ಬೈಂದೂರು: ರೈಲು ಡಿಕ್ಕಿ ಹೊಡೆದು ಬಸ್ ಚಾಲಕ ಮೃತ್ಯು
ಬೈಂದೂರು ನ.30(ಉಡುಪಿ ಟೈಮ್ಸ್ ವರದಿ): ತಾಲೂಕಿನ ವಿದ್ಯಾನಗರ ರೈಲ್ವೇ ಗೇಟ್ ನ ಬಳಿ ರೈಲು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಸಂತೋಷ ದೇವಾಡಿಗ ಮೃತಪಟ್ಟವರು. ಇವರು ಸ್ಕೂಲ್ ಬಸ್ ಹಾಗೂ ರಿಕ್ಷಾ ಚಾಲಕನಾಗಿದ್ದರು. ಎಂದಿನಂತೆ ನ.29 ರಂದು ಬೆಳಿಗ್ಗೆ ಕೆಲಸಕ್ಕೆ ಹೋದವರು ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ಬಳಿಕ ಮತ್ತೆ ರಾತ್ರಿ 11-30 ರ ಸುಮಾರಿಗೆ ಮನೆಯವರಲ್ಲಿ ರೈಲ್ವೇ ಸ್ಟೇಷನ್ ನಲ್ಲಿ ರಿಕ್ಷಾ ಬಾಡಿಗೆ ಇದೆ ಎಂದು ಹೇಳಿ ಮನೆಯಿಂದ ನಡೆದುಕೊಂಡು ರೈಲ್ವೇಸ್ಟೇಷನ್ ಕಡೆಗೆ ಹೋಗಿದ್ದರು. ಈ ವೇಳೆ ಬೈಂದೂರು ಗ್ರಾಮದ ವಿದ್ಯಾನಗರ ರೈಲ್ವೇ ಗೇಟ್ ನ ಬಳಿ ರೈಲ್ವೇ ಹಳಿಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮಯ ಅಥವಾ ರೈಲ್ವೇ ಹಳಿಯನ್ನು ದಾಟುವ ವೇಳೆಯಲ್ಲಿ ರೈಲು ಡಿಕ್ಕಿ ಹೊಡೆದು ಮೃತಪಟ್ಟಿರಬಹುದು ಎಂಬುದಾಗಿ ಮೃತರ ತಮ್ಮ ಸಂದೀಪ ಎಂಬವರು ನೀಡಿದ ಮಾಹಿತಿಯಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.