ಹೆಬ್ರಿ: ಬೈಕ್ ಡಿಕ್ಕಿ- ವ್ಯಕ್ತಿ ಮೃತ್ಯು
ಶಂಕರನಾರಾಯಣ ನ.6(ಉಡುಪಿ ಟೈಮ್ಸ್ ವರದಿ) : ಬೈಕ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ಗೋಳಿಯಂಗಡಿ ಬಳಿ ನಡೆದಿದೆ.
ರಾಮ ನಾಯ್ಕ (70) ಮೃತಪಟ್ಟವರು. ನ.1 ರಂದು ರಾಮ ನಾಯ್ಕ ಅವರು ಗೋಳಿಯಂಗಡಿಯ ಹೋಟೆಲ್ ವೊಂದರ ಬಳಿಯ ಮಣ್ಣು ರಸ್ತೆಯಲ್ಲಿ ನಿಂತುಕೊಂಡಿರುವಾಗ ಗೋಳಿಯಂಗಡಿ ಪೇಟೆ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ತನ್ನ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಬಂದ ಚಂದ್ರ ನಾಯ್ಕ್, ರಾಮ ನಾಯ್ಕ ಇವರಿಗೆ ಡಿಕ್ಕಿ ಹೊಡೆದಿದ್ದಾನೆ.
ಪರಿಣಾಮ ರಾಮ ನಾಯ್ಕ ಇವರು ರಸ್ತೆಯ ಮೇಲೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು. ಈ ವೇಳೆ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.