3ನೇ ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ

ಹೆಬ್ರಿ ಜ.31 (ಉಡುಪಿ ಟೈಮ್ಸ್ ವರದಿ) :  ಯಕ್ಷಗಾನ ಕರಾವಳಿಯ ಕಲೆ ಮಾತ್ರ ಅಲ್ಲ, ರಾಜ್ಯದ ಕಲೆ, ಯಕ್ಷಗಾನದಲ್ಲಿ ಹೊಸತನ ಬರಬೇಕು, ಸಿನಿಮಾದಲ್ಲಿ ಸೆನ್ಸರ್ ಮಂಡಳಿ ರಚನೆ ಮಾಡಿ ಹೊಸತನ ನೀಡಬೇಕು, ಆ ಮೂಲಕ ಪ್ರಸಂಗ ಸಾಹಿತ್ಯ, ಪ್ರಸಂಗಕರ್ತರು, ಹಾಸ್ಯ ನಟ, ನಟರನ್ನು ಗುರುತಿಸುವ ಕೆಲಸ ಆಗಬೇಕು, ಆಗ ಯಕ್ಷಗಾನ ಸಮಗ್ರ ಕರ್ನಾಟಕದ ಕಲೆಯಾಗಿ ಉಳಿಯುತ್ತದೆ ಎಂದು ಅಷ್ಟವಧಾನಿ ಡಾ.ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಅವರು ಹೇಳಿದರು.

ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‍ವತಿಯಿಂದ ಮುನಿಯಾಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರುಬೀಡು ಎಂ.ಡಿ.ಅಧಿಕಾರಿ ವೇದಿಕೆಯಲ್ಲಿ ನಡೆದ ಹೆಬ್ರಿ ತಾಲ್ಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನ ” ಆರೋಹಣ” ನುಡಿಚೇತನದ ಅನಾವರಣ ಸಮಾರೋಪದಲ್ಲಿ ಮಾತನಾಡಿದ ಅವರು ನಮ್ಮತನ ನಮ್ಮ ಕಲೆಯನ್ನು ನಾವೇ ಉಳಿಸಬೇಕು, ಆಗ ಹರಿಕಥೆ, ಹೂವಿನಕೋಲು ಮುಂತಅದ ಕಲೆಗಳು ಉಳಿಸುತ್ತದೆ, ಸರ್ಕಾರ ಮತ್ತು ಕನ್ನಡ ಸಂಸ್ಕøತಿ ಇಲಾಖೆಯ ಗಂಭೀರ ಚಿಂತನೆ ನಡೆಸಬೇಕಿದೆ. ನಮ್ಮ ಅಮ್ಮಂದಿರು ತಮ್ಮ ಮಕ್ಕಳ ಬಾಯಲ್ಲಿ ಮಮ್ಮಿಯ ಬದಲು ಅಮ್ಮ ಹೇಳಿಸಿ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಿದೆ ಎಂದು ತಿಳಿಸಿದರು.

ಈ ವೇಳೆ ಹೆಬ್ರಿ ತಾಲ್ಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನ ” ಆರೋಹಣ” ನುಡಿಚೇತನದ ಅನಾವರಣದ ಸರ್ವಾಧ್ಯಕ್ಷ ಮುನಿಯಾಲು ಗಣೇಶ ಶೆಣೈ ಅವರು ಮಾತನಾಡಿ, ನಮ್ಮದೂ ಒಂದು ದೇಶವಾ, ನಮ್ಮದು ಒಂದು ಭಾಷೆನಾ ಎಂದು ನಾವೇ ಹೀಗೇ ನಮ್ಮ ತಾಯಿಭಾಷೆಯನ್ನು ಹೀಯಾಳಿಸಬಾರದು, ನಮ್ಮ ಭಾಷೆಯನ್ನು ನಾವೇ ಉಳಿಸಿ ಬೆಳೆಸಬೇಕು. ಉಡುಪಿ ಜಿಲ್ಲೆ ಆಯುರ್ವೇದದ ವಿಷಯದಲ್ಲಿ ಬಹಳಷ್ಟು ಸಾಧನೆ ಮಾಡಿದೆ, ನಮ್ಮಲ್ಲಿ ಸಾಕಷ್ಟು ಸಸ್ಯಸಂಕುಲವಿದೆ, ಆಯುರ್ವೇದಕ್ಕೂ ಅಗತ್ಯವಿದೆ, ಸಸ್ಯಗಳನ್ನು ಸಂರಕ್ಷಿಸುವ ಕೆಲಸ ಆಗಬೇಕಿದೆ, ಉಡುಪಿ ಜಿಲ್ಲೆಯನ್ನು ಆಯುರ್ವೇದ ವಲಯ ಎಂದು ಘೋಷಿಸಬೇಕು, ಕೇಂದ್ರ ಸರ್ಕಾರದ ನೆರವಿನಿಂದ ಆಯುರ್ವೇದವನ್ನು ಬೆಳೆಸಲು ಸರ್ಕಾರ ಯತ್ನಿಸಬೇಕಿದೆ, ಜೊತೆಗೆ ಉಡುಪಿ ಜಿಲ್ಲೆಯಲ್ಲಿ ಆಯುರ್ವೇದ ವಿಶ್ವವಿದ್ಯಾಲಯ ಆಗಬೇಕೆಂದು ಮನವಿ ಮಾಡಿದರು.

ಕನ್ನಡದಲ್ಲಿ ಜಾಗತಿಕ ಮಟ್ಟದ ಸಾಹಿತ್ಯ ಬಂದಿದೆ, ಆದರೆ ಪುಸ್ತಕೋಧ್ಯಮ ಬಡಕಲಾಗಿದೆ, ಸಾಹಿತಿಗಳು ಅವರ ಪುಸ್ತಕಗಳನ್ನು ಅವರೇ ಪ್ರಕಟಿಸುವುದು ಶೋಭೆಯಲ್ಲ, ವರ್ಷಕ್ಕೆ 3 ಸಾವಿರ ಪುಸ್ತಕಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ, ಗ್ರಂಥಾಲಯ ಎಂಬ ಅತ್ಯುತ್ತಮ ವ್ಯವಸ್ಥೆಯ ಮೂಲಕ ಇಡಿ ರಾಜ್ಯದಲ್ಲಿ ಕೃತಿಗಳು ದೊರಕುವಂತಾಗಿದೆ, ಆದರೆ ಸರ್ಕಾರಕ್ಕೆ ಗ್ರಂಥಾಲಯದ ಬಗ್ಗೆ ಹೆಚ್ಚಿನ ಆಸಕ್ತಿ ಕಾಣುತ್ತಿಲ್ಲ, ಕೆಲವು ವರ್ಷಗಳಿಂದ ಸರ್ಕಾರ ಸಗಟು ಖರೀದಿಯನ್ನು ಸರಿಯಾಗಿ ಮಾಡುತ್ತಿಲ್ಲ, ಖರೀದಿಸಿ ಪುಸ್ತಕಗಳಿಗೂ ಬೇಗ ಹಣದ ಸಂದಾಯ ಮಾಡುತ್ತಿಲ್ಲ, ಪ್ರಜೆಗಳಿಂದ ಸರ್ಕಾರ ಸಂಗ್ರಹಿಸುವ ಗ್ರಂಥಾಲಯ ತೆರಿಗೆಯನ್ನು 200-300 ಕೋಟಿಯನ್ನು ಗ್ರಂಥಾಲಯ ಇಲಾಖೆಗೆ ನೀಡಬೇಕು, ಆ ಮೂಲಕ ಪುಸ್ತಕೋದ್ಯಮವನ್ನು ಮುನ್ನಡೆಸಬೇಕು ಎಂದು ಮುನಿಯಾಲು ಗಣೇಶ ಶೆಣೈ ಒತ್ತಾಯಿಸಿದರು.

ಇದೇ ವೇಳೆ ಅವರು,ಮುನಿಯಾಲು ಗೋಧಾಮ, ಮುನಿಯಾಲು ಆಯುರ್ವೇದ ಆಸ್ಪತ್ರೆ ಮುನಿಯಾಲಿನ ಹೆಸರಿನ ಮೂಲಕ ವಿಶ್ವಖ್ಯಾತಿ ಪಡೆದಿದೆ, ಇದು ನಮ್ಮ ಮುನಿಯಾಲಿನ ಹೆಮ್ಮೆ. ವಿದೇಶದಲ್ಲಿ ಇದನ್ನೆಲ್ಲ ಕೇಳುವಾಗ ನಮ್ಮೂರಿನ ಬಗೆಗೆ ಖುಷಿಯಾಗುತ್ತದೆ ಎಂದು ನಮ್ಮ ಜಿಲ್ಲೆಗೂ ವಿಮಾನ ನಿಲ್ದಾಣದ ಭಾಗ್ಯ ದೊರೆಯಲಿ ಎಂದು ಆಶಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಸಮಾರೋಪದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ವಿವಿಧ ಕ್ಷೇತ್ರಗಳ ಸಾಧಕರಾದ ಗೋಪಾಲ ಶೆಟ್ಟಿ ಮಡಾಮಕ್ಕಿ, ಸುಂದರಿ ಮುಳ್ಳುಗುಡ್ಡೆ, ರಾಮಣ್ಣ ಪೂಜಾರಿ ನಾಡ್ಪಾಲು, ಗೋಪಾಲ ಕುಲಾಲ್ ಮುನಿಯಾಲು, ರಾಜೇಂದ್ರ ಕಿಣಿ ಬೆಳ್ವೆ, ನಿತ್ಯಾನಂದ ಶೆಟ್ಟಿ ಶಿವಪುರ, ಡಿ.ಜಿ.ರಾಘವೇಂದ್ರ ದೇವಾಡಿಗ ಚಾರ, ರಾಧಾಕೃಷ್ಣ ನಾಯ್ಕ್ ಬೇಳಂಜೆ, ಸುಧನ್ವ ಮುದ್ರಾಡಿ, ಸಮ್ಮೇಳನದ ಸರ್ವಾಧ್ಯಕ್ಷ ಮುನಿಯಾಲು ಗಣೇಶ ಶೆಣೈ,ಪ್ರಜಾವಾಣಿ ಸಾಧಕ ಪ್ರಶಸ್ತಿ ಪಡೆದ ಮಾವಿನಕಟ್ಟೆ ಶಂಕರ ಶೆಟ್ಟಿ, ಸ್ವಾಗತ ಸಮಿತಿಯ ಅಧ್ಯಕ್ಷ ದಿನೇಶ ಪೈ, ಕಾರ್ಯಾಧ್ಯಕ್ಷ ಗೋಪಿನಾಥ ಭಟ್, ಸಂಚಾಲಕಿ ಜ್ಯೋತಿ ಹರೀಶ್, ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಭಂಡಾರಿ ದಂಪತಿ, ಲಯನ್ಸ್ ಅಧ್ಯಕ್ಷ ಸೀತಾರಾಮ ಕಡಂಬ ಸಹಿತ ಸಮ್ಮೇಳನದ ಯಶಸ್ಸಿಗೆ ದುಡಿದ ಹಲವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವರಂಗ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಹೆಬ್ಬಾರ್, ಹೆಬ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಸಾದ್ ರಾವ್, ಮುನಿಯಾಲು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಆಚಾರ್ಯ, ಹೆಬ್ರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಉಮೇಶ್, ವರಂಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕಬ್ಬಿನಾಲೆ ಚಂದ್ರಶೇಖರ ಬಾಯರಿ, ರವಿರಾಜ್ ಕುಂಬಾಶಿ, ಭುಜಂಗ ಶೆಟ್ಟಿ ಪಡುಕುಡೂರು, ಟಿ.ಮಂಜುನಾಥ್ ಕಾಡುಹೊಳೆ, ಹರೀಶ ಪೂಜಾರಿ, ಮಹೇಶ ನಾಯ್ಕ್, ಹರ್ಷ ಶೆಟ್ಟಿ ಹೆಬ್ರಿ, ಸಾಹಿತ್ಯ ಪರಿಷತ್ ಮತ್ತು ಸ್ವಾಗತ ಸಮಿತಿಯ ಪ್ರಮುಖರು, ಸ್ವಾಗತ ಸಮಿತಿಯ ಅಧ್ಯಕ್ಷ ದಿನೇಶ ಪೈ, ಕಾರ್ಯಾಧ್ಯಕ್ಷ ಗೋಪಿನಾಥ ಭಟ್, ಸಂಚಾಲಕಿ ಜ್ಯೋತಿ ಹರೀಶ್, ಪ್ರಕಾಶ ಪೂಜಾರಿ ಮಾತಿಬೆಟ್ಟು ಮತ್ತು ರಾಜೇಶ್ ಕುಡಿಬೈಲ್, ಡಾ. ಪ್ರವೀನ್ ಕುಮಾರ್ ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!