯಕಾರನಾಗಿದ್ದೇನೆ. ಟಿಕೆಟ್ ವಿಚಾರದಲ್ಲಿ, ನನ್ನ ನಿರ್ಧಾರವೇ ಅಂತಿಮವಾಗಿರುತ್ತದೆ. 2023ರ ವಿಧಾನಸಭಾ ಚುನಾವಣೆಯಲಿ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ. ಆದರೆ ಸಾಕಷ್ಟು ಹಣ ನೀಡಿದರೆ ಮಾತ್ರ ಟಿಕೆಟ್ ಸಿಗಬಹುದು ಎಂದು ತಿಳಿಸಿದ್ದಾನೆ. ಟಿಕೆಟ್ ಪ್ರಕ್ರಿಯೆ ಆರಂಭಿಸಬೇಕಾದರೆ ಮೂರು ದಿನಗಳಲ್ಲಿ, ರೂ. 50ಲಕ್ಷ ಗಗನ್ ಕಡೂರ್ ರವರಲ್ಲಿ ನೀಡಬೇಕು, ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಇನ್ನುಳಿದ ರೂ.3 ಕೋಟಿ ರೂ. ನೀಡಬೇಕೆಂದು ತಿಳಿಸಿರುತ್ತಾರೆ. ಒಂದು ವೇಳೆ ಟಿಕೆಟ್ ಕೊಡಿಸಲು ಸಾಧ್ಯವಾಗದಿದ್ದರೆ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಲಾಗುವುದು ಎಂದು ವಿಶ್ವನಾಥ್ ಜಿ ಭರವಸೆ ನೀಡಿರುತ್ತಾರೆ. ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು ಕೂಡಾ ಈ ವಿಚಾರದಲ್ಲಿ, ಯಾವುದೇ ಅನುಮಾನ ಬೇಡ, ಹಣದ ವಿಷಯದಲಿ, ತಾವೂ ಜವಾಬ್ದಾರರಾಗಿರುತ್ತೇವೆ ಎಂದು ಹೇಳಿರುತ್ತಾರೆ.

ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು ಮಾತಿನ ಬಗ್ಗೆ ನಂಬಿಕೆ ಇರಿಸಿದ ಗೋವಿಂದರವರು ರೂ.50 ಲಕ್ಷ ರೂಪಾಯಿ ಹಣವನ್ನು 07.07.2022ರಂದು ಪ್ರಸಾದ್ ಬೈಂದೂರ್ ಮುಖಾಂತರ ಗಗನ್ ಕಡೂರ್ ರವರಿಗೆ ನೀಡಿರುತ್ತಾರೆ. ಶಿವಮೊಗ್ಯದ RSS ಕಚೇರಿ ಎದುರು ಗಗನ್ ಕಡೂರು ಈ ಹಣವನ್ನು ಪಡೆದು ಕೊಂಡಿರುತ್ತಾನೆ. ಬಳಿಕ ವಿಶ್ವನಾಥ್ ಜಿ, ಗಗನ್ ಕಡೂರು ‌ಮತ್ತು ಚೈತ್ರಾ ಕುಂದಾಪುರ ಕಾನ್ಫರೆನ್ಸ್‌ ಕರೆ ಮಾಡಿ, ನಿಮ್ಮ ಹೆಸರು ಆಯ್ಕೆ ಪಟ್ಟಿಯಲ್ಲಿದೆ, 2023ರ ಚುನಾವಣೆಯಲ್ಲಿ ಬೈದೂರಿನಿಂದಲೇ ಸ್ಪರ್ಧಿಸಲು ಟಿಕೆಟ್ ನೀಡಲು ಕೇಂದ್ರ ಬಿಜೆಪಿ ನಾಯಕರು ಒಪ್ಪಿದ್ದಾರೆಂಬ ಮಾಹಿತಿಯನ್ನು ಗೋವಿಂದ ಅವರಿಗೆ ನೀಡಿರುತ್ತಾರೆ.

2022 ರ ಸೆಪ್ಟೆಂಬರ್ ಮೊದಲ ವಾರದಲ್ಲಿ, ಗೋವಿಂದರ ಮೊಬೈಲ್‌ ಗೆ ವಿಶ್ವನಾಥ್ ಜಿ ಮತ್ತು ಚೈತ್ರಾ ಕುಂದಾಪುರ ಅವರು ಕಾನ್ಫರೆನ್ಸ್ ಕರೆ ಮಾಡಿ, ಕರ್ನಾಟಕದ ಟಿಕೆಟ್ ಹಂಚಿಕೆ ಬಗೆ, ಹೊಸಪೇಟೆ ಸಂಸ್ಥಾನ ಮಠ ಹಿರೇಹಡಗಲಿಯ ಅಭಿನವ ಪಾಲಶ್ರೀ ಸ್ವಾಮೀಜಿಯವರ ಶಿಫಾರಸು ಕೂಡಾ ಮುಖ್ಯವಾಗಿರುತ್ತದೆ. ಹಾಗಾಗಿ ಅವರನ್ನು ಭೇಟಿಯಾಗಲು ಸೂಚಿಸಿದ್ದು, ಅದರಂತೆ ಹಿರೇಹಡಗಲಿಗೆ ತೆರಳಿ ಸ್ವಾಮೀಜಿಯವರನ್ನು ಗೋವಿಂದರು ಭೇಟಿಯಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ವೇಳೆ ಸ್ವಾಮೀಜಿ, ”ವಿಶ್ವನಾಥ್ ಜೀ ರವರು ಆಯ್ಕೆ ಸಮಿತಿಯಲ್ಲಿ ಹಿರಿಯ ಸದಸ್ಯರಾಗಿದ್ದಾರೆ, ಅವರೇ ನನಗೆ ಕರ್ನಾಟಕದ ಜವಾಬ್ದಾರಿ ಕೊಡಿಸಿರುವುದು, ಪ್ರಧಾನಿ ಮೋದಿಯವರ ಜೊತೆಗೂ ನನಗೆ ನಿಕಟ ಸಂಪರ್ಕ ಇದ್ದು ಟಿಕೆಟ್ ಕೊಡಿಸುತ್ತೇನೆ’ ಎಂದು ಹೇಳಿ, ಮುಂದಿನ ಪ್ರಕ್ರಿಯೆಗೆ ರೂ1.50 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ದಿನಾಂಕ 16.01.2023ರಂದು ಬೆಂಗಳೂರಿನ ವಿಜಯನಗರದಲ್ಲಿರುವ ಸ್ವಾಮೀಜಿ ಮನೆಗೆ ತೆರಳಿ ಗೋವಿಂದರವರು ಬೇಡಿಕೆ ಇಟ್ಟ ಹಣ ನೀಡಿದ್ದು ಒಂದು ವೇಳೆ ಟಿಕೆಟ್‌ ಸಿಗದಿದ್ದರೆ ಒಂದೂವರೆ ಕೋಟಿ ರೂಪಾಯಿಯನ್ನು ವಾಪಾಸ್ಸು ನೀಡುವುದಾಗಿ ಭರವಸೆ ನೀಡಿ ಸ್ವಾಮೀಜಿ ಹಣ ಪಡೆದಿರುತ್ತಾರೆ ಎಂದು ಹೇಳಲಾಗಿದೆ.

ಬಳಿಕ ಚೈತ್ರಾ ಕುಂದಾಪುರ ವಿಶ್ವನಾಥ್ ಜೀ, ಗಗನ್ ಕಡೂರು ಕಾನ್ಫರೆನ್ಸ್ ಕರೆ ಮಾಡಿ 23.10.2022 ರಂದು ಬಿಜೆಪಿಯ ಕೇಂದ್ರಿಯ ಚುನಾವಣಾ ಸಮಿತಿಯ ಪ್ರಮುಖರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಂದು ಅವರನ್ನು ಭೇಟಿ ಮಾಡಿಸುವುದಾಗಿ ತಿಳಿಸಿದ್ದಾರೆ. 23.10.2022ರಂದು ಗಗನ್‌ ಕಡೂರ್‌ ರವರು ಬೆಂಗಳೂರಿನ ಕುಮಾರ ಕೃಪಾ ಸರ್ಕಾರಿ ಅತಿಥಿಗೃಹದಲಿ ತಂಗಿದ್ದ ‘ನಾಯ್ಕ್‌’ ಎಂಬವರನ್ನು ದೆಹಲಿ ಚುನಾವಣಾ ಸಮಿತಿಯ ಸದಸ್ಯ ಎಂದು ಗೋವಿಂದ ಪೂಜಾರಿಯವರಿಗೆ ಪರಿಚಯಿಸಿದ್ದಾರೆ. ಆ ವೇಳೆ ನಾಯ್ಕ್‌ ರವರು, ಬೈಂದೂರು ಕ್ಷೇತ್ರಕ್ಕೆ ಗೋವಿಂದ ಹೆಸರನ್ನು ಕೇಂದ್ರಿಯ ಚುನಾವಣಾ ಸಮಿತಿ ಅಂತಿಮಗೊಳಿಸಿದೆ ಎಂದು ಖಾತ್ರಿ ಪಡಿಸಿದರು. ಅಲ್ಲದೆ, ಬಾಕಿ ಮೊತ್ತ ಮೂರು ಕೋಟಿ ರೂ. ಗಗನ್ ಕಡೂರ್ ರವರು ಸೂಚಿಸಿದ ಸ್ಮಳಕ್ಕೆ ತಲುಪಿಸ ಬೇಕೆಂದು ಸೂಚಿಸಿದ್ದಾರೆ. ನಾಯ್ಕ್‌ ಮತ್ತು ವಿಶ್ವನಾಥ್ ಜೀ ಅವರ ಸೂಚನೆಯಂತೆ ರೂ.3 ಕೋಟಿ ರೂ.ಮೊತ್ತವನ್ನು ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ತಂಡಕ್ಕೆ, 29.10.2022 ಮಂಗಳೂರಿನಲ್ಲಿ ಗೋವಿಂದ ನೀಡಿದ್ದಾರೆ ಎಂದು ತಿಳಿಸಲಾಗಿದೆ.

ಇದೇ ವರ್ಷದ ಮಾರ್ಚ್‌ 7 ರಂದು ಗೋವಿಂದ ಅವರಿಗೆ ಕರೆ ಮಾಡಿದ ಗಗನ್ ಕಡೂರ್ ವಿಶ್ವನಾಥ್ ಜೀ ರವರನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ತಿಳಿಸಿದ್ದು, ಮರುದಿನ ಬೆಳಿಗ್ಗೆ 11.30 ರ ಸುಮಾರಿಗೆ ಕರೆ ಮಾಡಿ ವಿಶ್ವನಾಥ್ ಜೀ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿರುತ್ತಾರೆ.

ಗಗನ್ ಕಡೂರು ‌ಮಾತಿನಿಂದ ಅನುಮಾನಗೊಂಡು, ವಿಶ್ವನಾಥ್ ಜೀ ರವರ ಸಾವಿನ ಸುದ್ದಿಯನ್ನು ಖಚಿತ ಪಡಿಸಲು ಗೋಪಾಲ್‌ ಅವರು ಕಾಶ್ಮೀರದಲ್ಲಿರುವ ತನ್ನ ಪರಿಚಿತರಾದ ನಿವೃತ್ತ ಸೇನಾಧಿಕಾರಿ ಬಳಿ ವಿಚಾರಿಸಿದ್ದಾರೆ. ಆಗ ವಿಶ್ವನಾಥ್‌ ಜೀ ಹೆಸರಿನ ಹಿರಿಯ ಪ್ರಚಾರಕರು ಯಾರೂ ಇಲ್ಲ ಎಂದು ಅಲ್ಲದೆ ತಿಳಿಸಿರುತ್ತಾರೆ. ಅಲ್ಲದೇ ಎ. 11ರಂದು ಬಿಜೆಪಿ ಟಿಕೆಟ್‌ ಸಹ ಘೋಷಣೆಯಾಗಿದ್ದು ಗೋವಿಂದ ಬಾಬು ಪೂಜಾರಿ ಅವರಿಗೆ ಟಿಕೆಟ್‌ ಸಹ ಸಿಕ್ಕಿರುವುದಿಲ್ಲ. ಹೀಗಾಗಿ ಏ 24 ರಂದು ಚೈತ್ರಾ ಕುಂದಾಪುರ ಹಾಗೂ ಗಗನ್ ಕಡೂರು ನನ್ನು ಬೊಮ್ಮನಹಳ್ಳಿಯಲ್ಲಿರುವ ತನ್ನ ಕಚೇರಿಗೆ ಕರೆಸಿ ಕೊಂಡು ಹಣ ವಾಪಸ್ಸು ನೀಡುವಂತೆ ಗೋಪಾಲ್‌ ಅವರು ಸೂಚಿಸಿದ್ದು ಆಗ ಆರೋಪಿಗಳಿಬ್ಬರು ತಾವು ಪಡೆದ ಸಂಪೂರ್ಣ ಮೊತ್ತ ರೂ.3.50 ಕೋಟಿ ವಿಶ್ವನಾಥ ಜೀ ಬಳಿ ಇದ್ದು, ಅವರೀಗ ವಿಧಿವಶರಾಗಿದ್ದಾರೆ ಎಂದು ಹೇಳಿಕೊಂಡರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆ ವೇಳೆ, ʼʼಎಲ್ಲಾ, ನಾಟಕ ನನಗೆ ಗೊತ್ತಾಗಿದೆ, ಹಣವನ್ನು ವಾಪಸ್ ಪಡೆಯಲು ಪೊಲೀಸರ ಮೊರೆಹೋಗಬೇಕೆʼʼ ಎಂದು ಹೇಳಿದಾಗ ವಿಷದ ಬಾಟಲಿ ತೋರಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಬ್ಲ್ಯಾಕ್‌ ಮೇಲ್ ಮಾಡಿ ಸ್ವಲ್ಪ ಕಾಲಾವಕಾಶ ಬೇಕೆಂದು ಕೋರಿ ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರ್ ರವರು ಅಲ್ಲಿಂದ ಮರಳಿದ್ದಾರೆ. ಅ ಬಳಿಕ ಅವರು ಗೋಪಾಲ್‌ ರವರ ಫೋನ್ ಕರೆ ಸ್ವೀಕರಿಸದೆ ತಪ್ಪಿಸಿಕೊಳ್ಳುತ್ತಿದ್ದರು.

ವಿಶ್ವನಾಥ್ ಜೀ ಯಾರೆಂದು ಗೊತ್ತಿಲ್ಲ ಎಂದಿದ್ದ ಸ್ವಾಮೀಜಿ

ದಿನಾಂಕ 25.04.2023 ರಂದು ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಅಭಿನವ ಪಾಲಶ್ರೀ ಸ್ವಾಮೀಜಿ ರವರ ಬೆಂಗಳೂರಿನ ವಿಜಯನಗರದಲ್ಲಿರುವ ನಿವಾಸದ ಬಳಿ ಹೋಗಿ ಕೇಳಿದಾಗ ಆ ವೇಳೆ ಸ್ವಾಮೀಜಿಯವರು, ತಮಗೆ ವಿಶ್ವನಾಥ್ ಜೀ ಯಾರೆಂದು ಸರಿಯಾಗಿ ಗೊತ್ತಿಲ, ‘ನಾನು ಪಡೆದಿರುವ 1.5 ಕೋಟಿ ರೂಪಾಯಿ ಹಣವನ್ನು ಒಂದು ತಿಂಗಳೊಳಗೆ ವಾಪಸ್‌ ನೀಡುತ್ತೇನೆ, ಈ ವಿಚಾರದಲ್ಲಿ, ತಮ್ಮನ್ನು ಬಿಟ್ಟು ಬಿಡಿ’ ಎಂದು ಹೇಳಿರುತ್ತಾರೆ.

ವಿಶ್ವನಾಥ್ ಜೀ ಹೆಸರಲ್ಲಿ ಮೇಕಪ್‌ ಮಾಡಿಕೊಂಡಿದ್ದ ರಮೇಶ್!

3.5 ಕೋಟಿ ರೂ ವಿಶ್ವನಾಥ್ ಜಿ ಬಳಿ ಇದೆಯೆಂದು ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರ್ ಹೇಳಿದ್ದರಿಂದ ಗೋವಿಂದ ಬಾಬು ಪೂಜಾರಿ ವಿಶ್ವನಾಥ್ ಜಿ ಹುಡುಕಾಡಲು ಪ್ರಾರಂಭಿಸಿದ್ದಾರೆ. ಹಿಂದುತ್ವ ಸಂಘಟನೆಯ ಕಾರ್ಯಕರ್ತರಾಗಿರುವ ಚಿಕ್ಕಮಂಗಳೂರಿನ ಮಂಜು ಎಂಬವರ ಬಳಿ ಈ ವಿಷಯವನ್ನು ಹೇಳಿಕೊಂಡಾಗ, ಮಂಜು ರವರು ತಾವು ಕೆಲ ದಿನಗಳ ಹಿಂದೆ ಸಲೂನ್‌’ಗೆ ಭೇಟಿ ನೀಡಿದಾಗ ನಡೆದ ಸನ್ನಿವೇಶವನ್ನು ನೆನಪಿಸಿಕೊಂಡು ಆ ಸನ್ನಿವೇಶಕ್ಕೂ, ಈ ವಿಚಾರಕ್ಕೂ ಸಾಮ್ಯತೆ ಇರುವುದಾಗಿ ಹೇಳಿದರು. ಕಡೂರಿನ ಸಲೂನ್‌ಗೆ ವ್ಯಕ್ತಿಯೊಬ್ಬರನ್ನು ಕರೆದುಕೊಂಡು ಬಂದಿದ್ದ ಸ್ಥಳೀಯನೊಬ್ಬ ಆ ವ್ಯಕ್ತಿಯನ್ನು RSS ಪ್ರಚಾರಕರ ರೀತಿ ಮೇಕಪ್ ಮಾಡಿಸಿದ್ದನು. ಆ ಸಲೂನ್‌ ‘ಗೆ ತೆರಳಿ ವಿಚಾರಿಸಿದಾಗ ಮೇಕಪ್ ಮಾಡಲು ಬಂದಿದ್ದವರು ಧನರಾಜ್‌ ಹಾಗೂ ರಮೇಶ್ ಎಂಬ ವ್ಯಕ್ತಿಗಳೆಂದು ತಿಳಿಯಿತು. ಅವರನ್ನು ಪತ್ತೆ ಮಾಡಿದಾಗ ರಮೇಶ ಎಂಬಾತನೇ RSS ಪ್ರಚಾರಕ ವಿಶ್ವನಾಥ್ ಜೀ ಹೆಸರಲ್ಲಿ, ನಟಿಸಿರುವ ಸಂಗತಿ ಬಹಿರಂಗವಾಗುತ್ತದೆ. RSS ಪ್ರಚಾರಕರಂತೆ ನಟಿಸಲು ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ರವರು ಗಗನ್ ಕಡೂರು‌ ಮನೆಯಲ್ಲಿ ತರಬೇತಿ ನೀಡಿ ರೂ.1,20,000/- ಕೊಟ್ಟಿರುತ್ತಾರೆಂದು ತಿಳಿಸಿದ್ದಾನೆ. ಅಲ್ಲದೇ ಈ ನಾಟಕವಾಡುವಾಗ ಆರೆಸ್ಸೆಸ್ ವಾಹನವಾಗಿ ಬಳಸಲು ತನಗೂ ರೂ. 2,50,000/- ನೀಡಿದ್ದಾರೆ ಎಂದು ಧನರಾಜ್‌ ಹೇಳಿಕೊಂಡಿರುತ್ತಾರೆ‌ ಎಂದು ತಿಳಿಸಲಾಗಿದೆ.

ಚಿಕನ್ ಕಬಾಬ್ ತಯಾರಿಸುವವನಿಗೆ ಬಿಜೆಪಿ ನಾಯಕನ ವೇಷ!

ಇದೇ ವೇಳೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರೆಂದು ಹೇಳಿಕೊಂಡ ‘ನಾಯ್ಕ್‌ ‘ ಎಂಬ ವ್ಯಕ್ತಿಯ ಬಗ್ಗೆ ಧನರಾಜ್‌ ಬಳಿ ವಿಚಾರಿಸಿದಾಗ ಇವರು ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಚಿಕನ್ ಕಬಾಬ್ ತಯಾರಿಸುವ ಬೀದಿ ವ್ಯಾಪಾರಿ ಎಂಬ ಮಾಹಿತಿ ಸಿಗುತ್ತದೆ. ನಾಯ್ಕ್‌ ರನ್ನು ಭೇಟಿಯಾಗಿ ಕೇಳಿದಾಗ, ಬಿಜೆಪಿ ನಾಯಕನಾಗಿ ಪಾತ್ರ ಮಾಡಲು ತನಗೆ ಗಗನ್ ಕಡೂರು 93,000/-ರೂ. ಪಾವತಿಸಿದ್ದು, ಈ ಹಿನ್ನೆಲೆಯಲ್ಲಿ, ತಾನು ಈ ರೀತಿ ನಟಿಸಿರುವುದಾಗಿ ನಾಯ್ಕ್‌ ಹೇಳಿಕೊಂಡಿದ್ದಾರೆ. ಈ ವಿಚಾರಗಳನ್ನು ಬಹಿರಂಗಪಡಿಸಿದರೆ ಕೊಲೆ ಮಾಡಿಸುವುದಾಗಿ ಚೈತ್ರ ಕುಂದಾಪುರ ರವರು ಬೆದರಿಸಿರುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ” ಗೋವಿಂದ ಬಾಬು ಪೂಜಾರಿಯವರು ಹಣ ವಾಪಸ್ ಕೇಳಲು ಮುಂದಾದರೆ ಜಡ್ಜ್ ಗಳಿಗೆ ಹೇಳಿ ಶಾಶ್ವತವಾಗಿ ಜೈಲಿನಲ್ಲಿರಿಸುವುದಾಗಿಯೂ ಅಥವಾ ಭೂಗತ ಪಾತಕಿಗಳ ಮೂಲಕ ಹತ್ಯೆ ಮಾಡಿಸುವುದಾಗಿಯೂ ಚೈತ್ರಾ ಸಹಚರರು ಹೇಳಿರುದ್ದಾರೆʼʼ ಎಂದು ನಾಯ್ಕ್‌ ಅವರು ಗೋವಿಂದ ಬಾಬು ಪೂಜಾರಿ ಅವರ ಬಳಿ ಹೇಳಿರುವುದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!