ಕೋಟ: ಗೋಡಂಬಿ ವ್ಯಾಪಾರಿಗೆ16.28 ಲಕ್ಷ ರೂ. ವಂಚನೆ
ಕೋಟ ಡಿ.1(ಉಡುಪಿ ಟೈಮ್ಸ್ ವರದಿ): ಇಲ್ಲಿನ ಗೋಡಂಬಿ ವ್ಯಾಪಾರಿಯೊಬ್ಬರರ ಬಳಿ ಲಕ್ಷಾಂತರ ರೂ. ಮೌಲ್ಯದ ಗೋಡಂಬಿ ಖರೀದಿಸಿ ಹಣ ನೀಡದೆ ಮಹಾರಾಷ್ಟ್ರ ಮೂಲದ ಟ್ರೇಡಿಂಗ್ ಕಂಪೆನಿಯು ವಂಚಿಸಿದ್ದು ಮಾತ್ರವಲ್ಲದೆ ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವ ಬಗ್ಗೆ ಕೋಟ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಂದ್ರಶೇಖರ ಅವರು ನಂಚಾರುವಿನ ಶ್ರೀರಾಮ್ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲೀಕರಾಗಿದ್ದು, ಗೋಡಂಬಿ ಸಂಸ್ಕರಣ ವ್ಯವಹಾರವನ್ನು ನಡೆಸುತ್ತಿದ್ದರು. ಮಹಾರಾಷ್ಟ್ರದ ಪೂನಾ ದಲ್ಲಿರುವ ಜಿ ಎನ್ ಟ್ರೇಡಿಂಗ್ ಕಂಪೆನಿ ಇವರ ಗ್ರಾಹಕರಾಗಿದ್ದು ಸುಮಾರು 2008 ನೇ ಇಸವಿಯಿಂದ ಕಂಪೆನಿಯವರು ಸಂಸ್ಕರಿತ ಗೋಡಂಬಿಯನ್ನು ಖರೀದಿಸುತ್ತಿದ್ದರು. ಆರೋಪಿತ ಕಂಪೆನಿಯು 2020-21ನೇ ಸಾಲಿನಲ್ಲಿ ಗೋಡಂಬಿ ಖರೀದಿಸಿದ 16,28,559 ಹಣವನ್ನು ಪಾವತಿಸಲು ಬಾಕಿಯಿದ್ದು, ಬರಬೇಕಾದ ಹಣಕ್ಕಾಗಿ ಕರೆ ಮಾಡಿದಾಗ ಆ ಕಂಪೆನಿಯ ಮಾಲಿಕ ವಿಜಯ ಜಗ್ವಾನಿ ಎಂಬಾತ ಹಿಂದಿ ಭಾಷೆಯಲ್ಲಿ ಅವಾಚ್ಯವಾಗಿ ನಿಂದಿಸಿ ಕೊಲೆ ಮಾಡಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಹಾಗೂ ಮೋಸ ಮಾಡುವ ಉದ್ದೇಶದಿಂದ ಗೋಡಂಬಿಯನ್ನು ಕ್ರೆಡಿಟ್ ನಲ್ಲಿ ಖರೀದಿಸಿ ಹಣವನ್ನು ವಾಪಾಸ್ಸು ನೀಡದೇ ವಂಚಿಸಿದ್ದಾಗಿ ಚಂದ್ರಶೇಖರ ಅವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.