ಉಡುಪಿ: ನಾಪತ್ತೆಯಾಗಿದ್ದ ನಿವೃತ್ತ ಮುಖ್ಯ ಶಿಕ್ಷಕರ ಮೃತದೇಹ ಕೆರೆಯಲ್ಲಿ ಪತ್ತೆ
ಕಾಪು ನ.8 (ಉಡುಪಿ ಟೈಮ್ಸ್ ವರದಿ): ಶಿವಳ್ಳಿಯ ಮೂಡುಪೆರಂಪಳ್ಳಿಯಿಂದ ನಾಪತ್ತೆಯಾಗಿದ್ದ ನಿವೃತ್ತ ಮುಖ್ಯ ಶಿಕ್ಷಕರ ಮೃತದೇಹ ಮೃತದೇಹ ಇನ್ನಂಜೆಯ ಉಂಡಾರು ವಿಷ್ಣುಮೂರ್ತಿ ದೇವಸ್ಥಾನದ ಸಮೀಪದ ತೋಡಿನಲ್ಲಿ ಪತ್ತೆಯಾಗಿದೆ.
ರಾಮದಾಸ ಶಿವತ್ತಾಯ (75) ಮೃತಪಟ್ಟವರು. ಇವರು ನ.6 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೂಡು ಪೆರಂಪಳ್ಳಿಯ ಮನೆಯಿಂದ ಹೊರಗೆ ಹೋಗಿ ನಾಪತ್ತೆಯಾಗಿದ್ದರು. ಇವರನ್ನು ಎಲ್ಲಾ ಕಡೆ ಹುಡುಕಿದರೂ ಸಿಗದೇ ಇದ್ದಾಗ ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಲಾಗಿತ್ತು.
ರಾಮದಾಸ ಶಿವತ್ತಾಯರವರು ತಂಗಿ ಮನೆ ಇನ್ನಂಜೆಯಲ್ಲಿದ್ದು ಅಲ್ಲಿಗೆ ಬಂದಿರಬಹುದೆಂಬ ಅನುಮಾನಗೊಂಡ ಮನೆಯವರು ಇನ್ನಂಜೆಗೆ ಬಂದು ಉಂಡಾರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ಸಿಸಿ ಕ್ಯಾಮಾರವನ್ನು ಪರಿಶೀಲಿಸಿದಾಗ ರಾಮದಾಸ ಶಿವತ್ತಾಯರವರು ದೇವಸ್ಥಾನದ ಪ್ರಾಂಗಣದಲ್ಲಿ ತಿರುಗಾಡುತ್ತಿರುವ ದೃಶ್ಯ ಕಂಡು ಬಂದಿತ್ತು. ಆದ್ದರಿಂದ ಇನ್ನಂಜೆಯಲ್ಲಿ ಹುಡುಕಾಡಿದ್ದಲ್ಲಿ ದೇವಸ್ಥಾನದ ಸಮೀಪ ಇರುವ ಸಣ್ಣ ತೋಡಿನಲ್ಲಿ ರಾಮದಾಸ ಅವರ ಮೃತದೇಹ ಪತ್ತೆಯಾಗಿದೆ.
ಅದರಂತೆ ರಾಮದಾಸ ಶಿವತ್ತಾಯರವರು ನ.6 ರ ಮಧ್ಯಾಹ್ನದಿಂದ ನ.8 ರ ಬೆಳಗ್ಗಿನ ಅವಧಿಯಲ್ಲಿ ತಂಗಿಯ ಮನೆಗೆ ಬಂದವರು ದಾರಿ ತಪ್ಪಿ ತೋಡಿನ ಕಡೆಗೆ ಹೋಗಿ ಆಕಸ್ಮಿಕವಾಗಿ ತೋಡಿನ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿ ಶಶಾಂಕ ಶಿವತ್ತಾಯ ಎಂಬವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.