ಸಿದ್ದರಾಮಯ್ಯ ಜನ್ಮ ಜಾತಕ ಜಾಲಾಡಿಸಿದ ಹರಿಪ್ರಸಾದ್‌ಗೆ ಧನ್ಯವಾದ: ಕುಯಿಲಾಡಿ

ಉಡುಪಿ: ಕೈಗೆ ಹ್ಯೂಬ್ಲೋಟ್ ವಾಚ್ ಕಟ್ಟಿಕೊಂಡು, ಪಂಚೆಯೊಳಗೆ ಖಾಕಿ ಚಡ್ಡಿ ಧರಿಸುವುದು ಸಮಾಜವಾದವಲ್ಲ’ ಎಂದು ಮಾರ್ಮಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮ ಜಾತಕ ಜಾಲಾಡಿಸಿರುವ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ರವರಿಗೆ ಧನ್ಯವಾದ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಅಧಿಕಾರಕ್ಕಾಗಿ ಏನು ಮಾಡಲೂ ಹೇಸದ ಸಿದ್ದರಾಮಯ್ಯ, ‘ಅಧಿಕಾರ ಸಿಕ್ಕಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಅಡ್ವಾಣಿಯವರನ್ನು ಬೇಟಿ ಮಾಡಿ ಬಿಜೆಪಿ ಸೇರಲು ಹೋಗಿದ್ದು, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಇದಕ್ಕೆ ಸಾಕ್ಷಿಯಾಗಿದ್ದಾರೆ’ ಎನ್ನುವ ಬಿ.ಕೆ. ಹರಿಪ್ರಸಾದ್ ರವರ ಮಾತಿನ ಮೂಲಕ ಕೊನೆಗೂ ಕಾಂಗ್ರೆಸಿಗರ ಬಾಯಿಯಿಂದ ಸತ್ಯ ಹೊರ ಬಂದಂತಾಗಿದೆ.

ರಾಜ್ಯದಲ್ಲಿ ಬೀಕರ ಬರವಿದ್ದರೂ ಮುಖ್ಯಮಂತ್ರಿ ಸಹಿತ ಸಚಿವರ ಕಛೇರಿ, ಮನೆ ದುರಸ್ತಿ ಹಾಗೂ ವಿಲಾಸೀ ಕಾರುಗಳ ಖರೀದಿಗೆ ಅಸ್ತು ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆ ತನ್ನ ಸಮಾಜವಾದಿ ಮುಖವಾಡವನ್ನು ಕಳಚಿದೆ. ಚುನಾವಣೆಗೆ ಮೊದಲು ಹಿಂದುಳಿದವರು ಮತ್ತು ಅತಿ ಹಿಂದುಳಿದವರಿಗೆ ನೀಡಿದ ಭರವಸೆಯನ್ನು ಮರೆತವರಿಗೆ ಜನತೆ ತಕ್ಕ ಪಾಠ ಕಲಿಸಬೇಕು ಎಂದು ಸ್ವತಃ ಕಾಂಗ್ರೆಸ್ ಮುಖಂಡರೇ ಘಂಟಾಘೋಷವಾಗಿ ಹೇಳಿಕೆ ನೀಡಿರುವುದು ರಾಜ್ಯದ ಕಾಂಗ್ರೆಸ್ ಸರಕಾರದ ಜನದ್ರೋಹಿ ನೀತಿಯನ್ನು ಬಹಿರಂಗಪಡಿಸಿದೆ.

ಅಧಿಕಾರದ ದುರಾಸೆಯಿಂದ ನಕಲಿ ಗ್ಯಾರಂಟಿಗಳ ಆಮಿಷಗಳನ್ನು ಒಡ್ಡುವ ಮೂಲಕ ರಾಜ್ಯದ ಜನತೆಗೆ ಮಂಕು ಬೂದಿ ಎರಚಿ, ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುವ ಜೊತೆಗೆ ಅವನತಿಯತ್ತ ಸಾಗುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಸ್ವಯಂಕೃತ ಜನವಿರೋಧಿ ನೀತಿಯಿಂದ ಕ್ರಮೇಣ ಪತನಗೊಳ್ಳುವ ಎಲ್ಲಾ ಸಾಧ್ಯತೆಗಳು ಸ್ಪಷ್ಟಗೊಳ್ಳುತ್ತಿರುವುದು ಇಂದಿನ ವಾಸ್ತವಿಕತೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!