ಪಡುಬಿದ್ರಿ: ವಿಳಾಸ ಕೇಳುವ ನೆಪದಲ್ಲಿ ಶಿಕ್ಷಕಿಯ ಕರಿಮಣಿ ಸರ ಸೆಳೆದು ಪರಾರಿ
ಪಡುಬಿದ್ರಿ, ನ.8 (ಉಡುಪಿ ಟೈಮ್ಸ್ ವರದಿ): ವಿಳಾಸ ಕೇಳುವ ನೆಪದಲ್ಲಿ ಆಗಂತುಕರಿಬ್ಬರು ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ 1.44 ಲಕ್ಷ ರೂ. ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಇನ್ನಾ ಹೊಸಕಾಡು ರಸ್ತೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಇನ್ನಾ ಗ್ರಾಮ ಕುರ್ಕಿಲಬೆಟ್ಟುವಿನ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿರುವ ರೇಖಾ ಅವರು ಎಂದಿನಂತೆ ಇಂದು ಬೆಳಿಗ್ಗೆ ಸ್ಕೂಟಿಯಲ್ಲಿ ಮನೆಯಿಂದ ಅಂಗನವಾಡಿಗೆ ಇನ್ನಾ ಹೊಸಕಾಡು ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಎಲಿಜಾ ಕ್ರಾಸ್ತ ಎಂಬುವವರ ಹಾಡಿಯ ಜಾಗದ ಬಳಿ ತಲುಪಿದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಯುವಕರಲ್ಲಿ ಸಹ ಸವಾರನು ರೇಖಾ ಅವರ ಬಳಿ ಒಂದು ಚೀಟಿ ತೋರಿಸುತ್ತಾ, ವಿಳಾಸ ಕೇಳುವ ನೆಪದಲ್ಲಿ ಕುತ್ತಿಗೆಯಲ್ಲಿದ್ದ 1,44,000 ರೂ. ಮೌಲ್ಯದ ಸುಮಾರು 32 ಗ್ರಾಮ್ (4 ಪವನ್) ತೂಕದ ಚಿನ್ನದ ಕರಿಮಣಿ ಸರವನ್ನು ಕಿತ್ತುಕೊಂಡು ಇಬ್ಬರು ಪರಾರಿಯಾಗಿದ್ದಾರೆ. ಈ ಬಗ್ಗೆ ರೇಖಾ ಅವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.