ವಿಮಾ ನಿಯಂತ್ರಣ ಪ್ರಾಧಿಕಾರದ ನೂತನ ನಿಯಮ ವಿರೋಧಿಸಿ ಕೇಂದ್ರ ಸಚಿವರಿಗೆ ಮನವಿ

ಚಿಕ್ಕಮಗಳೂರು, ಅ.6(ಉಡುಪಿ ಟೈಮ್ಸ್ ವರದಿ): ವಿಮಾ ನಿಯಂತ್ರಣ ಪ್ರಾಧಿಕಾರದ ಉದ್ದೇಶಿತ ನೂತನ ನಿಯಮಗಳು ವಿಮಾ ಪ್ರತಿನಿಧಿಗಳಿಗೆ ಹಾಗೂ ವಿಮಾರಂಗಕ್ಕೆ ತೀವ್ರ ಮಾರಕವಾಗಲಿದೆ ಎಂದು ಉಡುಪಿ ವಿಭಾಗದ ಎಲ್ಐಸಿ ಅಭಿವೃದ್ಧಿ ಅಧಿಕಾರಿಗಳ ಸಂಘ ಆರೋಪಿಸಿದೆ. 

ವಿಮಾ ನಿಯಂತ್ರಣ ಪ್ರಾಧಿಕಾರದ ನೂತನ ನಿಯಮಗಳಿಂದಾಗುವ ಅಪಾಯಗಳ ಬಗ್ಗೆ ಸಂಘದ ಕಾರ್ಯದರ್ಶಿ ಸಂದೇಶ್ ಎಚ್ ಎಮ್, ಸಹ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಶೇಷಪ್ಪ, ಚಿಕ್ಕಮಗಳೂರಿನ ಅಭಿವೃದ್ಧಿ ಅಧಿಕಾರಿಗಳಾದ ವಿನೀತ್ ಕುಮಾರ್, ಶಿವಣ್ಣ ಬಿ ಹಾಗೂ ಇತರರು ಶನಿವಾರ ಚಿಕ್ಕಮಗಳೂರು ಹಾಗೂ ಉಡುಪಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು ಈ ವೇಳೆ ಈ ಯೋಜನೆಯಿಂದಾ ಗುವ ಸಮಸ್ಯೆಗಳ ಕುರಿತು ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ರವರಿಗೆ ಪತ್ರ ಬರೆಯಲು ಮನವಿ ಮಾಡಿಕೊಂಡರು.

ಹಾಗೂ ಇಡೀ ದೇಶದಾದ್ಯಂತ 25 ಲಕ್ಷದಷ್ಟು ವಿಮಾ ಪ್ರತಿನಿಧಿಗಳು ಕೆಲಸ ನಿರ್ವಹಿಸುತ್ತಿದ್ದು, ಕೇವಲ ಒಂದು ಪಾಲಿಸಿ ಮಾಡಲು ಪ್ರತಿದಿನ ಏಳರಿಂದ ಎಂಟು ಜನರನ್ನು ಕನಿಷ್ಠ ನಾಲ್ಕೈದು ಬಾರಿ ಆದರೂ ಭೇಟಿ ಮಾಡಿ ವಿಮಾ ರಕ್ಷಣೆಯನ್ನ ಒದಗಿಸುತ್ತಿದ್ದಾರೆ. ರಿನಿವಲ್ ಪ್ರೀಮಿಯಂ ಕಲ್ಪಿಸಲು ಅನೇಕ ಬಾರಿ ಗ್ರಾಹಕರನ್ನ ಸಂಪರ್ಕಿಸಿ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡಲು ಪ್ರಯತ್ನ ನಡೆಸುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ತಮ್ಮ ಜೀವ ಭಯವನ್ನು ಬಿಟ್ಟು ವಿಮಾ ಪ್ರತಿನಿಧಿಗಳು ಜನರಿಗೆ ವಿಮ ರಕ್ಷಣೆ ನೀಡಲು ಹಾಗೂ ಲಕ್ಷಾಂತರ ಕ್ಲೈಂ ಪಾವತಿಸಲು ನೆರವಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ವಿಮಾ ನಿಯಂತ್ರಣ ಪ್ರಾಧಿಕಾರ ಅವರಿಗೆ ನೀಡುವ ಕಮಿಷನ್ ಅನ್ನು ಕೂಡ ಮ್ಯಾನೇಜ್ಮೆಂಟ್ ವೆಚ್ಚದೊಳಗೆ ಸೇರಿಸಲು ವಿಮಾ ಕಂಪನಿಗಳಿಗೆ ಸೂಚಿಸಿದೆ. ಇದು ವಿಮಾ ಪ್ರತಿನಿಧಿಗಳಿಗೆ ಬದುಕಿನ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಸಂಸದರಿಗೆ ಮನವರಿಕೆ ಮಾಡಿದರು.

ಈ ನಿಯಮ ದೇಶದಲ್ಲಿ ನಿರುದ್ಯೋಗ ಪ್ರಮಾಣ ಇನ್ನೂ ಹೆಚ್ಚಾಗಲು ಕಾರಣವಾಗಲಿದೆ. ಆದ್ದರಿಂದ ವಿಮ ನಿಯಂತ್ರಣ ಪ್ರಾಧಿಕಾರವು ತರಲು ಉದ್ದೇಶಿಸಿರುವ ವಿಮಾ ಸುಗಮ ವ್ಯವಸ್ಥೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಇದರ ಜೊತೆಗೆ ಭಾರತೀಯ ಜೀವ ವಿಮಾ ನಿಗಮ ಇಡೀ ದೇಶದ ಅರ್ಥ ವ್ಯವಸ್ಥೆಯ ಬೆನ್ನೆಲುಬು ಆಗಿದ್ದು ಸ್ವತಂತ್ರ ಪೂರ್ವದಿಂದ ಇಂದಿನವರೆಗೂ ನಮ್ಮ ಪಂಚವಾರ್ಷಿಕ ಯೋಜನೆಗಳಲ್ಲಿ ಶೇಕಡ 80 ರಷ್ಟು ಆರ್ಥಿಕ ಹೂಡಿಕೆಯನ್ನು ನೀಡುತ್ತಾ ಬಂದಿದೆ. ದೇಶದ ಖಾಸಗಿತನ ನೀತಿಯ ನಂತರವೂ ಕೂಡ ವಿಮಾ ರಂಗದಲ್ಲಿ  ಎಪ್ಪತ್ತರಷ್ಟು ಪಾಲನ್ನು ಹೊಂದಿರುವುದು ನಮ್ಮ ದೇಶದ ಹೆಮ್ಮೆಯ ಸಾರ್ವಜನಿಕ ಸಂಸ್ಥೆಯಾಗಿದೆ ಈ ಹೆಮ್ಮೆಯ ಸಂಸ್ಥೆಯಲ್ಲಿ ಕೋಟ್ಯಾಂತರ ಕುಟುಂಬಗಳಿಗೆ ಆರ್ಥಿಕ ನಷ್ಟವನ್ನು ಭರಿಸಿ ಅವುಗಳನ್ನು ರಕ್ಷಿಸಿದೆ

ಹಾಗೂ ಸುಮಾರು ಹದಿಮೂರು ಲಕ್ಷಕ್ಕೂ ಹೆಚ್ಚಿನ ಪ್ರತಿನಿಧಿಗಳು ಅದರ ಉದ್ಯೋಗದಿಂದ ತಮ್ಮ ಕುಟುಂಬಗಳನ್ನ ನಡೆಸುತ್ತಿದ್ದಾರೆ ಈ ರೀತಿಯ ಒಂದು ವಿಮಾ ಕಂಪನಿಯನ್ನು ಉಳಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಪ್ರಕಟಣೆ ಮೂಲಕ   ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!