ಕರ್ನಾಟಕದಲ್ಲಿ ಬಿಜೆಪಿ ಅಲೆ ಎದ್ದಿದೆ: ಸಿಎಂ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ, ಜ.29: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಒಂದು ದಿನದ ಭೇಟಿ ಸಂಚಲನ‌ ಉಂಟು ಮಾಡಿದ್ದು ಕರ್ನಾಟಕದಲ್ಲಿ ಬಿಜೆಪಿ ಅಲೆ ಎದ್ದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಬಹಳ ಗಟ್ಟಿ ಹಾಗೂ ಪ್ರಬಲವಾಗಿದೆ. ಅದಕ್ಕೆ ಇನ್ನಷ್ಟು ಶಕ್ತಿ ಹುರುಪು ಹುಮ್ಮಸ್ಸನ್ನು ಅಮಿತ್ ಷಾ ನೀಡಿದ್ದಾರೆ. ಸಾರ್ವಜನಿಕರಲ್ಲಿ ಇರುವ ಭಾವನೆಗಳು ಎಲ್ಲಾ ಸಭೆಗಳಲ್ಲಿ ವ್ಯಕ್ತವಾಗಿದೆ ಎಂದರು.

ಬಿಜೆಪಿ ಗೆಲವು ಖಂಡಿತ: ಕಾಂಗ್ರೆಸ್ ನವರು ನಾವೇ ಅಧಿಕಾರಕ್ಕೆ ಬಂದೇಬಿಟ್ಟಿದ್ದೇವೆ ಎಂದು ಫೋಜ್ ಕೊಡುತ್ತಿದ್ದಾರೆ. ಯಾರ ಏನೇ ಹೇಳಲಿ, ಸತ್ಯ ಬೇರೆಯೇ ಇದೆ. ನಮ್ಮ ನಾಯಕರು ಬಂದ ಸಂದರ್ಭದಲ್ಲಿ ಅದು ಅಭಿವ್ಯಕ್ತವಾಗುತ್ತಿದೆ. ಜನ ದೊಡ್ಡ ಸಂಖ್ಯೆಯಲ್ಲಿ ಬರುವುದಷ್ಟೇ ಅಲ್ಲ, ಹುರುಪು, ಸ್ಫೂರ್ತಿ ವ್ಯಕ್ತವಾಗುತ್ತಿರುವುದರಿಂದ ನಮ್ಮ ಗೆಲವು ಖಂಡಿತ. ಪಕ್ಷದ ಸಂಘಟನೆ ಬೂತ್ ಮಟ್ಟದಿಂದ ಪ್ರಬಲವಾಗಿದೆ. ಅದೇ ನಮ ಆಧಾರ ಮತ್ತು ಶಕ್ತಿ ಎಂದರು.

ಚುನಾವಣೆ ತಯಾರಿಗೆ ಸೂಚನೆ: ಬೆಳಗಾವಿ ಸಭೆಯಲ್ಲಿ ರಾಜ್ಯದ ನಾಯಕರಿಗೆ ವಿಶೇಷ ಸೂಚನೆ ಕೊಟ್ಟಿಲ್ಲ. ಆದರೆ ರಾಜ್ಯ ಮಟ್ಟದಲ್ಲಿ ಚುನಾವಣೆಗೆ ತಯಾರಿ ‌ಮಾಡಿಕೊಳ್ಳಲು ಸೂಚನೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಕರ್ನಾಟಕದ ರಾಜಕೀಯ ಸಂಸ್ಕೃತಿ ವ್ಯಕ್ತಿ ಆಧಾರಿತವಲ್ಲ: ಕಳೆದ ಒಂದೂವರೆ ವರ್ಷಗಳಿಂದ ಆರೋಪ ಪ್ರತ್ಯಾರೋಪವನ್ನು ಮಾಡಿಲ್ಲ. ನನ್ನ ಮೇಲೆ ಹಲವಾರು ಇಲ್ಲಸಲ್ಲದ ಮಾತುಗಳನ್ನಾಡಿದಾಗಲೂ ಕೂಡ ನಾನು ಅತ್ಯಂತ ಸಂಯಮದಿಂದ ಉತ್ತರ ಕೊಟ್ಟಿದ್ದೇನೆ. ಕರ್ನಾಟಕದ ರಾಜಕೀಯ ಸಂಸ್ಕೃತಿ ವ್ಯಕ್ತಿ ಆಧಾರಿತವಲ್ಲ, ಅಥವಾ ದ್ವೇಷಾಧಾರಿತವಲ್ಲ. ವಿಷಯಾಧಾರಿತ ಹಾಗೂ ಅಭಿವೃದ್ಧಿಯಾಧಾರಿತ ವಾಗಿದೆ. ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಇಟ್ಟು ಕೊಂಡೇ ಜನರ ಮುಂದೆ ಹೋಗುತ್ತಿದ್ದೇವೆ. ನೀವು ನಮ್ಮ ಅಭಿಯಾನಗಳಲ್ಲಿ ಇದನ್ನು ಕಾಣಬಹುದು. ನಾವು ಯಾವುದೇ ಟೀಕೆ ಟಿಪ್ಪಣಿಗಳನ್ನು ಮಾಡದೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳ ಸಾಧನೆಗಳನ್ನು ಆಧಾರಿಸಿಯೇ ಹೋಗುತ್ತಿದ್ದೇವೆ. ನಕಾರಾತ್ಮಕ ವಿಚಾರಗಳಿಲ್ಲ. ಕಾಂಗ್ರೆಸ್ ಪಕ್ಷ ವಿಶೇಷವಾಗಿ ಬಹಳ ಹತಾಶರಾಗಿದ್ದಾರೆ. ಅವರು ಬಳಸುವ ಭಾಷೆಯಲ್ಲಿ ವ್ಯಕ್ತವಾಗ್ತಿದೆ.
ಕರ್ನಾಟಕದ ರಾಜಕಾರಣದಲ್ಲಿ ಎಂದೆಂದೂ ಬಳಸದ ಭಾಷೆ ಬಳಸುವುದನ್ನು ನಾವು ಕಾಣುತ್ತಿದ್ದೇವೆ. ಇದು ಹತಾಶೆಯ ಸಂಕೇತ ಎಂದರು.

ಭಿನ್ನಮತವಿಲ್ಲ: ಬಿ.ಎಲ್. ಸಂತೋಷ್ ಅವರು ಪಕ್ಷದ ಸಂಘಟಾನತ್ಮಕ ವಿಷಯವಾಗಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಮೈಸೂರು, ಮಂಡ್ಯ , ಬಾಗಲಕೋಟೆ, ಬಿಜಾಪುರಕ್ಕೆ ಭೇಟಿ ನೀಡಿದ್ದಾರೆ ಎಂದರು. ನಮ್ಮ ಪಕ್ಷದಲ್ಲಿ ಯಾವುದೇ ವಿಚಾರವಿದ್ದರೂ ಅಂತಿಮವಾಗಿ ಪಕ್ಷದ ಹಿರಿಯರು ಹೇಳುವುದನ್ನು ನಾವು ಕೇಳುತ್ತೇವೆ. ಅದೇ ಆಗಿರೋದು. ಬೆಳಗಾವಿಯಲ್ಲಿ ಭಿನ್ನಮತ ಇಲ್ಲ ಎಂದರು.

ಅಧಿಕೃತವಾಗಿವಾಗಿಲ್ಲ: ಚುನಾವಣೆ ಅಭ್ಯರ್ಥಿಗಳ ಪಟ್ಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ ಸಮೀಕ್ಷಾ ಕಾರ್ಯಗಳು ನಡೆಯುತ್ತಿವೆ. ಆದರೆ ಯಾವುದೂ ಅಧಿಕೃತವಾಗಿ ಆಗಿಲ್ಲ ಎಂದರು.

ಮಂಡ್ಯ ಉಸ್ತುವಾರಿ ಬಡಲಾವಣೆಯಾಗಿರುವುದಕ್ಕೆ ಗೋ ಬ್ಯಾಕ್ ಅಶೋಕ್ ಪ್ರತಿಭಟನೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಯಾರೋ ನಾಲ್ಕ ಜನ ಮಾಡ್ತಾರೆ, ಅದನ್ನು ಮಾಧ್ಯಮಗಳು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದರು.

Leave a Reply

Your email address will not be published. Required fields are marked *

error: Content is protected !!