ಭೂತಾರಾಧನೆ ಸಮಯದಲ್ಲಿ ದೇವರು ಬರೋದು ಸತ್ಯ ಅಲ್ಲವೇ ಅಲ್ಲ- ಬಿ.ಟಿ.ಲಲಿತಾ ನಾಯ್ಕ್‌ ವಿವಾದಾತ್ಮಕ ಹೇಳಿಕೆ

ಹುಬ್ಬಳ್ಳಿ ನ.5 : ದೈವ ನರ್ತಕರಿಗೆ ಸರ್ಕಾರ ಎರಡು ಸಾವಿರ ರೂಪಾಯಿ ನೀಡಬಾರದಿತ್ತು. ಭೂತಾರಾಧನೆ ಸಮಯದಲ್ಲಿ ದೇವರು ಬರೋದು ಸತ್ಯ ಅಲ್ಲವೇ ಅಲ್ಲ ಎಂದು ವಿಚಾರವಾದಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ದೈವ ನರ್ತಕರ ಜೀವನಕ್ಕೆ ಬೇರೆ ದಾರಿ ತೋರಿಸಬೇಕು. ಅದರ ಬದಲಾಗಿ ಸರ್ಕಾರ ಮೂಢನಂಬಿಕೆಗೆ ಪ್ರಾಮುಖ್ಯತೆ ನೀಡಿದಂತಾಗಿದೆ. ದೈವ ನರ್ತಕರು ʻಓಹೋʼ ಅಂತ ಚಿರಾಡುವುದು, ಕುಣಿಯುವುದು ದೇವರು ಮೈಮೇಲೆ ಬರುವುದರಿಂದ ಅಲ್ಲ. ಅದಕ್ಕೆ ಬೇರೆ ಕಾರಣವಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ʻಕಾಂತಾರʼ ಚಿತ್ರದ ವಿವಾದ ಕುರಿತು ಮಾತನಾಡಿದ ಅವರು, ರಿಷಬ್ ಶೆಟ್ಟಿ ಪಕ್ಕಾ ವಿಚಾರವಾದಿ‌, ವೈಚಾರಿಕ ವ್ಯಕ್ತಿ. ಆದರೆ ತನ್ನ ವಿಚಾರವನ್ನು ನೇರವಾಗಿ ಹೇಳಿ ಹೊಡಿಸಿಕೊಳ್ಳಲು ಆತ ತಯಾರಿಲ್ಲ. ಸತ್ಯವನ್ನು ನೇರವಾಗಿ ಹೇಳಿದರೇ ಆತನನ್ನು ಕೊಂದ ಹಾಕುತ್ತಾರೆ, ಇದು ಆತನಿಗೆ ಬೇಕಿಲ್ಲ. ಆತ ಇನ್ನೂ ಬದುಕಬೇಕು ಅಂತ ಬಹಳಷ್ಟು ಬುದ್ದಿವಂತಿಕೆಯಿಂದ ಸಿನಿಮಾ ಮಾಡಿದ್ದಾನೆ. ಆತ ತನ್ನ ವಿಚಾರವನ್ನು ನೇರವಾಗಿ ಹೇಳಿದ್ರೆ ಈ ಮೂರ್ಖ ಜನರು ಆತನನ್ನು ಹಿಡಿದು ಹೊಡೆಯುತ್ತಾರೆ, ಪರದೆಗೆ ಬೆಂಕಿ ಹಚ್ಚುತ್ತಾರೆ. ಕೆಲವು ಜನರ ತಲೆ ಅಷ್ಟರಮಟ್ಟಿಗೆ ಕೆಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂತಾರ ಸಿನಿಮಾ ನೋಡಲು ಬಹಳಷ್ಟು ಬುದ್ಧಿವಂತಿಕೆ ಬೇಕು ಎಂದ ಅವರು, ʻಕಾಂತಾರʼ ಕಾಡಿನ ಜನರ ನೋವಿನ ಕಥೆ. ಅವರನ್ನು ಜಮೀನ್ದಾರಿ ಪದ್ಧತಿಯ ಮೂಲಕ ಒಕ್ಕಲೆಬ್ಬಿಸಲು ನೋಡಿದರು. ಅವರಿಗೆ ಬಹಳಷ್ಟು ಚಿತ್ರಹಿಂಸೆ ನೀಡಿದರು. ಹೀಗಾಗಿ ಅವರು ತಮ್ಮ ಉಳಿವಿಗಾಗಿ ಪೊಲೀಸರು ಮತ್ತು ಸರ್ಕಾರದ ಮೊರೆ ಹೋದರು. ಅವರಿಂದ ನ್ಯಾಯ ಸಿಗದೆ ಚಿರಾಡಿ, ಚಿರಾಡಿ ತಮ್ಮ ನೋವು ಹೊರಹಾಕಿದರು. ಅದನ್ನೇ ದೈವ ಅಂತ ನಂಬಲಾಗುತ್ತಿದೆ. ದೇಶದ ಬಾವುಟ… ಅದು ಕೇವಲ ಬಾವುಟ ಮಾತ್ರ. ಅದನ್ನು ಹರಿದು ಹಾಕಿದರು ಏನು ಆಗಲ್ಲ. ಆದರೆ ದೇಶದ ಜನರ ಕಾಪಾಡುತ್ತೆ ಎನ್ನುವ ಭಾವನೆ ಮುಖ್ಯ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!