ಉದ್ಯಮದ ಅಗತ್ಯತೆಯನ್ನು ಅರಿತು ಪೂರ್ಣ ಮನಸ್ಸಿನಿಂದ ಕಲಿಯಬೇಕು: ಮುರಳೀ ಅಯ್ಯರ್

ಕಾರ್ಕಳ ಮಾ.15(ಉಡುಪಿ ಟೈಮ್ಸ್ ವರದಿ): ‘ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಉದ್ಯೋಗಾವಕಾಶವನ್ನ ಹೆಚ್ಚಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕೌಶಲ್ಯಗಳನ್ನು ಕಲಿತುಕೊಳ್ಳುವುದು ಅಗತ್ಯ. ಯಾವುದೇ ವಿಚಾರವನ್ನಾಗಲಿ ಇಷ್ಟಪಟ್ಟು ಕಲಿತರೆ ಅದು ಸುಲಭವಾಗಿ ಕರಗತಗೊಳ್ಳುತ್ತದೆ” ಎಂದು ವಿಪ್ಲಿ ಎಲ್.ಎಲ್.ಪಿ ಸಂಸ್ಥೆಯ ಮಾಜಿ ಪಾಲುದಾರ ಮುರಳೀ ಅಯ್ಯರ್ ಅಭಿಪ್ರಾಯಪಟ್ಟರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಆಂಡ್ ಡೇಟಾಸೈನ್ಸ್ ವಿಭಾಗವು ಕಾಲೇಜಿನ ಇಂಟರ್ನಲ್ ಕ್ವಾಲಿಟಿ ಎಶ್ಯೂರೆನ್ಸ್ ಸೆಲ್ ಹಾಗೂ ನಿಟ್ಟೆ ಇಂಜಿನಿಯರಿಂಗ್ ಎಜುಕೇಶನ್ ಯುನಿಟ್ ನ ಸಹಯೋಗದಲ್ಲಿ ಮಾ.17 ರವರೆಗೆ ಹಮ್ಮಿಕೊಂಡಿರುವ ‘ಡೇಟಾಸೈನ್ಸ್ : ಇಂಡಸ್ಟ್ರೀ ಆಂಡ್ ಎಕೆಡೆಮಿಯ ಪಸ್ರ್ಪೆಕ್ಟಿವ್’ ಎಂಬ ವಿಷಯದ ಬಗೆಗಿನ ಶಿಕ್ಷಕರ ಜ್ಞಾನವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು. ‘ಕಳೆದ ಕೆರವಾರು ದಶಕಗಳ ಉದ್ಯೋಗ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಾಗೂ ಪ್ರಾಧ್ಯಾಪಕರೊಂದಿಗೆ ಹಂಚಿಕೊಳ್ಳಲು ನಿಟ್ಟೆ ತಾಂತ್ರಿಕ ಕಾಲೇಜು ಒಂದು ಉತ್ತಮ ವೇದಿಕೆ ಒದಗಿಸಿದೆ. ನಮ್ಮಲ್ಲಿರುವ ಜ್ಞಾನವನ್ನು ಹಂಚಿಕೊಂಡಷ್ಟು ಬೆಳೆಯುತ್ತದೆ ಎಂಬ ಮಾತು ನಾವೆಂದಿಗೂ ಮರೆಯಬಾರದು’ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ವಿಪ್ಲಿ ಇಂಡಿಯಾ ಎಲ್.ಎಲ್.ಪಿ ಸಂಸ್ಥೆಯ ನಿರ್ದೇಶಕ ಸುಮಂತ್ ಪಡಿವಾಳ್ ಅವರು ಮಾತನಾಡಿ ‘ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ & ಡೇಟಾಸೈನ್ಸ್ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಬರಲಿದೆ. ಯಾವುದೇ ತಂತ್ರಜ್ಞಾನದ ಬೆಳವಣಿಗೆಗೆ ಮೂಲಭೂತ ಪರಿಕಲ್ಪನೆ ಅಗತ್ಯ’ ಎಂದರು.

ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ ಎನ್ ಚಿಪ್ಳೂಣ್ಕರ್ ಅವರು ಮಾತನಾಡಿ, ‘ಆರ್ಟಿಫೀಶಿಯಲ್ ಇಂಟಲಿಜೆನ್ಸ್ & ಡೇಟಾಸೈನ್ಸ್ ವಿಭಾಗವು ಶಿಕ್ಷಕರ ಜ್ಞಾನವೃದ್ಧಿ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದು ಸ್ವಾಗತಾರ್ಹ. ನಮ್ಮ ಸಂಸ್ಥೆಯಲ್ಲಿ ಕೆಳೆದ ಸಾಲಿನಲ್ಲಿ ಆರಂಭವಾಗಿರುವ ಆರ್ಟಿಫೀಶಿಯಲ್ ಇಂಟಲಿಜೆನ್ಸ್ & ಡೇಟಾಸೈನ್ಸ್ ಬಿಟೆಕ್ ಪದವಿ ಕೋರ್ಸ್ ನ ಪಠ್ಯಕ್ರಮವನ್ನು ತಯಾರಿಸುವಲ್ಲಿ ವಿಪ್ಲಿ ಸಂಸ್ಥೆಯ ಸಹಕಾರ ಸ್ಮರಣೀಯ. ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕುಲಾಧಿಪತಿಗಳ ಅಭಿಪ್ರಾಯದಂತೆ ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ಪಠ್ಯಕ್ರಮದಲ್ಲಿ ಉದ್ಯಮದ ಬಗೆಗಿನ ಪ್ರಾಯೋಗಿಕ ಅಂಶಗಳನ್ನು ಹೆಚ್ಚಿಸುವುದು ಅಗತ್ಯ. ಇಂತಹ ಜ್ಞಾನವೃದ್ಧಿ ಕಾರ್ಯಕ್ರಮಗಳು ಉದ್ಯಮ ಹಾಗೂ ಕಾಲೇಜು ಶಿಕ್ಷಣದ ನಡುವಿನ ಅಂತರವನ್ನು ಕಡಿಮೆಗೊಳಿಸುವಲ್ಲಿ ಸಹಕಾರಿಯಾಗುತ್ತದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಆಂಡ್ ಡೇಟಾಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ವೇಣುಗೋಪಾಲ, ಸಹಾಯಕ ಪ್ರಾಧ್ಯಾಪಕ ಪ್ರಜ್ವಲ್ ಹೆಗ್ಡೆ, ಸಹಾಯಕ ಪ್ರಾಧ್ಯಾಪಕಿ ಅಂಕಿತಾ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!