ಧರ್ಮಸ್ಥಳ: ನೇತ್ರಾವತಿ ಸ್ನಾನಘಟ್ಟದಲ್ಲಿ, ಸಾಬೂನು, ಶಾಂಪೂ ಬಳಕೆ ನಿಷೇಧ
ಬೆಳ್ತಂಗಡಿ: ನೇತ್ರಾವತಿ ನದಿ ನೀರಿನ ಹರಿವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನೀರು ಮಲಿನವಾಗುವುದನ್ನು ತಡೆಯಲು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ಸಾಬೂನು, ಶಾಂಪೂಗಳ ಮಾರಾಟ, ಬಳಕೆಯನ್ನು ನಿಷೇಧಿಸಲಾಗಿದೆ.
ಈ ಬಗ್ಗೆ ಧರ್ಮಸ್ಥಳ ಗ್ರಾ.ಪಂ. ಸಭೆಯಲ್ಲಿ ನಿರ್ಣಯ ಕೈಗೊಂಡು ನದಿ ಸುತ್ತಲಿನ ಅಂಗಡಿಗಳಲ್ಲಿ ಸಾಬೂನು, ಶಾಂಪೂ ಮಾರಾಟ ಮಾಡದಂತೆ ನೋಟಿಸ್ ನೀಡಲಾಗಿದೆ.
ಈಗಾಗಲೇ ಧರ್ಮಸ್ಥಳ ಕ್ಷೇತ್ರದ ವತಿಯಿಂದ ಸ್ನಾನಘಟ್ಟದಲ್ಲಿ ಸ್ವತ್ಛತೆ ಕಾಪಾಡುವಂತೆ ಪ್ರತಿನಿತ್ಯ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಯಾತ್ರಿಕರು ನದಿಗೆ ಬಟ್ಟೆ ಎಸೆಯುವುದು, ಸಾಬೂನು, ಶಾಂಪೂ ಬಳಸಿ ಅದರ ಪ್ಲಾಸ್ಟಿಕ್ ನದಿಗೆ ಎಸೆಯುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಪಂಚಾಯತ್ ವತಿಯಿಂದಲೂ ಯಾತ್ರಿಕರಲ್ಲಿ ಜಾಗೃತಿ ಮೂಡಿಸು ಕಾರ್ಯವನ್ನು ಮಾಡಲಾಗಿದೆ ಎಂದು ಧರ್ಮಸ್ಥಳ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.