ಅಕ್ರಮವಾಗಿ ಅನ್ನ ಭಾಗ್ಯದ ಅಕ್ಕಿ ಸಾಗಾಟ ಯತ್ನ- 22,000 ರೂ. ಮೌಲ್ಯದ ಅಕ್ಕಿ ವಶಕ್ಕೆ
ಕುಂದಾಪುರ ನ.26(ಉಡುಪಿ ಟೈಮ್ಸ್ ವರದಿ): ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದ ಪೊಲೀಸರು ಅಪಾರ ಪ್ರಮಾಣದ ಅಕ್ಕಿ ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕುಂದಾಪುರ ತಾಲೂಕು ಹೆಮ್ಮಾಡಿ ಗ್ರಾಮದ ಸಂತೋಷ ನಗರ ಎಂಬಲ್ಲಿ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಲು ವಾಹನದಲ್ಲಿ ಸಾಗಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಪಡೆದ ಕುಂದಾಪುರ ಆಹಾರ ನಿರೀಕ್ಷಕ ಸುರೇಶ ಎಚ್.ಎಸ್ ಅವರು ನ.25 ರಂದು ರಾತ್ರಿ ಕುಂದಾಪುರ ಠಾಣಾ ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಹೆಮ್ಮಾಡಿ ಗ್ರಾಮದ ಸಂತೋಷ ನಗರಕ್ಕೆ ತಿರುಗುವಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಂದ ಗೂಡ್ಸ್ ವಾಹನವನ್ನು ತಡೆದು ಪರಿಶೀಲಿಸಿದಾಗ 22,000 ಮೌಲ್ಯದ ಅಕ್ಕಿ ಪತ್ತೆಯಾಗಿದೆ.
ಈ ಬಗ್ಗೆ ವಾಹನದ ಚಾಲಕ ಬೈಂದೂರಿನ ನಾವುಂದ ಗ್ರಾಮದ ವಿಜಯ ಟಿ ಪೂಜಾರಿ ವಿಚಾರಿದಾಗ ಆತನು ‘ಸರಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಹೆಮ್ಮಾಡಿ ಗ್ರಾಮದ ಸಂತೋಷನಗರ ನಿವಾಸಿ ಅಯೂಬ್ ಎಂಬುವರ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದು, ಆ ಅಕ್ಕಿಯನ್ನು ಮರವಂತೆಗೆ ತಂದು ಕೊಡುವಂತೆ ಪರಿಚಯದ ಕೋಡಿಯ ನಿವಾಸಿ ಫಿರೋಝ್ ರವರು ಕರೆ ಮಾಡಿ ತಿಳಿಸಿದ್ದನು. ಅದರಂತೆ ಅಯೂಬ್ ರವರ ಮನೆಗೆ ತೆರಳಿ ಅಕ್ಕಿಯನ್ನು ಯಾವುದೇ ಪರವಾನಿಗೆ ಇಲ್ಲದೆ ಮರವಂತೆಗೆ ಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದನು.
ಈ ವೇಳೆ ಪೊಲೀಸರು ವಾಹನದಲ್ಲಿ ಪತ್ತೆಯಾದ ಅಂದಾಜು 22,000 ಮೌಲ್ಯದ ಅಕ್ಕಿ, ಗೂಡ್ಸ್ ವಾಹನ ಹಾಗೂ ಇತರ ಸುತ್ತುಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.