ಉಡುಪಿ: ರಾಜಾಂಗಣ ಬಳಿ ಕುಸಿದು ಬಿದ್ದ ವ್ಯಕ್ತಿಯ ರಕ್ಷಣೆ- ಜಿಲ್ಲಾಸ್ಪತ್ರೆಗೆ ದಾಖಲು
ಉಡುಪಿ: ನಗರದ ಶ್ರೀ ಕೃಷ್ಣ ಮಠ ರಾಜಾಂಗಣದಲ್ಲಿ ಅಪರಿಚಿತ ವ್ಯಕ್ತಿ ದಿಢೀರ್ ಆಗಿ ಕುಸಿದು ಬಿದ್ದು ಅಸ್ವಸ್ಥಗೊಂಡ ಘಟನೆ ನಡೆದಿದೆ.
ಸ್ಥಳೀಯರು ಕೂಡಲೇ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ತಕ್ಷಣ ಒಳಕಾಡು ಅವರು ದಾವಿಸಿ ಬಂದು ಅಸ್ವಸ್ಥಗೊಂಡು ಗಂಭೀರ ಸ್ಥಿತಿಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ರಕ್ಷಣೆ ಮಾಡಿ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿ ಮಾನವೀಯತೆ ಮೆರೆದಿದ್ದಾರೆ.
ರಕ್ಷಣಾ ಕಾರ್ಯಾಚರಣೆಗೆ ಸ್ಥಳದಲ್ಲಿದ್ದ ಯಾರೂ ಕೂಡ ಆಗಮಿಸಿದೆ ಇರುವ ಸಂದರ್ಭದಲ್ಲಿ ಗಸ್ತು ತಿರುಗುತ್ತಿದ್ದ ಉಡುಪಿ ಸಂಚಾರಿ ಠಾಣೆಯ ಪ್ರಕಾಶ್ ಸಾಲಿಯಾನ್ ಎಸ್ಐ,ಹೋಂಗಾರ್ಡ್ ವಿಜಯ ಕುಮಾರ್ ಒಳಕಾಡು ಅವರಿಗೆ ಸಹಕರಿಸಿ ರೋಗಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲುಪಡಿಸುವಲ್ಲಿ ಸಹಕಾರಿಯಾದರು.
ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವನ್ನಪ್ಪಿದರು ಎಂದು ವೈದ್ಯರು ಹೇಳಿದ್ದಾರೆ. ರಕ್ಷಿಸಲ್ಪಟ್ಟ ವ್ಯಕ್ತಿಯ ಹೆಸರು ಹಾಗೂ ವಿಳಾಸ ತಿಳಿದು ಬಂದಿಲ್ಲ. ಸಂಬಂಧಿಕರು ಯಾರಾದರೂ ಇದ್ದಲ್ಲಿ ಉಡುಪಿಯ ಜಿಲ್ಲಾ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.