ನಿನ್ನೆ ಮೊನ್ನೆ ಬಂದ ನಟರು ಡ್ರಗ್ಸ್‌ ಮಾಫಿಯಾಗೆ ಬ್ರಾಂಡ್ ಅಂಬಾಸಿಡರ್‌ಗಳು: ಇಂದ್ರಜಿತ್

ಬೆಂಗಳೂರು: ಮಾದಕ ಜಗತ್ತಿಗೂ ಚಂದನವನಕ್ಕೂ ನಂಟಿದೆ ಎಂಬ ಆರೋಪಕ್ಕೆ ತಮ್ಮ ಸಾಕ್ಷ್ಯಧಾರದಿಂದ ಮತ್ತಷ್ಟು ಪುಷ್ಟಿ ನೀಡಿರುವ ಇಂದ್ರಜಿತ್ ಲಂಕೇಶ್ ಅವರು, ಚಿರಂಜೀವಿ ಸರ್ಜಾ ಕುರಿತು ನೀಡಿದ್ದ ಹೇಳಿಕೆ ಹಿಂಪಡೆಯುವುದಾಗಿ ಸೋಮವಾರ ಹೇಳಿದ್ದಾರೆ.

ಇಂದು ನಗರದ ಚಾಮರಾಜಪೇಟೆಯಲ್ಲಿನ ಸಿಸಿಬಿ ಕಚೇರಿಯಲ್ಲಿ ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್ ಅವರು, ನೇರವಾಗಿ ಚಿರಂಜೀವಿ ಸರ್ಜಾ ಅವರ ಹೆಸರು ಹೇಳದೆ, ಡ್ರಗ್ಸ್ ಜಾಲಕ್ಕೆ ಸಂಬಂಧಿಸಿ ಇತ್ತೀಚಿಗೆ ಮೃತಪಟ್ಟ ಯುವ ನಟನ ಮರಣೋತ್ತರ ಪರೀಕ್ಷೆ ನಡೆಸಬೇಕಿತ್ತು ಎಂಬ ಹೇಳಿಕೆ ಹಿಂಪಡೆಯುವೆ ಎಂದಿದ್ದಾರೆ.

ಸಿಸಿಬಿ ಅಧಿಕಾರಿಗಳ ಜತೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದೇನೆ. ಅವರ ತನಿಖೆಗೆ ಬೇಕಾದ ಎಲ್ಲ ಮಾಹಿತಿಗಳನ್ನು ಕೊಟ್ಟಿದ್ದೇನೆ. ನಿನ್ನೆ ಮೊನ್ನೆ ಬಂದ ನಟರು ಡ್ರಗ್ಸ್‌ ಮಾಫಿಯಾಗೆ ಬ್ರಾಂಡ್ ಅಂಬಾಸಿಡರ್‌ಗಳು ಆಗಿದ್ದಾರೆ. ನಾನು ಇದುವರೆಗೂ ಹೇಳಿದ ಮಾತಿಗೆ ಬದ್ಧನಾಗಿದ್ದೇನೆ. ನನ್ನ ಬಳಿರುವ ಎಲ್ಲ ಮಾಹಿತಿಗಳನ್ನು ಅಧಿಕಾರಿಗಳಿಗೆ ನೀಡಿದ್ದೇನೆ. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಅವರ ತನಿಖೆಗೆ ಸಹಕಾರವಾಗುವಂತೆ ನನಗೆ ತಿಳಿದ ಎಲ್ಲ ಮಾಹಿತಿಗಳನ್ನು ಅವರಿಗೆ ಕೊಟ್ಟಿದ್ದೇನೆ ಎಂದು ಇಂದ್ರಜಿತ್ ತಿಳಿಸಿದ್ದಾರೆ.

‘ಯುವ ನಟರು, ಮಕ್ಕಳು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಡ್ರಗ್ಸ್‌ ಜಾಲ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇದರ ಕುರಿತಾಗಿ ಯುವಜನತೆಗೆ ಅರಿವು ಮೂಡಿಸಬೇಕು. ಅದಕ್ಕಾಗಿ ಏನು ಮಾಡಬೇಕೋ ಅದನ್ನು ಮಾಡಿದ್ದೇನೆ. ಆದರೆ, ಈಗ ಕೆಲವರ ಹೆಸರುಗಳನ್ನು ಹೇಳುವುದು ದೊಡ್ಡದಲ್ಲ. ಇದರಿಂದ ತನಿಖೆಗೆ ತೊಂದರೆ ಆಗಲಿದೆ. ಹೆಸರು ಹೇಳಿ ಅವರಿಗೆ ವೈಯಕ್ತಿಕವಾಗಿ ಹರ್ಟ್ ಮಾಡಬೇಕು ಅನ್ನೋ ಉದ್ದೇಶ ನನಗಿಲ್ಲ. ನಾನು ಯಾರಿಗೆ ತಲುಪಿಸಬೇಕೋ ಅವರಿಗೆ ಸಾಕ್ಷಿ ಸಮೇತ, ತಿಳಿಸಿದ್ದೇನೆ. ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೋ, ಅವರೆಲ್ಲರ ಹೆಸರನ್ನು ಅಧಿಕಾರಿಗಳಿಗೆ ನೀಡಿದ್ದೇನೆ. ಸುಮಾರು 10-15 ಜನರ ಹೆಸರು ಕೊಟ್ಟಿದ್ದೇನೆ. ಅಧಿಕಾರಿಗಳ ಬಳಿಯೂ ಒಂದಷ್ಟು ಮಾಹಿತಿ ಇತ್ತು. ಅವರು ಇದರಲ್ಲಿ ಯಶಸ್ಸು ಪಡೆಯಲಿದ್ದಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ.

ನಾನು ಏನೆಲ್ಲ ಮಾಹಿತಿಗಳನ್ನು, ಸಾಕ್ಷಿಗಳನ್ನು ನೀಡಿದ್ದೇನೆ ಎಂಬುದನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ಎಷ್ಟೇ ಪ್ರಯತ್ನಪಟ್ಟರು ಆ ಬಗ್ಗೆ ನಾನು ಮಾಧ್ಯಮಗಳಿಗೆ ಮಾಹಿತಿ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಇಂದ್ರಜಿತ್ ಸ್ಪಷ್ಟಪಡಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!