ವಿಶ್ವಕರ್ಮ ಸಮಾಜಕ್ಕೆ ಶಕ್ತಿ ನೀಡಿ- ಬದುಕಲು ಉದ್ಯೋಗ ಕೊಡಿ: ನೇರಂಬಳ್ಳಿ ರಮೇಶ್

ಉಡುಪಿ : ನಮ್ಮ ವಿಶ್ವಕರ್ಮ ಸಮುದಾಯಕ್ಕೆ ಬಿಜೆಪಿ ಸರ್ಕಾರದಿಂದ ನಾವು ನಿರೀಕ್ಷೆ ಮಾಡಿದಷ್ಟು ಅನುಕೂಲಗಳು ಸಿಕ್ಕಿಲ್ಲ, ಕೊರೊನಾ ಸಂಕಷ್ಟದಲ್ಲಾಗಲಿ, ಸಾಲಗಾರರ ಸಾಲ ಮನ್ನಾ ಮಾಡುವ ವಿಚಾರದಲ್ಲಾಗಲಿ, ಪ್ಯಾಕೇಜ್ ಮಾಡುವ ಸಮಯದಲ್ಲಾಗಲಿ, ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ನೀಡುವ ಅನುದಾನದಲ್ಲಾಗಲಿ, ಯುವಕರಿಗೆ ಉದ್ಯೋಗ ಕೊಡುವ ವಿಚಾರದಲ್ಲಾಗಲಿ, ನಮ್ಮ ವಿಶ್ವಕರ್ಮ ಸಮಾಜವನ್ನು ಉಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವ ನಿಟ್ಟಿನಲ್ಲಾಗಲಿ, ರಾಜಕೀಯ ಶಕ್ತಿಯನ್ನು ನೀಡುವ ವಿಚಾರವಾಗಲಿ ನಮ್ಮ ನಿರೀಕ್ಷೆಯಂತೆ ಆಗಲಿಲ್ಲ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಉಡುಪಿ ಜಿಲ್ಲಾ ಮುಖಂಡ ನೇರಂಬಳ್ಳಿ ರಮೇಶ್ ಆಚಾರ್ಯ ಬೇಸರ ವ್ಯಕ್ತಪಡಿಸಿದರು.


ಅವರು ಶನಿವಾರ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದರ
ವಿಶ್ವಕರ್ಮರು ಬಹುತೇಕವಾಗಿ ಬಿಜೆಪಿಯನ್ನು ಬೆಂಬಲಿಸಿರುವ ಬಗ್ಗೆ ಕರಾವಳಿಯವರಾದ ಬಿಜೆಪಿಯ ರಾಜ್ಯಾಧ್ಯಕ್ಷರಾದ ಮಾನ್ಯ ನಳಿನ್ ಕುಮಾರ್ ಕಟೀಲ್ ಅವರಿಗೆ ಎಲ್ಲವೂ ತಿಳಿದಿದೆ ಎಂದು ನಾವು ಭಾವಿಸಿದ್ಧೇವೆ. ಹಿಂದುಳಿದ ವರ್ಗದಲ್ಲೆ ಮಾನ್ಯ ಕೆ.ಪಿ.ನಂಜುಂಡಿಯವರಿಗೆ ಒಂದು ವಿಶೇಷ ಸ್ಥಾನಮಾನ ಕೊಟ್ಟು ಎಲ್ಲಾ ಹಿಂದುಳಿದ ವರ್ಗಗಳ ಅಭಿವೃದಧಿಗೆ  ನಾಯಕರನ್ನಾಗಿ ಮಾಡಿ 1000 ಸಾವಿರ ಕೋಟಿ ರೂಪಾಯಿ ವಿಶೇಷ ಅನುದಾನ ನೀಡಿ ವಿಶ್ವಕರ್ಮ ಸಮುದಾಯದ ಜೊತೆಗೆ ಇತರ ಹಿಂದುಳಿದ ವರ್ಗಗಳ ಸಮುದಾಯವನ್ನು ಸಂಪೂರ್ಣ ಅಭಿವೃದ್ಧಿಗೆ ನಂಜುಂಡಿಯವರನ್ನೇ ಮುಖ್ಯಸ್ಥರಾಗಿ ಮಾಡಿ ನಾಯಕತ್ವದ ಜೊತೆಗೆ ನೆರವು ನೀಡುವ ಭರವಸೆಯನ್ನು ಮಾನ್ಯ ಮುಖ್ಯಮಂತ್ರಿಯವರು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದರು. ಮುಖ್ಯಮಂತ್ರಿಗಳು ಮತ್ತು ಪಕ್ಷ ನುಡಿದಂತೆ ನಡೆಯಲಿಲ್ಲ. ಕೇವಲ ವಿಧಾನ ಪರಿಷತ್ ಸದಸ್ಯರ ಗೌರವದ ಸ್ಥಾನ ನೀಡಿದ್ದಾರೆ. ಅಧಿಕಾರ ನೀಡದೇ ಗೌರವ ನೀಡಿದರೇ ಸಮುದಾಯದ ಅಭಿವೃದ್ಧಿ ಹೇಗೆ ಮಾಡಲು ಸಾಧ್ಯ.


 ಮಹಿಳೆಯರು ಮತ್ತು ಯುವಕರ ಉದ್ಯೋಗ ಮತ್ತು ಅಭಿವೃದ್ಧಿಗೂ ಭರವಸೆ ನೀಡಿದ್ದರು ಅದೂ ಆಗಿಲ್ಲ. ರಾಜಕೀಯವಾಗಿ ಅಧಿಕಾರದ ಶಕ್ತಿ ಕೂಡ ನೀಡಿಲ್ಲ. ಎಂಎಲ್ಸಿಯಾಗಿ ನಂಜುಂಡಿಯವರಿಗೆ ಅಧಿಕಾರ ಎಲ್ಲಿದೆ, ಅವರಿಗೆ ಅಧಿಕಾರ ಕೊಟ್ಟರೆ ಅವರು ವಿಶ್ವಕರ್ಮ ಸಮಾಜದ ಜೊತೆಗೆ ಹಿಂದುಳಿದ ಸಮಾಜವನ್ನು ಯಶಸ್ವಿಯಾಗಿ ಸಂಘಟಿಸಿ ಬೆಳೆಸುತ್ತಾರೆ. ಅವರಿಗೆ ಅಧಿಕಾರ ಇಲ್ಲದೆ ಇದ್ದರೆ ಇದೆಲ್ಲ ಹೇಗೆ ಸಾಧ್ಯ, ಇದು ನ್ಯಾಯನಾ ಎಂದು ರಮೇಶ್ ಆಚಾರ್ಯ ಪ್ರಶ್ನಿಸಿದರು.


ರಾಜ್ಯದ ಬಿಜೆಪಿ ಸರಕಾರದ ಮೇಲೆ ನಾವು ಅತೀ ಹೆಚ್ಚು ಭರವಸೆ ಇರಿಸಿಕೊಂಡಿದ್ದೇವು, ಆದರೆ ನಮಗೆ ಯಾವೂದೇ ವ್ಯವಸ್ಥೆಯನ್ನು ಮಾಡಿಕೊಡುತ್ತಿಲ್ಲ. ವಿಶೇಷವಾಗಿ ಉತ್ತರಕನ್ನಡ ಉಡುಪಿ, ದಕ್ಷಿಣ ಕನ್ನಡದ ಬಹಳಷ್ಟು ಯುವಕರಿಗೆ ಉದ್ಯೋಗ ಇಲ್ಲ, ಜಾತಿಮತ ಧರ್ಮ ಅಂತ ನಮ್ಮ ಯುವಕರನ್ನು ದುಡಿಸಿಕೊಳ್ಳುತ್ತಿದ್ದಾರೆ ವಿನ: ಅವರ ಅರ್ಹತೆಗೆ ತಕ್ಕ ಉದ್ಯೋಗ ಇಲ್ಲ, ರಕ್ತಗತವಾಗಿ ಬಂದಿರುವ ಕೆಲಸಗಳನ್ನು ಮಾಡಲು ಯಾವೂದೇ ಯೋಜನೆಗಳು ಇಲ್ಲ. ರಾಜಕೀಯವಾಗಿ ಬೆಳೆಯಲು ಅಂತೂ ಸಾಧ್ಯನೇ ಇಲ್ಲ,ನಮ್ಮ ಪಂಚ ಕುಲಕಸುಬುಗಳನ್ನು ಉಳಿಸುವ ನಿಟ್ಟಿ ಯೋಜನೆ ರೂಪಿಸಿ ಕೌಶಲ್ಯಗಳಿರುವ ಯುವಸಮುದಾಯದ ಕೈಗೆ ಉದ್ಯೋಗ ನೀಡಿ. ಧರ್ಮ, ರಾಜಕೀಯದ ಕೆಲಸಗಳಿಗೆ ಯುವಕರನ್ನು ಬಳಸಿಕೊಂಡು ಕೈಬಿಡಬೇಡಿ ಉದ್ಯೋಗ ಕೊಡಿ. ಸರ್ಕಾರದ ಇಲಾಖೆಗಳಲ್ಲಿ ಉದ್ಯೋಗ ಕೊಡಿಸಿ, ಯುವಕರ ಭವಿಷ್ಯ ಹಾಳಾಗಲು ಅವಕಾಶ ಕೋಡಬೇಡಿ, ಇದರಿಂದಾಗಿ ನಮ್ಮೆಲ್ಲರಿಗೂ ಅತ್ಯಂತ ನೋವಾಗಿದೆ, ಅದಕ್ಕಾಗಿ ನಮ್ಮ ನಾಯಕರಾದ ಮಾನ್ಯ ಕೆ.ಪಿ.ನಂಜುಂಡಿಯವರು ರಾಜ್ಯದ 224 ವಿಧಾನ ಸಭಾ ಕ್ಷೇತ್ರದಲ್ಲಿ ಸಂಚಾರ ಮಾಡಿ ಸರ್ಕಾರದಿಂದ ಆಗಿರುವ ಅನ್ಯಾಯದ ಬಗ್ಗೆ ವಿಶ್ವಕರ್ಮ ಸಮಾಜದ ಮಂದಿಗೆ ಮನವರಿಕೆ ಮಾಡಿಕೊಡುವ ಜೊತೆಗೆ ಸಮಾಜದ ಸಂಘಟನೆಯನ್ನು ಇನ್ನಷ್ಟು ಪ್ರಬಲವಾಗಿ ಮಾಡಲಿದ್ದಾರೆ. ಯಶಸ್ವಿ ಸಂಘಟನೆ ಆದ ಬಳಿಕ ಸುಮಾರು 4ರಿಂದ 5 ಲಕ್ಷ ಜನ ಸೇರಿಸಿ ಬೃಹತ್ ಸಮಾವೇಶ ಮಾಡುತ್ತೇವೆ. 


ಗೌರವದ ಸ್ಥಾನಮಾನ ಸಾಕು ನಮಗೆ ಅಧಿಕಾರದ ಶಕ್ತಿ ನೀಡಿ. ಮೊದಲ ಹಂತವಾಗಿ ಮಹಾಸಭಾದ ಉಸ್ತುವಾರಿಗಳ ಮೂಲಕ ಸಂಘಟನೆಯ ಚಟುವಟಿಕೆ ಆರಂಭಿಸುತ್ತಿದ್ದೇವೆ. ಯುವ ಘಟಕದ ಅಧ್ಯಕ್ಷರಾದ ಮಳವಳ್ಳಿ ಶ್ರೀನಿವಾಸ್ ಉಡುಪಿ ಜಿಲ್ಲೆಯಲ್ಲಿ ತಾಲ್ಲೂಕು,ಹೋಬಳಿ, ಗ್ರಾಮ, ಯುವ ಮತ್ತು ಮಹಿಳಾ ಘಟಕಗಳ ರಚನೆಗಾಗಿ ಸಮಾಲೋಚನೆ ನಡೆಸಲಿದ್ದಾರೆ. ಯುವಕರು ಸೇರಿ ಎಲ್ಲಾರಿಗೂ ಸ್ಥಾನಮಾನ ನೀಡುವ ಮೂಲಕ ಸಂಘಟನೆಗೆ ಒತ್ತು ನೀಡುತ್ತೇವೆ.ನಿರ್ಲಕ್ಷಿತವಾದ ನಮ್ಮ ಸಮಾಜಕ್ಕೆ ರಾಜಕೀಯ ಶಕ್ತಿಬೇಕು, ಅಧಿಕಾರದ ಶಕ್ತಿಯೂ ಬೇಕು, ಆ ನಿರ್ಧಾರಕ್ಕೆ ನಾವು ಬಂದಿದ್ದೇವೆ.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಮಳವಳ್ಳಿ ಶ್ರೀನಿವಾಸ್ ಭಾನುವಾರ ಮತ್ತು 21 ನೇ ಸೋಮವಾರ ಉಡುಪಿ ಜಿಲ್ಲೆಗೆ ಆಗಮಿಸಿ ಪ್ರಮುಖ ನಾಯಕರನ್ನು ಬೇಟಿ ಮಾಡಲಿದ್ದಾರೆ. ಬಳಿಕ ಉಡುಪಿ ತಾಲ್ಲೂಕಿನ ವಿವಿದೆಡೆ ಬೇಟಿ ನೀಡಿ ತಾಲ್ಲೂಕು ಘಟಕ ಮತ್ತು ಹೋಬಳಿ ಘಟಕಗಳ ಸ್ಥಾಪನೆ ಮತ್ತು ಸಂಘಟನೆಯ ಬಲವರ್ಧನೆಯ ಬಗ್ಗೆ ಚರ್ಚಿಸಲಿದ್ದಾರೆ ಎಂದು ರಮೇಶ್ ಆಚಾರ್ಯ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಮುಖಂಡರಾದ ಎಚ್. ರಮೇಶ್ ಆಚಾರ್ಯ ಹೆಬ್ರಿ, ಗಂಗಾಧರ ಆಚಾರ್ಯ ಬಾರ್ಕೂರು, ಪ್ರಮುಖರಾದ ರಾಮಕೃಷ್ಣ ಆಚಾರ್ಯ ಕೋಟ, ರಾಜೇಶ್ ಆಚಾರ್ಯ ಬೈಂದೂರು,ಸುಶಾಂತ್ ಆಚಾರ್ಯ ಬೈಂದೂರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!