ಜಿಲ್ಲಾಧಿಕಾರಿ ಹಂತದಲ್ಲಿಯೇ ಎಸ್ಸಿ-ಎಸ್ಟಿ ಭೂ ಪರಿವರ್ತನೆಗೆ ಗ್ರೀನ್ ಸಿಗ್ನಲ್

ಬೆಂಗಳೂರು ನ.5(ಉಡುಪಿ ಟೈಮ್ಸ್ ವರದಿ):ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾದ ಜಮೀನಿನಲ್ಲಿ 10 ಸೆಂಟ್ಸ್ / 4 ಗುಂಟೆ ಜಮೀನಿನಲ್ಲಿ ಸ್ವಂತ ವಾಸದ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲು ಸಲ್ಲಿಸುವ ಅರ್ಜಿಗಳನ್ನು ಜಿಲ್ಲಾಧಿಕಾರಿಯರ ಹಂತದಲ್ಲಿಯೇ ಪರಿಶೀಲಿಸಿ ಭೂ ಪರಿವರ್ತನೆ ಆದೇಶ ಹೊರಡಿಸಲು ಕ್ರಮವಹಿಸುವಂತೆ ಸರಕಾರ ಸೂಚನೆ ನೀಡಿದೆ.

ಈ ಬಗ್ಗೆ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ವಿಧಾನ ಸಭಾ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷರು ಕಂದಾಯ ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾದ ಜಮೀನುಗಳಲ್ಲಿ 10 ಸೆಂಟ್ಸ್ ಜಾಗವನ್ನು ಸ್ವಂತ ವಾಸದ ಹಾಗೂ ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನ ಮಾಡುವಾಗ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಯವರಿಗೆ ಅಥವಾ ತಹಶೀಲ್ದಾ‌ರವರಿಗೆ ಭೂ ಪರಿವರ್ತನೆ ಮಾಡಲು ಸರ್ಕಾರದ ಪೂರ್ವಾನುಮತಿ ಇಲ್ಲದೇ ಸಕ್ಷಮ ಪ್ರಾಧಿಕಾರವೆಂದು ಆದೇಶ ಹೊರಡಿಸಿದ್ದಲ್ಲಿ ತುಂಬಾ ಅನುಕೂಲವಾಗುತ್ತದೆ, ವಾಸ್ತವ್ಯ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ 10 ಸೆಂಟ್ಸ್ ಜಮೀನಿನ ಭೂ ಪರಿವರ್ತನೆಯ ಅಧಿಕಾರವನ್ನು ಜಿಲ್ಲಾಧಿಕಾರಿ ಅಥವಾ ತಹಶೀಲ್ದಾ‌ರವರಿಗೆ ನೀಡುವಲ್ಲಿ ಸೂಕ್ತ ಕ್ರಮವಹಿಸುವಂತೆ ಕೋರಿಕೊಂಡಿದ್ದರು. 

ಈ ಬಗ್ಗೆ ಆದೇಶ ಹೊರಡಿಸಿರುವ ಸರಕಾರ, ಇನ್ನು ಮುಂದೆ ಪಿಟಿಸಿಎಲ್ ಕಾಯ್ದೆಯ ವ್ಯಾಪ್ತಿಗೆ ಒಳಪಡುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾದ ಜಮೀನಿನಲ್ಲಿ 10 ಸೆಂಟ್ಸ್ / 4 ಗುಂಟೆ ಜಮೀನಿನಲ್ಲಿ ಸ್ವಂತ ವಾಸದ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲು ಕೋರಿ ಮಂಜೂರಿದಾರರು, ಅಥವಾ ವಾರಸುದಾರರು ಅರ್ಜಿಯನ್ನು ಸಲ್ಲಿಸಿದಲ್ಲಿ, ಅಂತಹ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಜಿಲ್ಲಾಧಿಕಾರಿಯರ ಹಂತದಲ್ಲಿಯೇ ಭೂ ಪರಿವರ್ತನೆ ಆದೇಶ ಹೊರಡಿಸಲು ಕ್ರಮವಹಿಸತಕ್ಕದ್ದು ಎಂದು ಸೂಚಿಸಲಾಗಿದೆ. ಹಾಗೂ ಸ್ವಂತ ವಾಸದ ಭೂ ಪರಿವರ್ತನೆ ಮಾಡಿದ ಆದೇಶದಲ್ಲಿ ಭೂ ಪರಿವರ್ತನೆಯಾದ ಜಮೀನನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡತಕ್ಕದ್ದಲ್ಲ ಎಂಬ ಷರತ್ತನ್ನು ವಿಧಿಸಲು ಸಹ ಸೂಚಿಸಿದೆ. ಆದರೆ ಅರ್ಜಿ ಸಲ್ಲಿಸಿದರು ಹೊಂದಿರುವ ಜಮೀನನ್ನು ಮಾರಾಟ ಮಾಡಲು ಸರ್ಕಾರದ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯತಕ್ಕದ್ದು, ಇದರಲ್ಲಿ ಲೋಪವೇನಾದರೂ ಕಂಡುಬಂದಲ್ಲಿ, ಸಂಬಂಧಪಟ್ಟ ಜಿಲ್ಲಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದೂ ಸೂಚಿಸಲಾಗಿದೆ.

ಈ ಹಿಂದೆ ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಂಜೂರಾದ ಜಮೀನುಗಳನ್ನು ಸರ್ಕಾರದ ಪೂರ್ವಾನುಮತಿ ಇಲ್ಲದೇ ಪರಭಾರೆ ಮಾಡಲು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಭೂಮಿಗಳ ಪರಭಾರೆ ನಿಷೇಧ) ಅಧಿನಿಯಮ, 1978 ರನ್ವಯ ನಿರ್ಬಂಧವನ್ನು ವಿಧಿಸಲಾಗಿತ್ತು.  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಭೂ ರಹಿತರಾಗುವುದನ್ನು ತಪ್ಪಿಸುವ ಧ್ಯೇಯೋದ್ದೇಶದಿಂದ  ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇದಕ್ಕೆ ಪೂರಕವಾಗಿ ಕಾಲದಿಂದ ಕಾಲಕ್ಕೆ ಉದ್ಭವವಾಗುವ ಸಮಸ್ಯೆಗಳನ್ನು ಮತ್ತು ಸೃಷ್ಟಿಕರಣಗಳನ್ನು ನಿವಾರಿಸಲು ಸರ್ಕಾರವು ಆಗಿಂದಾಗ್ಗೆ ಹಲವಾರು ಸುತ್ತೋಲೆಗಳನ್ನು ಹೊರಡಿಸಿರುತ್ತದೆ.

ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮುನ್ನಯ್ಯ ಹಾಗೂ ಇತರರು ರಾಜ್ಯ ಸರ್ಕಾರ ಮತ್ತು ಇತರರ ವಿರುದ್ಧ ದಾಖಲಿಸಿದ್ದ ರಿಟ್ ಅರ್ಜಿ ಸಂಖ್ಯೆ: 60483/2016 (ಎಸ್‌ಸಿ/ಎಸ್‌ಟಿ) ಪ್ರಕರಣದಲ್ಲಿ ಉಚ್ಚ ನ್ಯಾಯಾಲಯವು 2021 ರ ಜು.5 ರಂದು ನೀಡಿರುವ ನಿರ್ದೇಶನದ ಹಿನ್ನೆಲೆಯಲ್ಲಿ ಸರ್ಕಾರದಿಂದ ಅನುಮತಿ ಪಡೆಯದೇ ಭೂ ಪರಿವರ್ತನೆ ಮಾಡಿ ಮಾರಾಟ ಮಾಡುವ ಸಂಭವವಿರುವುದರಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರು ಭೂರಹಿತರಾಗುವ ಸಾಧ್ಯತೆಗಳು ಹೆಚ್ಚಾಗುವುದಲ್ಲದೇ ಪಿಟಿಸಿಎಲ್ ಕಾಯ್ದೆಯ ಮೂಲ ಉದ್ದೇಶವು ಸಫಲವಾಗುವುದಿಲ್ಲ. ಆದುದರಿಂದ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರು ಭೂರಹಿತರಾಗುವುದನ್ನು ತಡೆಯಲು ಹಾಗೂ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಭೂಮಿಗಳ ಪರಭಾರೆ ನಿಷೇಧ ಅಧಿನಿಯಮ 1978ರ ಧೈಯೋದ್ದೇಶಗಳನ್ನು ಗಂಭೀರವಾಗಿ ಪಾಲಿಸುವ ದೃಷ್ಟಿಯಿಂದ ಇನ್ನು ಮುಂದೆ ಪಿಟಿಸಿಎಲ್ ಕಾಯ್ದೆಯ ವ್ಯಾಪ್ತಿಗೆ ಒಳಪಡುವ ಜಮೀನುಗಳನ್ನು ಭೂಪರಿವರ್ತನೆ ಮಾಡುವ ಮೊದಲು ಸರ್ಕಾರದಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆದ ನಂತರವಷ್ಟೇ ಭೂ ಪರಿವರ್ತನೆ ಮಾಡತಕ್ಕದ್ದು ಎಂದು ಸೂಚಿಸಲಾಗಿತ್ತು. 

Leave a Reply

Your email address will not be published. Required fields are marked *

error: Content is protected !!