ಉಡುಪಿ: ಮುದ್ರಾ ಲೋನ್ ಹೆಸರಲ್ಲಿ ವಕ್ತಿಗೆ 2.38 ಲಕ್ಷ ರೂ ವಂಚನೆ
ಉಡುಪಿ ನ.25(ಉಡುಪಿ ಟೈಮ್ಸ್ ವರದಿ): ಸಾಲ ನೀಡುವುದಾಗಿ ಬಂದ ಮೊಬೈಲ್ ಸಂದೇಶವನ್ನು ನಂಬಿ ವ್ಯಕ್ತಿಯೊಬ್ಬರು 2.38 ಲಕ್ಷ ರೂ.ಕಳೆದುಕೊಂಡಿರುವ ಬಗ್ಗೆ ಉಡುಪಿ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸತೀಶ್ ಜೈನ್ ಎಂಬವರು ನ.2 ರಂದು ತಮ್ಮ ಮೊಬೈಲ್ ಗೆ ಬಂದ ಮುದ್ರಾಲೋನ್ ಯೋಜನೆಯಡಿ ಸಾಲ ನೀಡಲಾಗುವುದು ಎಂಬ ಸಂದೇಶವನ್ನು ಕಂಡು ಅದರಲ್ಲಿದ್ದ ಮೊಬೈಲ್ ನಂಬರಿಗೆ ಕರೆ ಮಾಡಿದ್ದರು. ಈ ವೇಳೆ ಕರೆ ಸ್ವೀಕರಿಸಿದ ವ್ಯಕ್ತಿ, ತಾನು ಮುದ್ರ ಲೋನ್ ಸಂಸ್ಥೆಯ ಮ್ಯಾನೇಜರ್ ಎಂಬುದಾಗಿ, ಸಾಲ ನೀಡುವುದಾಗಿ ಹೇಳಿದ್ದನು. ಇದನ್ನು ನಂಬಿದ ಸತೀಶ್ ಅವರು ಲೋನ್ಗೆ ಸಂಬಂಧಿಸಿ ದಾಖಲಾತಿಯನ್ನು ಪಡೆದು, ರಿಜಿಸ್ಟ್ರೇಶನ್ ಚಾರ್ಜ್ ರೂ.3,200 ನ್ನು ಆತ ಸೂಚಿಸಿದ ಖಾತೆಗೆ ಜಮೆ ಮಾಡಿದ್ದರು.
ಆ ಬಳಿಕ ಯಾರೋ ಅಪರಿಚಿತ ವ್ಯಕ್ತಿಗಳು ಮುದ್ರಾ ಲೋನ್ ಸಂಸ್ಥೆಯಿಂದ ಎಂದು ಸತೀಶ್ ಅವರನ್ನು ನಂಬಿಸಿ, ಅಪರಿಚಿತ ನಂಬ್ರಗಳಿಂದ ಕರೆ ಮಾಡಿ ಪ್ರೋಸೆಸ್ ಚಾರ್ಜ್, ಇನ್ಸುರೆನ್ಸ್ ಚಾರ್ಜ, ಎನ್.ಓ.ಸಿ, ಆರ್.ಬಿ.ಐ ಟ್ಯಾಕ್ಸ್, ಕಮಿಷನ್ ಇತ್ಯಾದಿಗಳಿಗೆ ಹಣ ಕಟ್ಟುವಂತೆ ತಿಳಿಸಿ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗೆ ಒಟ್ಟು ರೂ,2,38,420 ಹಣವನ್ನು ಪಡೆದು ಕೊಂಡಿದ್ದರು. ಆದರೆ ಆ ಬಳಿಕ ಆರೋಪಿಗಳು ಸಾಲವನ್ನು ನೀಡದೇ, ಸತೀಶ್ ಅವರು ಕಟ್ಟಿದ ಹಣವನ್ನೂ ವಾಪಾಸು ನೀಡದೇ ವಂಚಿಸಿರುವುದಾಗಿ ಸತೀಶ್ ಜೈನ್ ಅವರು ನೀಡಿದ ದೂರಿನಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.