ಶಿರ್ವ: ಕಾಲೇಜ್ ಆವರಣದಲ್ಲಿ ಬೀದಿ ನಾಯಿಯ ಹತ್ಯೆ- ದೂರು ದಾಖಲು

ಶಿರ್ವ ಜ.28(ಉಡುಪಿ ಟೈಮ್ಸ್ ವರದಿ): ನಾಯಿಯನ್ನು ಕೋಲಿನಿಂದ ಹೊಡೆದು ಸಾಯಿಸಿರುವ ಅಮಾನವೀಯ ಘಟನೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದೀಗ ಈ ಕೃತ್ಯದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಬಗ್ಗೆ ಎಸ್‌.ಪಿ.ಸಿ.ಎ. ಪ್ರಾಣಿ ದಯಾ ಸಂಘದಲ್ಲಿ ಕಮಿಟಿ  ಸದಸ್ಯೆಯಾಗಿರುವ ಕಾಪುವಿನ ಕುರ್ಕಾಲು ಗ್ರಾಮದ ಮಂಜುಳಾ ಕರ್ಕೇರಾ ಎಂಬವರು ಶಿರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ನಿನ್ನೆ ಮಧ್ಯಾಹ್ನದ ವೇಳೆ ಮಂಜುಳಾ ಕರ್ಕೇರಾ ಅವರ ಮೊಬೈಲ್‌ಗೆ ಇಬ್ಬರು ಸೇರಿಕೊಂಡು ಒಬ್ಬಾತನು ಕೋಲಿನಿಂದ ಹೊಡೆದು ನಾಯಿಯನ್ನು ಸಾಯಿಸಿದ  ಬಳಿಕ ಆತನು ಒಂದು ಗೋಣಿ ಚೀಲದಲ್ಲಿ ಎಳೆದುಕೊಂಡು ಬಂದು ಇನ್ನೊಂದು ಗೋಣಿ ಚೀಲದಲ್ಲಿ ಹಾಕುತ್ತಿರುವ ದೃಶ್ಯಾವಳಿಯನ್ನು ಸ್ನೇಹಿತರೊಬ್ಬರು ಕಳುಹಿಸಿದ್ದರು.

ಈ ವೀಡಿಯೋವನ್ನು ನೋಡಿ ಈ ಬಗ್ಗೆ ಕೇಳಿದಾಗ ಘಟನೆಯು ನಿನ್ನೆ ಬೆಳಿಗ್ಗೆ  ಶಿರ್ವ ಗ್ರಾಮದ ಬಂಟಕಲ್‌ ಮಧ್ವರಾಜ್‌ ವಾದಿರಾಜ ಇನ್ಸುಸ್ಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜಿನ ಕ್ಯಾಂಪಸ್‌ನ ಒಳಗಡೆ  ನಡೆದಿದ್ದು, ಬಿಳಿ ಬಣ್ಣದ ಬೀದಿ ನಾಯಿಯನ್ನು ಅದೇ  ಕಾಲೇಜಿನ ಗಾರ್ಡನ್‌ ಕೆಲಸ ಮಾಡುತ್ತಿರುವ  ನಾಗರಾಜ್ ಮತ್ತು ವಾರ್ಡನ್‌ ಕೆಲಸ ಮಾಡುತ್ತಿರುವ  ರಾಜೇಶ್‌ರವರು ಸೇರಿಕೊಂಡು ನಾಗರಾಜ್ ಎಂಬಾತ ನಾಯಿಯನ್ನು ಕೋಲಿನಿಂದ ಹೊಡೆದು ಸಾಯಿಸಿದ್ದು, ಈ ದೃಶ್ಯಾವಳಿಯನ್ನು ಅದೇ ಕಾಲೇಜ್‌ನ ವಿದ್ಯಾರ್ಥಿಯೊಬ್ಬರು ವೀಡಿಯೋ ರೆಕಾರ್ಡ್‌ಮಾಡಿ ಕಳುಹಿಸಿರುವುದಾಗಿ ತಿಳಿಸಿದ್ದರು.

ಅದರಂತೆ ಕೃತ್ಯ ಎಸಗಿದ ನಾಗರಾಜ್‌ ಹಾಗೂ ರಾಜೇಶ್‌ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೀಡಿದ ದೂರಿನಂತೆ ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 thought on “ಶಿರ್ವ: ಕಾಲೇಜ್ ಆವರಣದಲ್ಲಿ ಬೀದಿ ನಾಯಿಯ ಹತ್ಯೆ- ದೂರು ದಾಖಲು

Leave a Reply

Your email address will not be published. Required fields are marked *

error: Content is protected !!