ಮುನಿಯಾಲು ಗೋಧಾಮದಿಂದ ದೇಶಕ್ಕೆ ಶ್ರೇಷ್ಠ ಕೊಡುಗೆ- ಶ್ರೀಕಾಂತ್ ನಾಯಕ್
ಮುನಿಯಾಲು : ಪ್ರಕೃತಿಯ ಮಡಿಲಿನಲ್ಲಿರುವ ದೇಶಿಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಗೋಧಾಮ ದೇಶಕ್ಕೊಂದು ದೊಡ್ಡ ಶ್ರೇಷ್ಠ ಕೊಡುಗೆ. ಪುರಾತನ ಮತ್ತು ಆಧುನಿಕ ಶೈಲಿಯಲ್ಲಿ ತಲೆಎತ್ತಿರುವ ಭವ್ಯ ಗೊಧಾಮದಿಂದ ನಾಡಿಗೆ ನಿರಂತರ ಸೇವೆ ದೊರೆಯಲಿ, ಆ ಮೂಲಕ ಯುವ ಸಮುದಾಯ ಹೈನುಗಾರಿಕೆಯ ಮೂಲಕ ದೇಶಿಯ ಗೋತಳಿಗಳ ಅಭಿವೃದ್ಧಿಯ ಜೊತೆಯಲ್ಲೇ ಬದುಕು ಕಟ್ಟಲು ಗೋಧಾಮ ಪ್ರೇರಣೆ ನೀಡಿದೆ ಕಾಪು ಕ್ಷೇತ್ರದ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಮುನಿಯಾಲಿನಲ್ಲಿರುವ ದೇಶಿಯ ಗೋ ತಳಿಗಳ ಅಭಿವೃದ್ಧಿ ಕೇಂದ್ರ ಗೋಧಾಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಮಹೇಶ್ ಮರ್ಣೆ ಅವರ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಕುಟುಂಬ ಮಿಲನದಲ್ಲಿ ಅಭಿನಂದನಾ ಭಾಷಣ ಮಾಡಿದರು. ಗೋ ಸಮೃದ್ಧಿಯಿಂದ ದೇಶ ಸಮೃದ್ಧಿ ಆ ಮೂಲಕ ಸ್ವಾವಲಂಬಿ ಬದುಕು ಕಟ್ಟಲು ಸಾಧ್ಯ ಎಂದು ಮುನಿಯಾಲು ಗೋಧಾಮದ ಸಂಸ್ಥಾಪಕ ಜಿ. ರಾಮಕೃಷ್ಣ ಆಚಾರ್ ಹೇಳಿದರು.
ಪುರೋಹಿತ್ ದಾಮೋದರ ಶರ್ಮ ನೇತ್ರತ್ವದಲ್ಲಿ ವಿಶೇಷ ಗೋಪೂಜೆ ನಡೆಸಿ ಅಭಿನಂದನಾ ಕಾರ್ಯಕ್ರಮ ನಡೆಯಿತು. ಯೋಧರಾದ ಸಮಾಜಸೇವಕ ಕೇಶವ ಆಚಾರ್ ಕರ್ವಾಲು, ಮಣಿಪುರ ಗ್ರಾಮ ಪಂಚಾಯಿತಿ ಸದಸ್ಯ ಪದ್ಮನಾಭ ನಾಯಕ್ ಕೊಡಂಗಳ, ಮುನಿಯಾಲು ಗೋಧಾಮದ ಕಾರ್ಯದರ್ಶಿ ಸವಿತಾ ಆರ್ ಆಚಾರ್ ಉಪಸ್ಥಿತರಿದ್ದರು.